ಸಿಂಧನೂರು: ತಾಲ್ಲೂಕಿನ ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ 14ನೇ ಹಣಕಾಸು ಹಾಗೂ ಬಿಆರ್ಜಿಎಫ್ ಯೋಜನೆ ಅನುಷ್ಠಾನದಲ್ಲಿ ಸಾಕಷ್ಟು ಅವ್ಯವಹಾರ ನಡೆದಿದ್ದು, ಈ ಬಗ್ಗೆ ತನಿಖೆ ನಡೆಸಿ ಪಿಡಿಒಗಳ ವಿರುದ್ಧ ಶಿಸ್ತು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ತಾಲ್ಲೂಕು ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಶುಕ್ರವಾರ ತಾಲ್ಲೂಕು ಪಂಚಾಯಿತಿ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸಿದರು.
ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲಪ್ಪ ಎಸ್.ಗೋನಾಳ ಮಾತನಾಡಿ, ತಾಲ್ಲೂಕಿನ 36 ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು 14ನೇ ಹಣಕಾಸು ಯೋಜನೆಗೆ ಸಂಬಂಧಿಸಿದಂತೆ ಸರ್ಕಾರದ ಸುತ್ತೋಲೆ ಮತ್ತು ನಿಯಮಗಳನ್ನು ಪಾಲಿಸದೆ ಪ್ರಭಾವಿ ಗುತ್ತಿಗೆದಾರರಿಗೆ ಟೆಂಡರ್ಗಳನ್ನು ಹಂಚಿಕೆ ಮಾಡಿದ್ದಾರೆ. ಕಾಮಗಾರಿಗಳನ್ನು ಸರಿಯಾಗಿ ನಿರ್ವಹಿಸಿದಿದ್ದರೂ ಅವರಿಗೆ ಚೆಕ್ ಬರೆದುಕೊಟ್ಟು ಸರ್ಕಾರದ ಹಣ ಲೂಟಿ ಮಾಡಿದ್ದಾರೆ.
ಅಲ್ಲದೆ ವೈಯಕ್ತಿಕ ಫಲಾನುಭವಿಗಳ ಚೆಕ್ಗಳನ್ನು ಬರೆದುಕೊಂಡು ಮತ್ತು ಎಲೆಕ್ಟ್ರಾನಿಕ್ಸ್ ಅಂಗಡಿ ಮಾಲೀಕರಿಂದ ಹಣ ಪಡೆದು ಮಾಡದೇ ಇರುವ ಕಾಮಗಾರಿಗಳಿಗೆ ಬೋಗಸ್ ಬಿಲ್ ಪಾವತಿ ಮಾಡಿದ್ದಾರೆ. 2014–15, 2015–16ನೇ ಸಾಲಿನ ಬಿಆರ್ಜಿಎಫ್ ಯೋಜನೆಯಡಿ ಕ್ರಿಯಾಯೋಜನೆ ರೂಪಿಸಿ ತಮಗಿಷ್ಟ ಬಂದಂತೆ ಚೆಕ್ಗಳನ್ನು ಬರೆದುಕೊಂಡು ಹಣ ಎತ್ತುವಳಿ ಮಾಡಿರುವುದು ಕಂಡುಬಂದಿದೆ. ಕಾರಣ ಈ ಎರಡೂ ಯೋಜನೆಯಡಿ ನಡೆದಿರುವ ಅಪಾರ ಅವ್ಯವಹಾರವನ್ನು ತನಿಖೆ ನಡೆಸಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಧರಣಿಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ನಕ್ಕುಂದಿ, ಉಪಾಧ್ಯಕ್ಷ ಪಂಪಾಪತಿ ಹಂಚಿನಾಳ, ಪ್ರಧಾನ ಕಾರ್ಯದರ್ಶಿ ಬಸವರಾಜ ಬೂದಿವಾಳ, ಮುಖಂಡರಾದ ನೀಲಕಂಠಪ್ಪ, ಮಹಾದೇವಪ್ಪ, ಹುಚ್ಚಪ್ಪ, ಚೌಡಪ್ಪ, ವೆಂಕಟೇಶ, ಜಗದೀಶ, ಶರಣಪ್ಪ, ಬಿ.ಹುಲಗಪ್ಪ ಇದ್ದರು.