ಹೊಸಪೇಟೆ: ಅಪಘಾತ ಸಂಭವಿಸಿ ಟಿಪ್ಪರ್ ಚಕ್ರದಡಿ ಸಿಲುಕಿ, ಯುವಕ ನೊಬ್ಬ ಗಂಭೀರವಾಗಿ ಗಾಯಗೊಂಡಿ ರುವ ಘಟನೆ ನಗರ ಹೊರವಲಯದ ರಾಯರ ಕೆರೆ ಬಳಿ ಭಾನುವಾರ ಸಂಜೆ ನಡೆದಿದೆ.
ಯುವಕನನ್ನು ಕೊಪ್ಪಳ ಜಿಲ್ಲೆಯ ಮುನಿರಾಬಾದ್ನ ಮಹಮ್ಮದ್ ಸಲಾ ವುದ್ದೀನ್ (24) ಎಂದು ಗುರುತಿಸ ಲಾಗಿದೆ. ಸಲಾವುದ್ದೀನ್ ಸಂಜೆ 5.30ರ ಸುಮಾರಿಗೆ ಬೈಕ್ನಲ್ಲಿ ಮುನಿರಾಬಾದ್ ನಿಂದ ಹೊಸಪೇಟೆಗೆ ಬರುವಾಗ ಎದುರಿನಿಂದ ಬಂದ ಟಿಪ್ಪರ್ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಸಲಾವು ದ್ದೀನ್ ಹಾಗೂ ಆತನ ದ್ವಿಚಕ್ರ ವಾಹನ ಟಿಪ್ಪರ್ ಚಕ್ರದಡಿ ಸಿಲುಕಿಕೊಂಡಿದೆ. ಈ ವೇಳೆ ಸಲಾವುದ್ದೀನ್ ರಕ್ತಸಿಕ್ತನಾಗಿ ಚಕ್ರದಡಿ ಬಿದ್ದಿದ್ದ. ಕೂಡಲೇ ಆತನಿಗೆ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥ ಮಿಕ ಚಿಕಿತ್ಸೆ ನೀಡಲಾಯಿತು. ಬಳಿಕ ಆತನನ್ನು ಬಳ್ಳಾರಿ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ವಿಮ್ಸ್) ಕಳುಹಿಸಿ, ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಂಚಾರ ಪೊಲೀಸ್ ಇನ್ಸ್ಪೆಕ್ಟರ್ ರಾಧಾಕೃಷ್ಣ ‘ಪ್ರಜಾವಾಣಿ’ಗೆ ತಿಳಿಸಿದರು.
ಈ ಸಂಬಂಧ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರಗಳ್ಳನಿಗೆ ಥಳಿತ
ಬಳ್ಳಾರಿ: ಮಹಿಳೆ ಕೊರಳಲ್ಲಿನ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾ ಗುವ ಕಳ್ಳನನ್ನು ಸಾರ್ವಜನಿಕರು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ನಗರದಲ್ಲಿ ಶನಿವಾರ ತಡರಾತ್ರಿ ನಡೆದಿದೆ.
ನಗರದ ಅಂತಾಪುರ ಕಾಲೊನಿಯ ಪುಲ್ಲಯ್ಯ ಲೇಔಟ್ ನಿವಾಸಿ ಸೌಮ್ಯಲಕ್ಷ್ಮಿ ಸರ ಕಳೆದುಕೊಂಡವರು. ತಾಳೂರು ರಸ್ತೆಯ ನಿವಾಸಿ ಪ್ರದೀಪ ಈಗ ಪೊಲೀಸರ ಅತಿಥಿ. ಮದುವೆ ಆಮಂತ್ರಣ ಪತ್ರಿಕೆ ನೀಡುವ ನೆಪದಲ್ಲಿ ಬಂದ ಆತನು, ಮನೆಯ ಕಾಲಿಂಗ್ ಬೆಲ್ ಗುಂಡಿಯನ್ನು ಒತ್ತಿದ್ದಾನೆ. ಮನೆಯ ಒಳಗಿದ್ದ ಮಹಿಳೆಯು ಯಾರು? ಎಂದು ಕೇಳಿದ್ದಾರೆ.
ಮದುವೆ ಆಮಂತ್ರಣ ನೀಡುವ ಕುರಿತು ವಿಚಾರ ಪ್ರಸ್ತಾಪಿಸಿ ದ್ದಾನೆ. ಮನೆಯ ಬಾಗಿಲು ತೆರೆದ ಬಳಿಕ ಏಕಾಏಕಿ ಆಕೆಯ ಕೊರಳಲ್ಲಿನ ಚಿನ್ನದ ಸರವನ್ನು ಕಿತ್ತುಕೊಂಡಾಗ, ಮಹಿಳೆ ಚಿರಾಡಿದ ಪರಿಣಾಮ ಸುತ್ತಮುತ್ತಲಿನ ಸಾರ್ವಜನಿಕರು ಆತನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ ಅಂದಾಜು ₹ 75,000 ಮೌಲ್ಯ ಬೆಲೆ ಬಾಳುವ ಚಿನ್ನದ ಸರವನ್ನು ವಶಕ್ಕೆ ಪಡೆದಿ ದ್ದಾರೆ. ಈ ಕುರಿತು ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗದು ಕಳವು
ಬಳ್ಳಾರಿ: ಮನೆಯ ಕಿಡಕಿ ಬಾಗಿಲು ಮುರಿದು ಒಳನುಗ್ಗಿದ ದುರ್ಷ್ಕಮಿಗಳು ತಿಜೋರಿಯಲ್ಲಿದ್ದ ಅಂದಾಜು ₹ 1.20 ಲಕ್ಷ ನಗದು ಹಾಗೂ ಬೆಳ್ಳಿ ಸಾಮಗ್ರಿ ದೋಚಿರುವ ಘಟನೆ ನಗರದ ಮೋಕಾ ರಸ್ತೆಯಲ್ಲಿ ಶನಿವಾರ ನಡೆದಿದೆ.
ಇಲ್ಲಿನ ಮೋಕಾ ರಸ್ತೆಯ ನಿವಾಸಿ ವಿಜಯಕುಮಾರ್ ಚೆಲ್ಲೂರ್ ನಗದು ಹಣ ಕಳೆದುಕೊಂಡವರು. ಕುಟುಂಬಸ್ಥ ರೆಲ್ಲರೂ ಮನೆಯಲ್ಲಿ ಮಲಗಿರುವಾಗ ಕೃತ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಮಿಕ ಸಾವು
ಬಳ್ಳಾರಿ: ಇಲಿ ಪಾಷಾಣ ಸೇವಿಸಿ, ತೀವ್ರ ಅಸ್ವಸ್ಥರಾಗಿದ್ದ ಕೂಲಿ ಕಾರ್ಮಿಕ ಚಿಕಿತ್ಸೆಗೆ ಸ್ಪಂದಿಸದೆ ‘ವಿಮ್ಸ್’ನಲ್ಲಿ ಭಾನುವಾರ ಬೆಳಿಗ್ಗೆ ಮೃತಪಟ್ಟರು.
ನಗರದ ಸಂಜೀವರಾಯನ ಕೋಟೆ ಪ್ರದೇಶದ ನಿವಾಸಿ ಪರಮೇಶ್ವರಪ್ಪ ಕುರುಬರ (48) ಮೃತ ವ್ಯಕ್ತಿ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟ್ರ್ಯಾಕ್ಟರ್ ಡಿಕ್ಕಿ ಬಾಲಕ ಸಾವು
ಕುಡತಿನಿ(ಕುರುಗೋಡು): ಟ್ರ್ಯಾಕ್ಟರ್ ಡಿಕ್ಕಿಹೊಡೆದ ಪರಿಣಾಮ ಬಾಲಕನೊಬ್ಬ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಇಲ್ಲಿಗೆ ಸಮೀಪದ ಸಿದ್ದಮ್ಮನಹಳ್ಳಿ ಗ್ರಾಮದ 9ನೇ ನಂಬರ್ ಕಾಲುವೆ ಬಳಿ ಭಾನು ವಾರ ಜರುಗಿದೆ.
ಸಿಂಧನೂರು ತಾಲ್ಲೂಕು ಚಲ್ಲೂರು ಗ್ರಾಮದ ದರ್ಶನ್ (11) ಮೃತ ಬಾಲಕ.
ತಾತ ವೆಂಕಪ್ಪನೊಂದಿಗೆ ಕೂಲಿ ಕೆಲಸಕ್ಕೆ ಬಂದಿದ್ದ ಬಾಲಕ ಗಿಡದ ಕೆಳಗೆ ಕುಳಿತು ವಿಶ್ರಾಂತಿ ಪಡೆಯುತ್ತಿದ್ದ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಈ ಘಟನೆ ಸಂಭವಿಸಿದೆ. ಚಾಲಕ ಬಂಡಯ್ಯ ಟ್ರ್ಯಾಕ್ಟರ್ ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಸಿಪಿಐ ಎಂ. ಶ್ರೀನಿವಾಸ ಮತ್ತು ಪಿಎಸ್ಐ. ವಾಸು ಕುಮಾರ್ ಘಟನಾ ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದರು.
ಟ್ರ್ಯಾಕ್ಟರ್ ವಶಪಡಿಸಿಕೊಂಡಿರುವ ಕುಡತಿನಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
**
ಬಿಸಿ ಎಣ್ಣೆ ಬ್ಯಾರಲ್ ಬಿದ್ದು 5 ಕಾರ್ಮಿಕರಿಗೆ ಗಾಯ
ಸಂಡೂರು: ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆಯಲ್ಲಿ ಬ್ಯಾರಲ್ನಲ್ಲಿ ಇದ್ದ ಬಿಸಿ ಎಣ್ಣೆ ಮೈಮೇಲೆ ಬಿದ್ದ ಪರಿಣಾಮ ಐವರು ಕಾರ್ಮಿಕರು ಗಾಯಗೊಂಡಿರುವ ಘಟನೆ ತಾಲ್ಲೂಕಿನ ಸುಲ್ತಾನಪುರದಲ್ಲಿನ ಪೈಪ್ಟೆಕ್ ಎಂಜಿನಿಯರಿಂಗ್ ಕಾರ್ಖಾನೆಯಲ್ಲಿ ಭಾನುವಾರ ನಡೆದಿದೆ.
ಘಟನೆಯಲ್ಲಿ ಗಾಯಗೊಂಡ ಕಾರ್ಮಿಕರನ್ನು ಲೋಕನಾಥ್, ದಿನೇಶ್, ಕನ್ನಬಾಬು, ಪ್ರಕಾಶ್ ಹಾಗೂ ಸುರೇಶ್ ಎಂದು ಗುರುತಿಸಲಾಗಿದೆ.
ಇವರಲ್ಲಿ ಹೆಚ್ಚಿನ ಪ್ರಮಾಣದ ಗಾಯಗಳಾಗಿದ್ದ ನಾಲ್ವರಿಗೆ ತೋರಣಗಲ್ನ ಸಂಜೀವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಸೆಂಟ್ ಜಾನ್ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದ್ದು, ಮತ್ತೊಬ್ಬ ಕಾರ್ಮಿಕ ಸಂಜೀವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.