ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಂಟೆಸ್ಸರಿ: ಮಕ್ಕಳ ಸ್ವತಂತ್ರ ವಿಶ್ವವಿದ್ಯಾಲಯ

Last Updated 5 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಇನ್ನೇನು ಪರೀಕ್ಷೆ-ರಜೆಗಳು ಮುಗಿದ ಕೂಡಲೇ ಹೊಸ ಶೈಕ್ಷಣಿಕ ವರ್ಷ ತೊಡಗುತ್ತದೆ. ಮುಂದಿನ ತರಗತಿಗೆ ಹೋಗುವ ಮಕ್ಕಳ ಜೊತೆಗೆ ನಮ್ಮ ಮನೆಯ ಪುಟ್ಟ ಕಣ್ಮಣಿಯನ್ನು ಯಾವ ಶಾಲೆಗೆ ಸೇರಿಸಬೇಕು? ಯಾವ ಶಾಲೆಗೆ ಸೇರಿಸಿದರೆ ಅದರ ಪುರೋಭಿವೃದ್ಧಿಯಾಗುತ್ತದೆ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇದು ಸಂಭ್ರಮದ ವಿಷಯವಾದರೂ ಇಂದು ಸಾಂಪ್ರದಾಯಿಕ, ಅಸಾಂಪ್ರದಾಯಿಕ ನೆಲೆಗಳಲ್ಲಿ ಹತ್ತಾರು ಶಿಕ್ಷಣ ಪದ್ಧತಿಗಳು ಚಾಲ್ತಿಯಲ್ಲಿರುವಾಗ ಯಾವ ಶಾಲೆ ಎಂಬುದರ ಜೊತೆ ಜೊತೆಗೆ ಯಾವ ಶಿಕ್ಷಣಪದ್ಧತಿಯ ಶಾಲೆ ಎಂಬ ಪ್ರಶ್ನೆಯೂ ತಲೆಯೆತ್ತಿ ಇಂದಿನ ವಿಭಕ್ತ, ‘ಒಂದೇ ಮಗು’ ಕುಟುಂಬಗಳಲ್ಲಿ ಆತಂಕ, ತಲ್ಲಣಗಳನ್ನು ಸೃಷ್ಟಿಸಿರುವುದು ಸುಳ್ಳಲ್ಲ.

ಇಂದು ಶಿಕ್ಷಣಪದ್ಧತಿಗಳಲ್ಲಿ, ಶಿಕ್ಷಣದ ಸಿದ್ಧಾಂತಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಪ್ರಾಯಃ ಇಂದು ಶಿಕ್ಷಣಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರಯೋಗಗಳು ಬೇರಾವ ಕ್ಷೇತ್ರದಲ್ಲಿಯೂ ನಡೆಯುತ್ತಿಲ್ಲವೇನೋ?  ‘ನಮ್ಮ ಮಕ್ಕಳನ್ನು ಯಾವ ಶಾಲೆಗೆ ಸೇರಿಸಿದರೆ ಅವರ ಏಳಿಗೆಗೆ ಸುಲಭ?’ ಎಂಬ ಪೋಷಕರ ಚಿಂತೆಯಷ್ಟೇ ಪ್ರಾಮಾಣಿಕವಾಗಿ ಮಕ್ಕಳಿಗೆ ಯಾವ ವಿಧಾನದಲ್ಲಿ ಕಲಿಸಬೇಕು? ಎಂಬ ಚರ್ಚೆ, ಪ್ರಯೋಗ ಖಾಸಗಿ ನೆಲೆಯಲ್ಲಿ ನಡೆಯುತ್ತಿವೆ.  ಅಂದರೆ, ಸರ್ಕಾರದ ನೆಲೆಯಲ್ಲಿ ಏನೂ ಇಲ್ಲ ಎಂದಲ್ಲ. ಕಲಿ, ನಲಿಯಂತಹ ಕಾರ್ಯಕ್ರಮ ಇಂತಹ ಚಿಂತನೆಗಳಿಂದಲೇ ಮೂಡಿಬಂದಿರುವುದು. ಹಾಗೆಯೇ ಸಿ.ಸಿ.ಇ., ಎಫ್‍. ಎ. ಇತ್ಯಾದಿ ತಂತ್ರಗಳೂ ಸಹ. ಇವೆಲ್ಲವೂ ‘ಸಿದ್ಧಾಂತ’ದಲ್ಲಿರುವಂತೆಯೇ ನಡೆದರೆ ನಮ್ಮ ಮಕ್ಕಳಿಗೆ ಭವ್ಯ ಭವಿಷ್ಯವಿದೆ.

ನಮ್ಮಲ್ಲಿ ಗುರುಕುಲ ಪದ್ಧತಿ ಎಂದು ಹೇಳುವ ಶಾಲೆಗಳಿವೆ, ಓಪನ್‍ ಮಾದರಿ ಶಾಲೆಗಳು ಇಂದು ಹೆಚ್ಚಾಗಿವೆ. ಈ ಎರಡೂ ಗುಂಪಿಗೆ ಶಿಷ್ಟವಾಗಿ ಸೇರದ ತಮ್ಮದೇ ಸೈದ್ಧಾಂತಿಕ ನೆಲೆಗಳಲ್ಲಿ ನಡೆಸಲಾಗುತ್ತಿರುವ ಹಲವಾರು ಶಾಲೆಗಳಿವೆ. ಈ ಬಗೆಯ ಶಾಲೆಗಳಲ್ಲಿ ವಿಶೇಷ ಕಾರ್ಯಗಳು ನಡೆಯುತ್ತಿವೆ ಎಂಬುದೂ ಸತ್ಯ. ಈ ಎಲ್ಲದರ ನಡುವೆ ನಮ್ಮ ಮಗುವನ್ನು ಯಾವ ಶಾಲೆಗೆ ಸೇರಿಸಬೇಕು! ಎಂಬುದು ಈ ಆಯ್ಕೆಗಳ ನಡುವೆ ಒಂದು ಕ್ಲಿಷ್ಟ ಪ್ರಶ್ನೆಯಾಗಿಯೇ ಉಳಿಯುತ್ತದೆ.

ಇವುಗಳ ನಡುವೆ ಒಂದು ಶತಮಾನಕ್ಕಿಂತಲೂ ಹೆಚ್ಚಿನ ಇತಿಹಾಸವಿರುವ ಮಾಂಟೆಸ್ಸರಿ ಎಂಬ ಪದ್ಧತಿ ಅದ್ಭುತ ಯಶಸ್ಸನ್ನು ಕಂಡಿದೆ. ಮಕ್ಕಳನ್ನು ಶಾಲೆಗೆ ಸೇರಿಸುವ ಸಂದರ್ಭದಲ್ಲಿ ಈ ಮಾಂಟೆಸ್ಸರಿ ಪದ್ಧತಿಯ ಶಾಲೆಗಳನ್ನು ಕುರಿತಾಗಿ ಯೋಚಿಸುವುದು ಒಳ್ಳೆಯದು. ಇಂದು ಸಣ್ಣಪುಟ್ಟ ನಗರಗಳಲ್ಲಿಯೂ ಸಹ ಮಾಂಟೆಸ್ಸರಿ ಶಾಲೆ ಎಂಬ ಫಲಕವನ್ನು ಕಾಣಬಹುದಾಗಿದೆ. ಇಲ್ಲಿನ ಪದ್ಧತಿ ಸಾಂಪ್ರದಾಯಿಕ ಶಾಲೆಯಲ್ಲಿನ ಒಂದು ತರಗತಿಯಲ್ಲಿ ಒಬ್ಬ ಶಿಕ್ಷಕ 30–40ವಿದ್ಯಾರ್ಥಿಗಳಿಗೆ ಪಾಠ ಹೇಳುವ ಪದ್ಧತಿಗಿಂತ ತುಂಬ ವಿಭಿನ್ನ, ವಿಶಿಷ್ಟ ಮತ್ತು ಕಲಿಕಾ ಸಾಮಗ್ರಿಯಾಧಾರಿತ.


ಏನಿದು ಮಾಂಟೆಸ್ಸರಿ ಪದ್ಧತಿ?
ಸಾಂಪ್ರದಾಯಿಕ ಪದ್ಧತಿಗಳಲ್ಲಿನ ಹಲವಾರು ನ್ಯೂನತೆಗಳನ್ನು, ವೈಫಲ್ಯಗಳನ್ನು ಕಂಡು ಮಕ್ಕಳಿಗೆ ಒಳ್ಳೆಯ ಕಲಿಕೆಯ ವಾತಾವರಣದ ಅಗತ್ಯವನ್ನು ಮನಗಂಡು ಇಟಲಿಯ ವೈದ್ಯೆ ಡಾ. ಮಾರಿಯ ಮಾಂಟೆಸ್ಸರಿ (1870 -1952) ನಿರೂಪಿಸಿದ ಶಿಕ್ಷಣಪದ್ಧತಿಯೇ ಮಾಂಟೆಸ್ಸರಿ ಪದ್ಧತಿ. ಈ ಪದ್ಧತಿಯಲ್ಲಿ ಇಂದು ಪ್ರಾಥಮಿಕ ಶಿಕ್ಷಣ ನಡೆಯುತ್ತಿದೆ. ಈ ಪದ್ಧತಿಯಲ್ಲಿ ಉನ್ನತ ಶಿಕ್ಷಣವೂ ಸಾಧ್ಯ. ಆದರೆ ಅವು ಇನ್ನು ಇಲ್ಲಿ ಅಷ್ಟಾಗಿ ತೊಡಗಿಲ್ಲ. ಆದರೆ ಆ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಿವೆ. ಮಕ್ಕಳಲ್ಲಿ ಹುದುಗಿರುವ ಸುಪ್ತ ಸಾಮರ್ಥ್ಯವನ್ನು, ಕೌಶಲವನ್ನು ಹೊರತೆಗೆದು ಅವರು ಸಾಂಘಿಕವಾಗಿ ಪ್ರಯತ್ನಿಸುವುದನ್ನು ಕಲಿಸುವಲ್ಲಿ ಈ ಪದ್ಧತಿ ಯಶಸ್ವಿಯಾಗಿದೆ.

ಮಕ್ಕಳನ್ನು ಅವರ ವಯಸ್ಸಿಗನುಗುಣವಾಗಿ ಮೂರು (ಅಥವಾ ನಾಲ್ಕು) ಗುಂಪುಗಳನ್ನಾಗಿ ವಿಭಜಿಸಿ,  ಕಲಿಕೆಗಾಗಿಯೇ ವಿಶಿಷ್ಟವಾಗಿ ನಿರ್ಮಿಸಲಾದ ಪರಿಕರಗಳ ನೆರವಿನಿಂದ ಕಲಿಸಲಾಗುತ್ತದೆ. ಹಾಗೆ ನೋಡಿದರೆ ‘ಕಲಿಸಲಾಗುತ್ತದೆ’ ಎಂಬ ಪದಪ್ರಯೋಗವೇ ತಪ್ಪು! ಮಕ್ಕಳು ತಂತಾವೆ ಕಲಿಯುವ ‘ಪರಿಸರ’ವನ್ನು ನಿರ್ಮಿಸಲಾಗುತ್ತದೆ ಎಂಬುದು ಸರಿಯಾದ ವಿವರಣೆ! ಮಕ್ಕಳ ಸ್ವಂತಕಲಿಕಾ ಸಾಮರ್ಥ್ಯದ ಸೂಕ್ತ ಪರಿಗಣನೆ, ತರಬೇತಿ ಹೊಂದಿದ ಶಿಕ್ಷಕರು ಮತ್ತು ಕಲಿಕಾ ಪರಿಸರ ಸೃಷ್ಟಿಸುವ ಪರಿಕರಗಳು ಈ ಮೂರನ್ನು ಮಾಂಟೆಸ್ಸರಿ ಪದ್ಧತಿಯ ಜೀವಾಳ ಎನ್ನಬಹುದು. ಅಂದಹಾಗೆ, ಮಕ್ಕಳನ್ನು ಇಲ್ಲಿ ಗೌರವಿಸಲಾಗುತ್ತದೆ ಮತ್ತು ಒಂದು ಹಂತದವರೆಗೂ ಪುಸ್ತಕಗಳೇ ಇರುವುದಿಲ್ಲ! ಬರೆಯುವ, ಬಾಯಿಪಾಠ, ಹೋಂ ವರ್ಕ್ ಎಂಬ ಭೂತಗಳ ಮೆರವಣಿಗೆಯೂ ಇರುವುದಿಲ್ಲ! ಇಲ್ಲಿ ಭಾಷೆ, ವಿಜ್ಞಾನದ ವಿಭಾಗಳು, ಗಣಿತ – ಒಟ್ಟಾರೆ ಜ್ಞಾನದ ಪ್ರತಿ ಶಾಖೆಯನ್ನು ಕಲಿಸಲು ವಿಶಿಷ್ಟ ಪದ್ಧತಿಗಳಿವೆ, ಪರಿಕರಗಳಿವೆ.

ಇಲ್ಲಿನ ಪರಿಸರದಿಂದಾಗಿ ಶಿಸ್ತು, ನಾಯತ್ವದ ಗುಣ, ತನ್ನ ಕಾರ್ಯಗಳನ್ನು ತಾನೇ ಮಾಡಿಕೊಳ್ಳುವುದು ಇವೆಲ್ಲವನ್ನು ಮಗು ಸಹಜವಾಗಿ ಕಲಿಯುತ್ತದೆ. ಈ ಪದ್ಧತಿಯಲ್ಲಿ ಶಿಸ್ತು ಎಂದರೆ ಸಾಂಪ್ರದಾಯಿಕ ಶಾಲೆಯ ‘ಕೈಕಟ್‍, ಬಾಯ್ಮೇಲ್‍ಬೆಟ್‍’ ಶಿಸ್ತಲ್ಲ! ತನ್ನ ಜವಾಬ್ದಾರಿಯರಿತ, ತನ್ನಷ್ಟಕ್ಕೆ ತಾನು ಒಡಾಡುತ್ತ ತನಗೆ ಬೇಕಾದ್ದನ್ನು ಕಲಿಯುವ, ಹಾಗೆ ಕಲಿಯಲು ಸಹಪಾಠಿಗಳೊಂದಿಗೆ ಚರ್ಚಿಸುವ ಶಿಸ್ತು. ಒಟ್ಟಾರೆ, ಮಗು ಇಲ್ಲಿ ಪರೀಕ್ಷೆಗೆ ಅಥವಾ ಶಾಲೆಗೆ ಸಿದ್ಧವಾಗುವ ಬದಲು ಸಮಾಜಕ್ಕೆ, ಜೀವನಕ್ಕೆ ಸಿದ್ಧವಾಗುತ್ತದೆ. ಇದು ಮಾಂಟೆಸ್ಸರಿ ಪದ್ಧತಿಯ ಪ್ರಧಾನಾಂಶ. ಇಲ್ಲಿ ಮಕ್ಕಳಿಗೆ ಎಲ್ಲ ಸ್ವಾತಂತ್ರ್ಯ ನೀಡಿ ಅವರ ಚಟುವಟಿಕೆಯನ್ನು ಗಮನಿಸಲಾಗುತ್ತದೆ (ನಿಗಾ ಇಡಲಾಗುವುದಿಲ್ಲ). ಈ ಪದ್ಧತಿಯ ಶಿಕ್ಷಕರು ಕಲಿಕಾ ಸಹಾಯಕರೇ ಹೊರತು ಪಾಠ ‘ಹೇಳಿಕೊಡುವ’ ಶಿಕ್ಷಕರಲ್ಲ.
ಇಂತಹ ಶಿಸ್ತನ್ನು ಕುರಿತಾಗಿ ಮಾಂಟೆಸ್ಸರಿ ಹೀಗೆ ಹೇಳಿದ್ದಾರೆ: ‘…(ಮಕ್ಕಳನ್ನು) ಗಮನಿಸುವ ಸೈದ್ಧಾಂತಿಕ ನೆಲೆ ಮಗುವಿನ ಸ್ವಾತಂತ್ರ್ಯದ ಮೇಲೆ ಆಧಾರಿತವಾಗಿದೆ.’ ಅಂತಹ ಸ್ವಾತಂತ್ರ್ಯವೇ ಚಟುವಟಿಕೆ. ಸ್ವಾತಂತ್ರ್ಯದಿಂದ  ಶಿಸ್ತು ಬರಬೇಕು ಎನ್ನುವುದೇ ಇಲ್ಲಿನ ದೊಡ್ಡ ಆದರ್ಶ–ಜೀವಾಳ ಎನ್ನಬಹುದು.’

ಸಾಂಪ್ರದಾಯಿಕ ಶಾಲಾಶಿಕ್ಷಕರಿಗೆ ಇದನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗಬಹುದು. ತರಗತಿಯಲ್ಲಿ ಓಡಾಡುತ್ತಿರುವ ಮಕ್ಕಳ ಗುಂಪಿನಲ್ಲಿ ಶಿಸ್ತು ಎಲ್ಲಿನದು ಎನಿಸಬಹುದು. ಆದರೆ ನಮ್ಮ ಪದ್ಧತಿಯಲ್ಲಿ ಶಿಸ್ತು ಎಂಬುದು ಸಿದ್ಧಪದ್ಧತಿಗಳಲ್ಲಿನ ಶಿಸ್ತಿಗಿಂತ ಭಿನ್ನ. ಶಿಸ್ತು ಸ್ವಾತಂತ್ರ್ಯದ ಮೇಲೆ ನಿಂತಿದ್ದೇ ಆದರೆ ಆ ಶಿಸ್ತು ಚಟುವಟಿಕೆ ಎಂಬುದೇ ಆಗಿರಬೇಕು. ಜೀವನದ ನೀತಿ–ನಿಯಮಗಳನ್ನು ಅನುಸರಿಸುವ, ತನ್ನ ನಡವಳಿಕೆಯನ್ನು ನಿಯಂತ್ರಿಸಿಕೊಳ್ಳಬಲ್ಲ ಮತ್ತು ತನ್ನ ನಾಯಕನೂ ತಾನೇ ಆಗಿರುವ ವ್ಯಕ್ತಿಯನ್ನು ನಾವು ಶಿಸ್ತುಬದ್ಧ ಮನುಷ್ಯ ಎನ್ನುತ್ತೇವೆ. ಇಂತಹ ಮಾರ್ಗದಲ್ಲಿ ವಿದ್ಯಾರ್ಥಿಯನ್ನು ಮುನ್ನಡೆಸಲು, ಅವು ನಿರಂತರವಾಗಿ ಪೂರ್ಣ ಸ್ವಯಂನಿಯಂತ್ರಣವನ್ನು ಸಾಧಿಸಲು ಸಹಾಯಮಾಡಲು ಶಿಕ್ಷಕರಿಗೆ ಯುಕ್ತ ತಂತ್ರಗಳ ತಿಳಿವಳಿಕೆ ಅವಶ್ಯ. ಇಲ್ಲಿ ಮಗುವಿನ ಗುಣ ಅಥವಾ ಶೀಲ ಶಾಲೆಗೆ ಸೀಮಿತವಾಗದೆ ಸಮುದಾಯಕ್ಕೆ, ಸಮಾಜಕ್ಕೆ ವಿಸ್ತಾರಗೊಳ್ಳುತ್ತದೆ.

ಈ ಕಾರಣಗಳಿಂದ ಮಾಂಟೆಸ್ಸರಿ ಶಿಕ್ಷಣ ಅತ್ಯುತ್ತಮ ಶಿಕ್ಷಣ ವಿಧಾನಗಳಲ್ಲೊಂದು. ಮಾಂಟೆಸ್ಸರಿ ಪದ್ಧತಿ ಯಶಸ್ವಿಯಾಗಬೇಕಾದರೆ ಎರಡು ವಿಷಯಗಳು ಅತಿಮುಖ್ಯ ಒಂದು: ಆ ಶಿಕ್ಷಕರಿಗೆ ಈ ಪದ್ಧತಿಯಲ್ಲಿ ಯುಕ್ತ ತರಬೇತಿಯಿರಬೇಕು. ಇದಿಲ್ಲದೆ ಏನೂ ಸಾಧ್ಯವಿಲ್ಲ. ಎರಡು: ಕಲಿಕಾ ಪರಿಕರಗಳು. ‘ನಮ್ಮಲ್ಲಿ ಬೋರ್ಡು ಮಾತ್ರ ಮಾಂಟೆಸ್ಸರಿ’ ಎಂದಿರುವ ಶಾಲೆಗಳೂ ಇವೆ! ಹಾಗಾಗಿ, ಪೋಷಕರು, ಆ ಶಿಕ್ಷಕರಿಗೆ ಮಾಂಟೆಸ್ಸರಿ ತರಬೇತಿಯಾಗಿದೆಯೇ? ಶಾಲೆಗಳಲ್ಲಿ ಅವಶ್ಯಕ ಪರಿಕರಗಳಿವೆ ಎಂದು ಖಾತ್ರಿಪಡಿಸಿಕೊಂಡು ಪೋಷಕರು ಮುಂದುವರೆಯಬೇಕು.

ಯುಕ್ತ ತರಬೇತಿಯುಳ್ಳ ಶಿಕ್ಷಕರು, ಕಲಿಕಾ ಪರಿಸರವನ್ನು ಸಾರ್ಥಕಗೊಳಿಸುವ ಪರಿಕರಗಳು ಲಭ್ಯವಾದರೆ ಈ ಪದ್ಧತಿಯಿಂದ ಸ್ವರ್ಗವನ್ನು ಧರೆಗಿಳಿಸಬಹುದು.  ಈ ಪದ್ಧತಿಯಲ್ಲಿ ಕೆಲವು  ಲೋಪಗಳಿವೆ; ಆದರೆ ಅವು ಸರಿಪಡಿಸಿಕೊಳ್ಳಬಹುದಾದ ಲೋಪಗಳು. ಅವೇನೇ ಇರಲಿ, ನಮ್ಮ ಮಕ್ಕಳಿಗೆ ಅವರಲ್ಲಿನ ಸುಪ್ತ ಶಕ್ತಿಯನ್ನು, ಪ್ರತಿಭೆಯನ್ನು ಹೊರತರುವಲ್ಲಿ ಮಾಂಟೆಸ್ಸರಿ ಪದ್ಧತಿ ಯಶಸ್ವಿಯಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.
ಕಲ್ಗುಂಡಿ ನವೀನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT