ಬೆಂಗಳೂರು: ಏಷ್ಯಾದಲ್ಲಿಯೇ ಅತಿ ದೊಡ್ಡ ಕೈಗಾರಿಕಾ ಪ್ರದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಅಂತರ್ಜಲ ಸಮೀಕ್ಷೆಗಳು ನಡೆಯುತ್ತಿವೆಯೇ ಹೊರತು ವಿಷಯುಕ್ತ ನೀರಿಗೆ ಪರಿಹಾರ ಮಾತ್ರ ದೊರೆತಿಲ್ಲ.
ಈಗ ಹೈದರಾಬಾದ್ನ ಎನ್ಜಿಆರ್ಐ (ನ್ಯಾಷನಲ್ ಜಿಯೊಫಿಸಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್) ಸಂಸ್ಥೆ ಸಮೀಕ್ಷೆ ಕೈಗೊಂಡಿದೆ. ಮುಂಗಾರು ಪೂರ್ವ ಹಾಗೂ ನಂತರ ಹೀಗೆ ಎರಡು ಹಂತದಲ್ಲಿ ಸಮೀಕ್ಷೆ ನಡೆಸುತ್ತಿದೆ. ಈಗಾಗಲೇ ಮುಂಗಾರು ಪೂರ್ವದ ಮಾಹಿತಿಯನ್ನು ಕಲೆಹಾಕಿದ್ದು, ಎರಡನೇ ಹಂತದ ಸಮೀಕ್ಷೆ ನಡೆಸುತ್ತಿದೆ.
ರಾಜ್ಯ ಮಾಲಿನ್ಯ ಮತ್ತು ನಿಯಂತ್ರಣ ಮಂಡಳಿ ಮೂರು ವಾರಕ್ಕೊಮ್ಮೆ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ ಕೊಳವೆ ಬಾವಿಗಳ ಸಮೀಕ್ಷೆ ನಡೆಸುತ್ತದೆ. ಆದರೆ, ನೀರಿನ ಗುಣಮಟ್ಟ ಸುಧಾರಣೆಗೆ ಮಾತ್ರ ಸೂಕ್ತ ಕ್ರಮ ಕೈಗೊಂಡಿಲ್ಲ. ಹೀಗಾಗಿ ಆ ಪ್ರದೇಶದ ಅಂತರ್ಜಲ ಕುಡಿಯಲು ಯೋಗ್ಯವಾಗಿಲ್ಲ.
40 ಚದರ ಕಿ.ಮೀ ವ್ಯಾಪ್ತಿಯಲ್ಲಿ ಪೀಣ್ಯ ಕೈಗಾರಿಕಾ ಪ್ರದೇಶ 1970ರಲ್ಲಿ ಸ್ಥಾಪನೆಯಾಗಿದೆ. ರಾಸಾಯನಿಕ, ಚರ್ಮ, ಔಷಧಿ, ಪಾಲಿಮರ್ ಹೀಗೆ ಅನೇಕ ಕೈಗಾರಿಕೆಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ.
‘ದೀರ್ಘಕಾಲದ ಕೈಗಾರಿಕೆ ಚಟುವಟಿಕೆಗಳಿಂದ ಈ ಪ್ರದೇಶದಲ್ಲಿ ಮಣ್ಣು ಮತ್ತು ಅಂತರ್ಜಲ ಕಲುಷಿತಗೊಂಡಿದೆ. ತ್ಯಾಜ್ಯ ಅಸಮರ್ಪಕ ವಿಲೇವಾರಿಯಿಂದ ಮೊದಲು ಮೇಲ್ಮೈ ಮಣ್ಣು ಕಲುಷಿತಗೊಂಡು ಕ್ರಮೇಣ ಅಂತರ್ಜಲ ಮಾಲಿನ್ಯಗೊಂಡಿದೆ’ ಎಂದು ಅಂತರ್ಜಲ ತಜ್ಞರು ವಿಶ್ಲೇಷಿಸುತ್ತಾರೆ.
ಇಲ್ಲಿನ ಸುಮಾರು ಎರಡು ಸಾವಿರ ಕೈಗಾರಿಕೆಗಳಿಂದ ತಿಂಗಳಿಗೆ ಸರಾಸರಿ 10 ಸಾವಿರ ಕಿಲೋ ಲೀಟರ್ನಷ್ಟು ಕೊಳಚೆ ಅಥವಾ ರಾಸಾಯನಿಕ ತ್ಯಾಜ್ಯದ ನೀರು ಉತ್ಪತ್ತಿಯಾಗುತ್ತಿದೆ. ಕೆಲ ಕಾರ್ಖಾನೆಗಳು ತಮ್ಮದೇ ಆದ ‘ಸಾಮಾನ್ಯ ರಾಸಾಯನಿಕ ತ್ಯಾಜ್ಯ ನೀರು ಸಂಸ್ಕರಣಾ ಘಟಕ’ (ಸಿಇಟಿಪಿ) ನಿರ್ಮಿಸಿಕೊಂಡಿವೆ. ಇನ್ನು ಕೆಲ ಕಾರ್ಖಾನೆಗಳು ರಾಸಾಯನಿಕ ತ್ಯಾಜ್ಯ ನೀರನ್ನು ಸಂಗ್ರಹಿಸಿ, ಖಾಸಗಿ ಸಿಇಟಿಪಿಗಳಿಗೆ ನೀಡುತ್ತಿವೆ.
ಖಾಸಗಿಯವರು ಕಾರ್ಖಾನೆ ಮಾಲೀಕರಿಂದ ಲೀಟರ್ಗೆ ₹3ರವರೆಗೆ ಪಡೆದು ತಮ್ಮ ಸಿಇಟಿಪಿಗಳಿಗೆ ತ್ಯಾಜ್ಯದ ನೀರನ್ನು ಸಂಸ್ಕರಿಸುತ್ತಿದ್ದಾರೆ. ಸಿಇಟಿಪಿ ನಿರ್ಮಾಣಕ್ಕೆ ಅಂದಾಜು ₹ 4 ಕೋಟಿ ವೆಚ್ಚವಾಗುತ್ತದೆ. ಸಣ್ಣ ಕೈಗಾರಿಕೆಗಳು ಸಿಇಟಿಪಿಗಳನ್ನು ನಿರ್ಮಿಸಿಕೊಳ್ಳಲು ಸಾಧ್ಯವಿಲ್ಲ. ಸುಮಾರು 230 ಸಣ್ಣ ಕಾರ್ಖಾನೆಗಳಿದ್ದು, ಕೆಲವು ಕಾರ್ಖಾನೆಗಳು ರಾಸಾಯನಿಕ ತ್ಯಾಜ್ಯದ ನೀರನ್ನು ಸಂಸ್ಕರಿಸದೆ ಚರಂಡಿಗಳಿಗೆ ಬಿಡುತ್ತಿವೆ.
ಕೊಳವೆಬಾವಿಯಲ್ಲಿ ವಿಷಯುಕ್ತ ನೀರು ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಒಟ್ಟು 33 ಕೊಳವೆ ಬಾವಿಗಳಿವೆ. ಮಂಡಳಿ ಸಮೀಕ್ಷೆ ಪ್ರಕಾರ ಈ ನೀರಿನಲ್ಲಿ ಕ್ರೋಮಿಯಂ ಪ್ರಮಾಣ ಅತಿ ಹೆಚ್ಚಾಗಿದ್ದು, ಅದರ ಜತೆ ಆರ್ಸೆನಿಕ್, ಸತು, ಮತ್ತಿತರ ಲೋಹದ ಅಂಶಗಳು ಕಂಡುಬಂದಿದೆ.
ಅಂತರರಾಷ್ಟ್ರೀಯ ಪರಿಸರ ಸಂರಕ್ಷಣಾ ನಿಯತಕಾಲಿಕೆಯೂ ಒಮ್ಮೆ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿನ ಕೊಳವೆಬಾವಿ ನೀರು ಸಂಗ್ರಹಿಸಿ, ಪರೀಕ್ಷೆ ನಡೆಸಿದ್ದು, ನೀರಿನಲ್ಲಿ ಅಪಾಯಕಾರಿ ರಾಸಾಯನಿಕಗಳು ಇರುವುದು ಸಾಬೀತಾಗಿತ್ತು. ಇದಲ್ಲದೆ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ರಾಜೀವ್ ಗಾಂಧಿ ರಾಷ್ಟ್ರೀಯ ಕುಡಿಯುವ ನೀರು ಮಿಷನ್ ಅಧ್ಯಯನದಿಂದಲೂ ಪೀಣ್ಯದಲ್ಲಿನ ಕೊಳವೆಬಾವಿ ನೀರು ಕುಡಿಯಲು ಯೋಗ್ಯವಲ್ಲ ಎಂಬುದು ದೃಢಪಟ್ಟಿದೆ.
ಸರ್ಕಾರದ ಸಿಇಟಿಪಿ ಇಲ್ಲ: ಪೀಣ್ಯದಲ್ಲಿನ ಕೈಗಾರಿಕೆಗಳು ಸರಕಾರದ ಬೊಕ್ಕಸಕ್ಕೆ ವಾರ್ಷಿಕ ಕೋಟ್ಯಂತರ ರೂಪಾಯಿ ತೆರಿಗೆ ಪಾವತಿಸುತ್ತಿವೆ. ಆದರೆ, ಸರಕಾರ ಅಥವಾ ಮಾಲಿನ್ಯ ನಿಯಂತ್ರಣ ಮಂಡಳಿಯು ಇದುವರೆಗೂ ಒಂದೇ ಒಂದು ಸಿಇಟಿಪಿಯನ್ನು ಇಲ್ಲಿ ನಿರ್ಮಿಸಿಲ್ಲ.
ತ್ಯಾಜ್ಯ ನೀರು ಸಂಸ್ಕರಣೆ ವೆಚ್ಚ ಕಡಿಮೆಯಾದರೆ ಬಹುತೇಕ ಕಾರ್ಖಾನೆಗಳು ನೀರನ್ನು ಸಂಸ್ಕರಿಸುತ್ತವೆ ಎಂದು ಕೆಲವು ಕೈಗಾರಿಕೆಗಳ ಮಾಲೀಕರು ಅಭಿಪ್ರಾಯಪಟ್ಟಿದ್ದಾರೆ.
**
ಮೂರು ತಿಂಗಳಲ್ಲಿ ಸಿಇಟಿಪಿ
‘ಸಣ್ಣ ಕೈಗಾರಿಕೆಗಳಿಗೆ ಉಪಯುಕ್ತವಾಗಲೆಂದು ಮಂಡಳಿ ವತಿಯಿಂದ ಹೊಸದೊಂದು ಸಿಇಟಿಪಿ ನಿರ್ಮಾಣ ಮಾಡಲಾಗುವುದು. ಇನ್ನು ಮೂರು ತಿಂಗಳಲ್ಲಿ ಅದು ಪ್ರಾರಂಭಗೊಳ್ಳಲಿದೆ. ಎಲ್ಲರಿಗೂ ಅನುಕೂಲವಾಗುವ ರೀತಿಯ ಬೆಲೆಯನ್ನು ನಿಗದಿ ಮಾಡಲಾಗುವುದು. ₹1 ರಿಂದ ₹1.6 ರಷ್ಟು ನಿಗದಿಸುವ ಯೋಚನೆ ನಡೆದಿದೆ’ ಎಂದು ಮಂಡಳಿ ಅಧ್ಯಕ್ಷ ಲಕ್ಷ್ಮಣ್ ತಿಳಿಸಿದರು.
**
ಅಂತರ್ಜಲ ಗುಣಮಟ್ಟ ಸುಧಾರಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ. ಖಾಸಗಿ ಸಿಇಟಿಪಿಗಳು ಸಂಸ್ಕರಣೆಗೆ ತ್ಯಾಜ್ಯ ನೀರು ಪಡೆಯಲು ಸಮಯ, ಪ್ರಮಾಣ ಹಾಗೂ ಪ್ರದೇಶದ ನಿರ್ಬಂಧ ಹೇರಲಾಗಿದೆ
-ಲಕ್ಷ್ಮಣ್, ಮಾಲಿನ್ಯ ನಿಯಂತ್ರಣ ಮಂಡಳಿ