ಲಖನೌ: ಉತ್ತರ ಪ್ರದೇಶ ವಿಧಾನಸಭೆಗೆ ಶನಿವಾರ ನಡೆದ ಮೊದಲ ಹಂತದ ಮತದಾನದಲ್ಲಿ ಶೇಕಡ 64ರಷ್ಟು ಜನ ಹಕ್ಕು ಚಲಾಯಿಸಿದ್ದಾರೆ.
73 ಸ್ಥಾನಗಳಿಗೆ ಮತದಾನ ನಡೆದಿದೆ. ಸಣ್ಣಪುಟ್ಟ ಅಹಿತಕರ ಘಟನೆಗಳನ್ನು ಹೊರತುಪಡಿಸಿದರೆ ಮತದಾನ ಬಹುತೇಕ ಶಾಂತಿಯುತವಾಗಿತ್ತು ಎಂದು ಚುನಾವಣಾ ಆಯೋಗ ತಿಳಿಸಿದೆ.
ಕೆಲವು ಮತಗಟ್ಟೆಗಳಲ್ಲಿ ಕಲ್ಲುತೂರಾಟ, ಘರ್ಷಣೆ ನಡೆದ ವರದಿಯಾಗಿದೆ ಎಂದು ಮುಖ್ಯ ಚುನಾವಣಾ ಅಧಿಕಾರಿ ಟಿ. ವೆಂಕಟೇಶ್ ಹೇಳಿದರು.
2012ರಲ್ಲಿ ನಡೆದ ಚುನಾವಣೆಯಲ್ಲಿ ಈ ಕ್ಷೇತ್ರಗಳಲ್ಲಿ ಒಟ್ಟು ಶೇಕಡ 61ರಷ್ಟು ಮತದಾನ ನಡೆದಿತ್ತು.
ಒಂದು ಸಮುದಾಯಕ್ಕೆ ಸೇರಿದ ಜನ ಇನ್ನೊಂದು ಸಮುದಾಯದವರಿಗೆ ಮತ ಚಲಾಯಿಸಲು ಅವಕಾಶ ನೀಡುತ್ತಿಲ್ಲ ಎಂಬ ಕಾರಣಕ್ಕೆ ಬಾಘ್ಪತ್ನ ಬಘು ಕಾಲನಿಯಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ ಸಂಭವಿಸಿದ ವರದಿಯಾಗಿದೆ.
ಬಾಘ್ಪತ್ನಲ್ಲಿ ಇನ್ನೊಂದೆಡೆ, ಅಜಿತ್ ಸಿಂಗ್ ನೇತೃತ್ವದ ರಾಷ್ಟ್ರೀಯ ಲೋಕದಳ ಪಕ್ಷದ ಕಾರ್ಯಕರ್ತರು ದಲಿತರಿಗೆ ಮತ ಚಲಾಯಿಸಲು ಅಡ್ಡಿಪಡಿಸಿದರು ಎಂಬ ಕಾರಣಕ್ಕೆ ಘರ್ಷಣೆ ನಡೆದಿದೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.
ಮೀರತ್ನಲ್ಲಿ ಮತಗಟ್ಟೆಯೊಳಗೆ ಪಿಸ್ತೂಲ್ ಒಯ್ದ ಆರೋಪದ ಅಡಿ ಬಿಜೆಪಿಯ ವಿವಾದಿತ ನಾಯಕ ಸಂಗೀತ್ ಸೋಮ್ ಅವರ ಸಹೋದರ ಗಗನ್ ಸೋಮ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಾಮಾನ್ಯ ಕನಿಷ್ಠ ಕಾರ್ಯಕ್ರಮ
ಲಖನೌ: ಉತ್ತರ ಪ್ರದೇಶದ 300 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಗುರಿ ಹೊಂದಿರುವ ಸಮಾಜವಾದಿ ಪಕ್ಷ (ಎಸ್ಪಿ) – ಕಾಂಗ್ರೆಸ್ ಮೈತ್ರಿಕೂಟವು, ಸಾಮಾನ್ಯ ಕನಿಷ್ಠ ಕಾರ್ಯಸೂಚಿಯನ್ನು ಶನಿವಾರ ಬಿಡುಗಡೆ ಮಾಡಿದೆ.