ಶಿಕಾರಿಪುರ: ‘ರೈತರ ಮನ ಓಲೈಸಿ ಕೃಷಿ ಭೂಮಿ ಖರೀದಿಸಲಾಗುವುದು. ನಂತರ ಪಟ್ಟಣದ ಜನತೆಗೆ ನಿವೇಶನ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಶಾಸಕ ಬಿ.ವೈ. ರಾಘವೇಂದ್ರ ಭರವಸೆ ನೀಡಿದರು
.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಸೋಮವಾರ ನಡೆದ ನಗರ ಆಶ್ರಯ ಸಮಿತಿ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಕೃಷಿ ಭೂಮಿಯನ್ನು ರೈತರಿಂದ ಖರೀದಿಸುವ ಕಾರ್ಯಕ್ಕೆ ಶೀಘ್ರ ಚಾಲನೆ ನೀಡಲಾಗುವುದು. ಆಶ್ರಯ ನಿವೇಶನ ಪಡೆದುಕೊಂಡ ಫಲಾನುಭವಿಗಳು ಸರ್ಕಾರದ ಸುತ್ತೋಲೆಯಂತೆ ಮನೆ ನಿರ್ಮಿಸಿಕೊಳ್ಳಬೇಕು ಎಂಬ ನಿಯಮವಿದೆ. ಆಶ್ರಯ ನಿವೇಶನ ಪಡೆದ ಬಹುತೇಕ ಫಲಾನುಭವಿಗಳು ಮನೆ ನಿರ್ಮಿಸಿ ಕೊಂಡಿಲ್ಲ. ಈ ಬಗ್ಗೆ ಫಲಾನುಭವಿಗಳಿಗೆ ನೋಟಿಸ್ ನೀಡ ಬೇಕು’ ಎಂದು ಸೂಚನೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಬಾಲಾಜಿರಾವ್, ‘ಪರಿಶಿಷ್ಟಜಾತಿ 15, ಪರಿಶಿಷ್ಟಪಂಗಡಕ್ಕೆ 2,ಅಲ್ಪಸಂಖ್ಯಾತ 11 ಹಾಗೂ ಸಾಮಾನ್ಯ ವರ್ಗದವರಿಗೆ 27, ಒಟ್ಟು 55 ಮನೆ ನಿರ್ಮಾಣಕ್ಕೆ ಫಲಾನುಭವಿಗಳಿಗೆ ಅವಕಾಶ ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.
‘ಆಶ್ರಯ ಯೋಜನೆಯಡಿ ಮನೆ ನಿರ್ಮಾಣಕ್ಕೆ ಸಾವಿರಾರು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಸರ್ಕಾರ ನೀಡುವ 55ಮನೆ ಸಾಕಾಗುವುದಿಲ್ಲ. ಸರ್ಕಾರ ಮನೆ ನಿರ್ಮಾಣ ಅನುದಾನ ಪ್ರಮಾಣ ಹೆಚ್ಚಿಸಬೇಕು’ ಎಂದು ಒತ್ತಾಯಿಸಿದರು.
ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಕೆ.ಎಸ್. ಹುಚ್ಚರಾಯಪ್ಪ ಮಾತನಾಡಿ, ‘ನಿವೇಶನ ಹೊಂದಿರದ ಪಟ್ಟಣದ ಅರ್ಹ ಪತ್ರಕರ್ತರಿಗೆ ಆಶ್ರಯ ಯೋಜನೆಯಡಿ ನಿವೇಶನ ಒದಗಿಸಬೇಕು’ ಎಂದು ಮನವಿ ಮಾಡಿದರು.
ಪುರಸಭೆ ಅಧ್ಯಕ್ಷೆ ರೂಪಕಲಾ ಎಸ್. ಹೆಗಡೆ, ಆಶ್ರಯ ಸಮಿತಿ ಸದಸ್ಯರಾದ ಸೈಯದ್ ಹಬೀಬುಲ್ಲಾ, ಪಚ್ಚಿ ಗಿಡ್ಡಪ್ಪ, ರೇಣುಕಾಸ್ವಾಮಿ, ಮೀನಾಕ್ಷಮ್ಮ ನಾಗರಾಜ್, ಸಿಬ್ಬಂದಿ ರಾಜ್ಕುಮಾರ್, ರಾಮಚಂದ್ರಪ್ಪ, ಮಧುಸೂಧನ್ಪಿಳ್ಳೆ, ಪ್ರಸಾದ್ ಉಪಸ್ಥಿತರಿದ್ದರು.