ಭಾಲ್ಕಿ: ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿದ್ದಲ್ಲಿ ಯಶಸ್ಸು ಸುಲಭವಾಗಿ ದೊರೆಯುತ್ತದೆ ಎಂದು ತಹಶೀಲ್ದಾರ್ ಮನೋಹರ ಸ್ವಾಮಿ ಮಕ್ಕಳಿಗೆ ಸಲಹೆ ನೀಡಿದರು.
ಪಟ್ಟಣದ ಸರ್ಕಾರಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಗಣಿತ ಹಾಗೂ ವಿಜ್ಞಾನ ವಿಷಯದ ಒಂದು ದಿನದ ವಿಶೇಷ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಪರೀಕ್ಷೆ ಸಮೀಪಿಸುತ್ತಿದ್ದಂತೆ ವಿದ್ಯಾರ್ಥಿಗಳು ಅನಗತ್ಯ ಭಯಕ್ಕೆ ಒಳಗಾಗಿ ಆತ್ಮವಿಶ್ವಾಸ ಕಳೆದುಕೊಂಡು ಒತ್ತಡಕ್ಕೆ ಒಳಗಾಗುತ್ತಾರೆ. ಇದರಿಂದ ಓದಿದ ವಿಷಯ ಮರೆತು ಹೋಗುವ ಸಾಧ್ಯತೆ ಹೆಚ್ಚು ಇರುತ್ತದೆ. ಹಾಗಾಗಿ, ವಿದ್ಯಾರ್ಥಿಗಳು ಪರೀಕ್ಷೆಯನ್ನು ಹಬ್ಬದಂತೆ ಸಂಭ್ರಮಿಸಬೇಕು ಎಂದು ತಿಳಿ ಹೇಳಿದರು.
ಪ್ರೊ.ಬಿ.ಸುಲೇಭಾ ಮಾತನಾಡಿ, ವಿಜ್ಞಾನ ಅತ್ಯಂತ ಆಸಕ್ತಿದಾಯಕ, ಕುತೂಲಕಾರಿ ವಿಷಯ. ಬಹುತೇಕ ವಿದ್ಯಾರ್ಥಿಗಳು ಈ ವಿಷಯವನ್ನು ಪ್ರಾಯೋಗಿಕವಾಗಿ ಕಲಿಯದೆ, ಕಂಠಪಾಠ ವಿಧಾನದಿಂದ ಕಲಿಯುತ್ತಾರೆ. ಆದ್ದರಿಂದ ಹೆಚ್ಚು ಅಂಕ ಗಳಿಸುವುದಿಲ್ಲ. ವಿಜ್ಞಾನ ಪಠ್ಯ ವಿಷಯದಲ್ಲಿನ ಪ್ರಮುಖ ಚಿತ್ರಗಳನ್ನು ಬಿಡಿಸಿ, ಭಾಗಗಳನ್ನು ಗುರುತಿಸಬೇಕು. ಇದರಿಂದ ಹೆಚ್ಚಿನ ಅಂಕ ಗಳಿಸಬಹುದು ಎಂದು ಹೇಳಿದರು.
ಪ್ರೊ.ವಿಜಯಕುಮಾರ ಕುಲಕರ್ಣಿ ಮಾತನಾಡಿ, ಗಣಿತ ವಿಷಯದಲ್ಲಿ ಗರಿಷ್ಠ ಅಂಕ ಗಳಿಸಲು ವಿದ್ಯಾರ್ಥಿಗಳು ಹಿಂದಿನ ಐದಾರು ವರ್ಷಗಳ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಬೇಕು ಎಂದು ಸಲಹೆ ನೀಡಿದರು.
ಎಬಿವಿಪಿ ಕಲಬುರ್ಗಿ ವಿಭಾಗೀಯ ಸಂಚಾಲಕ ರೇವಣಸಿದ್ದ ಜಾಡರ್, ಗಣಪತರಾವ ಬೋಚರೆ, ರಾಜಕುಮಾರ ಸಾಲಿ, ಡಿ.ಕೆ ಸಿದ್ರಾಮ್, ಗುರನಾಥ ರಾಜಗಿರೆ ಮಾತನಾಡಿದರು.
ಪ್ರಶಾಂತ, ಆಕಾಶ ಮಣಿಗೆರೆ, ಕಿರಣ ಕಾಂಬಳೆ, ಅಕಾಶ ಹೊಳಂಬರೆ, ಕಿರಣ ಕೊಲೆ, ಗುರು ಧನ್ನುರೆ, ಆನಂದ ಉಪಸ್ಥಿತರಿದ್ದರು.
ಈಶ್ವರ ರುಮ್ಮಾ ಸ್ವಾಗತಿಸಿದರು. ಸಂತೋಷ ಪಾಂಚಾಳ ನಿರೂಪಿಸಿದರು.
* ವಿದ್ಯಾರ್ಥಿಗಳು ವಿಷಯವನ್ನು ಅರ್ಥೈಸಿಕೊಂಡು ಕಲಿಯಬೇಕು. ಇದರಿಂದ ಕಲಿತ ವಿಷಯ ಜೀವನಪೂರ್ತಿ ನೆನಪಿನಲ್ಲಿರಲು ಸಾಧ್ಯ.
ಮನೋಹರ ಸ್ವಾಮಿ, ತಹಶೀಲ್ದಾರ್