ಬೆಂಗಳೂರು: ಈಗಲೇ ತಮ್ಮನ್ನು ಭೇಟಿ ಮಾಡುವುದು ಬೇಡವೆಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ಅವರು ಸಂಬಂಧಿಕರ ಮೂಲಕ ಸಂದೇಶ ರವಾನಿಸಿರುವ ಕಾರಣ ತಮಿಳುನಾಡಿನ ನೂತನ ಮುಖ್ಯಮಂತ್ರಿ ಪಳನಿಸ್ವಾಮಿ ಅವರು ಶುಕ್ರವಾರ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಬರಲಿಲ್ಲ ಎಂದು ತಿಳಿದು ಬಂದಿದೆ.
ಗುರುವಾರ ಸಂಜೆ ಇಳವರಸಿ ಅವರ ಪುತ್ರಿ ಸೇರಿದಂತೆ ಇಬ್ಬರು ಸಂಬಂಧಿಕರು ಜೈಲಿಗೆ ಬಂದಿದ್ದರು. ಕಾರಾಗೃಹದ ಅಧಿಕಾರಿಗಳ ಸಮ್ಮುಖದಲ್ಲೇ ಅವರು ಅರ್ಧ ತಾಸಿಗೂ ಹೆಚ್ಚು ಕಾಲ ಶಶಿಕಲಾ ಹಾಗೂ ಇಳವರಸಿ ಜತೆ ತಮಿಳುನಾಡಿನ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಿದ್ದರು.
ಈ ವೇಳೆ ಶಶಿಕಲಾ, ‘ಪಳನಿಸ್ವಾಮಿ ಗುರುವಾರ ಅಷ್ಟೇ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ವಿಶ್ವಾಸ ಮತಯಾಚನೆ ಬಳಿಕ ನಿಧಾನವಾಗಿ ಬಂದು ಹೋಗಲಿ’ ಎಂದು ಸಂಬಂಧಿಕರಿಗೆ ಹೇಳಿ ಕಳುಹಿಸಿದ್ದರು. ಹೀಗಾಗಿ, ಪಳನಿಸ್ವಾಮಿ ಅವರ ಭೇಟಿ ಕೊನೆ ಕ್ಷಣದಲ್ಲಿ ರದ್ದಾಗಿದೆ ಎನ್ನಲಾಗಿದೆ.
ಮಾಂಸ ತಿನ್ನಲಿಲ್ಲ: ಶುಕ್ರವಾರ ಕೈದಿಗಳಿಗೆ ಮಾಂಸದ ಊಟದ ವ್ಯವಸ್ಥೆ ಇತ್ತು. ಆದರೆ, ಆ ಆಹಾರ ಸೇವಿಸದ ಶಶಿಕಲಾ ಹಾಗೂ ಇಳವರಸಿ, ಅನ್ನ–ಮಜ್ಜಿಗೆ ಊಟ ಮಾಡಿದ್ದಾರೆ. ತಮ್ಮ ಸೆಲ್ ಬಳಿ ಭದ್ರತೆಗೆ ನಿಯೋಜನೆಯಾಗಿರುವ ವೇಲಮ್ಮ ಎಂಬ ಸಿಬ್ಬಂದಿ ಜತೆ ಶಶಿಕಲಾ ಒಂದು ತಾಸಿಗೂ ಹೆಚ್ಚು ಕಾಲ ಮಾತನಾಡಿದ್ದಾರೆ. ಜೈಲು ವಾತಾವರಣಕ್ಕೆ ಕ್ರಮೇಣ ಹೊಂದಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.