ಬೆಂಗಳೂರು: ಯಲಹಂಕ ಕ್ಷೇತ್ರದ ಸೊಣ್ಣೇನಹಳ್ಳಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ, ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಸೇರಿದಂತೆ ₹1.26 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶುಕ್ರವಾರ ಚಾಲನೆ ನೀಡಲಾಯಿತು.
ಶಾಸಕ ಎಸ್.ಆರ್.ವಿಶ್ವನಾಥ್ ಮಾತನಾಡಿ, ‘ಎಂಟು ಗ್ರಾಮಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಗೆ ಕೊಳವೆ ಮಾರ್ಗ ಅಳವಡಿಸುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಚೊಕ್ಕನಹಳ್ಳಿ ಗ್ರಾಮದಿಂದ ಕಾಕೋಳು ಮುಖ್ಯರಸ್ತೆಯವರೆಗೆ ಡಾಂಬರು ರಸ್ತೆ ನಿರ್ಮಿಸಲಿದ್ದು, ಇದಕ್ಕೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ₹30 ಲಕ್ಷ ನೀಡಿದೆ’ ಎಂದರು.
ಖೆಡ್ಡಾದಲ್ಲಿ ಬಿದ್ದ ಯಡಿಯೂರಪ್ಪ: ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಸಂಸದ ವೀರಪ್ಪ ಮೊಯಿಲಿ ಮಾತನಾಡಿ,‘ಅನ್ಯರಿಗಾಗಿ ತೋಡಿದ ಖೆಡ್ಡಾದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬಿದ್ದಿದ್ದಾರೆ’ ಎಂದು ಲೇವಡಿ ಮಾಡಿದರು. ‘ಯಡಿಯೂರಪ್ಪ ಭ್ರಷ್ಟ ರಾಜಕಾರಣಿ ಎಂಬುದನ್ನು ನಾವು ಹೇಳಬೇಕಿಲ್ಲ. ಅವರು ಏನೆಂಬುದು ರಾಜ್ಯದ ಜನರಿಗೆ ತಿಳಿದಿದೆ. ಬೇರೆಯವರ ಬಗ್ಗೆ ಆರೋಪ ಮಾಡುವ ಮೊದಲು ತಮ್ಮ ಪ್ರಾಮಾಣಿಕತೆಯನ್ನು ಪ್ರಶ್ನಿಸಿಕೊಳ್ಳಲಿ’ ಎಂದರು.