ಚಾಮರಾಜನಗರ: ‘ನಡುಗನ್ನಡ ಸಾಹಿತ್ಯವನ್ನು ಕ್ರಮಬದ್ಧವಾಗಿ ಓದಿದಾಗ ಮಾತ್ರ ಅರ್ಥವಾಗುತ್ತದೆ. ಶಿಬಿರಾರ್ಥಿ ಗಳು ಈ ಸಾಹಿತ್ಯದ ಗ್ರಹಿಕೆ ಹಾಗೂ ವ್ಯಾಖ್ಯಾನಿಸುವ ಕೌಶಲ ಬೆಳೆಸಿಕೊಳ್ಳಬೇಕು’ ಎಂದು ಜೆಎಸ್ಎಸ್ ಮಹಿಳಾ ಕಾಲೇಜಿನ ಪ್ರಾಧ್ಯಾಪಕಿ ಡಾ.ಮಹೇಶ್ವರಿ ಹೇಳಿದರು.
ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಶುಕ್ರವಾರ ಮೈಸೂರಿನ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಹಾಗೂ ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ನಿಂದ ನಡೆಯುತ್ತಿರುವ ಅಭಿಜಾತ ಕನ್ನಡ ಪಠ್ಯವಾಚನ ಮತ್ತು ಅಧ್ಯಯನ ಶಿಬಿರದಲ್ಲಿ ಲಕ್ಷ್ಮೀಶನ ‘ಜೈಮಿನಿ ಭಾರತ’ ಕೃತಿ ಕುರಿತು ಅವರು ಉಪನ್ಯಾಸ ನೀಡಿದರು.
‘ನಡುಗನ್ನಡ ಕವಿಯಾದ ಲಕ್ಷ್ಮೀಶ ಕಾವ್ಯದಲ್ಲಿ ಉಪಮಾಲಂಕಾರವನ್ನು ಅದ್ಭುತವಾಗಿ ಬಳಸಿದ್ದರಿಂದ ಉಪಮಾ ಲೋಲ ಎಂಬ ಅಭಿಧಾನಕ್ಕೆ ಪಾತ್ರ ನಾಗಿದ್ದಾನೆ’ ಎಂದರು.
ಜೈಮಿನಿ ಮುನಿಯು ಸಂಸ್ಕೃತದಲ್ಲಿ ಅಶ್ವಮೇಧ ಪರ್ವವನ್ನು ವಿಸ್ತಾರವಾದ ಕಥಾ ಸನ್ನಿವೇಶದೊಡನೆ ರಚಿಸಿದ್ದಾನೆ. ಲಕ್ಷ್ಮೀಶ ಅದನ್ನು ಸೂಕ್ತ ಬದಲಾವಣೆ ಮಾಡಿಕೊಂಡು ಕನ್ನಡಕ್ಕೆ ಸ್ವಂತ ಕಾವ್ಯ ಎನ್ನುವಂತೆ ಅಲಂಕಾರ, ನವರಸಭರಿತ ವಾಗಿ ವಾರ್ಧಕ ಷಟ್ಪದಿಯಲ್ಲಿ ರಚಿಸಿರು ವುದೇ ಕನ್ನಡ ಜೈಮಿನಿ ಭಾರತ ಎಂದು ತಿಳಿಸಿದರು.
ಕುಮಾರವ್ಯಾಸನ ನೇರ ಪ್ರಭಾವ ಲಕ್ಷ್ಮೀಶನ ಮೇಲೆ ಬೀರಿದೆ. ಭಾಗವತ ಮನೋಧರ್ಮದ ಮೇಲೆ ಇಬ್ಬರು ಒಂದೇ ರೀತಿಯಾಗಿ ತಿಳಿಸಿದ್ದಾರೆ. ಕುಮಾರವ್ಯಾಸ ಉತ್ತರಕುಮಾರನ ಮೂಲಕ ಹಾಸ್ಯರಸಕ್ಕೆ ಒತ್ತು ನೀಡಿದ್ದಾನೆ. ಲಕ್ಷ್ಮೀಶ ಚಂಡಿ ಕಥೆ ಮೂಲಕ ಹಾಸ್ಯರಸವನ್ನು ಕಾವ್ಯದಲ್ಲಿ ಪ್ರಯೋಗಿಸಿದ್ದಾನೆ ಎಂದರು.
ಚಂಡಿ ಕಥೆಯು ವಿರಸ ದಾಂಪತ್ಯದ ಕಥೆಯಾಗಿದೆ. ಚಂಡಿಯ ಹಠಮಾರಿತನ, ಗಂಡನ ಅಸಹಾಯಕತೆಯನ್ನು ಹಾಸ್ಯದ ಮೂಲಕ ಕವಿ ತಿಳಿಸಿದ್ದಾನೆ. ಲಕ್ಷ್ಮೀಶ ಮನುಷ್ಯ ಪ್ರಕೃತಿಯನ್ನು ಅಚ್ಚುಕಟ್ಟಾಗಿ ಕಾವ್ಯದಲ್ಲಿ ಕಟ್ಟಿಕೊಟ್ಟಿದ್ದಾನೆ ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಬಿ.ಎಸ್. ವಿನಯ್, ಪ್ರಾಂಶುಪಾಲರಾದ ಡಾ.ಎಚ್. ಎಸ್. ಪ್ರೇಮಲತಾ, ಅಧ್ಯಯನ ಕೇಂದ್ರದ ಅಸೋಸಿಯೇಟ್ ಫೆಲೋ ಡಾ.ಮಾಲಿನಿ ಎನ್. ಅಭ್ಯಂಕರ್, ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ವೆಂಕಟೇಶ, ಉಪನ್ಯಾಸಕರಾದ ಮಹೇಶ್, ಬೆಳ್ಳಪ್ಪ ಹಾಜರಿದ್ದರು.