ಟಾಟಾ ಸನ್ಸ್ನಲ್ಲಿ ನಡೆದ ಬೋರ್ಡ್ ರೂಂ ಕಲಹ ಕೊನೆಗೊಂಡ ಬೆನ್ನಲ್ಲೇ, ಇನ್ಫೊಸಿಸ್ನಲ್ಲಿಯೂ ಅದೇ ಬಗೆಯ ಸಮರ ನಡೆಯುತ್ತಿರುವುದನ್ನು ದೇಶಿ ಕಾರ್ಪೊರೇಟ್ ಜಗತ್ತು ಅಚ್ಚರಿಯಿಂದ ಗಮನಿಸುತ್ತಿದೆ. ಟಾಟಾ ಸನ್ಸ್ ಮತ್ತು ಇನ್ಫೊಸಿಸ್ನಲ್ಲಿ ನಡೆಯುತ್ತಿರುವ ವಿದ್ಯಮಾನಗಳಲ್ಲಿ ಹಲವು ಸಾಮ್ಯತೆಗಳಿವೆ.
ನಿರ್ದೇಶಕ ಮಂಡಳಿಯ ಕಾರ್ಯವೈಖರಿ ಬಗ್ಗೆ ಸಂಸ್ಥೆಯ ಪ್ರವರ್ತಕರು ಬಹಿರಂಗವಾಗಿಯೇ ತಮ್ಮ ಅತೃಪ್ತಿ ಹೊರ ಹಾಕಿದ್ದಾರೆ. ಪಾರದರ್ಶಕ ಕಾರ್ಪೊರೇಟ್ ಆಡಳಿತಕ್ಕೆ ಹೆಸರಾಗಿದ್ದ ಸಂಸ್ಥೆಯಲ್ಲಿ ಕೈಗೊಂಡ ಕೆಲವು ನಿರ್ಧಾರಗಳು ಸಮಂಜಸವಾಗಿಲ್ಲ. ಷೇರುದಾರರ ಹಿತಾಸಕ್ತಿಗೆ ಮಾರಕವಾಗಿವೆ. ಸ್ವಾಧೀನ ಪ್ರಕ್ರಿಯೆ ಮತ್ತು ಉನ್ನತ ಅಧಿಕಾರಿಗಳ ವೇತನ ನಿಗದಿಯಲ್ಲಿ ಮಾನದಂಡಗಳನ್ನು ಗಾಳಿಗೆ ತೂರಲಾಗಿದೆ. ಕೆಲವರ ಬಾಯಿ ಮುಚ್ಚಿಸಲು ಹಣ ಪಾವತಿಸಲಾಗಿದೆ. ಷೇರುದಾರರಿಗೆ ಸೇರಿದ ಹಣವನ್ನು ಬೇಕಾಬಿಟ್ಟಿಯಾಗಿ ವೆಚ್ಚ ಮಾಡಲಾಗುತ್ತಿದೆ ಎಂದು ಸಂಸ್ಥೆಯ ಸಹ ಸ್ಥಾಪಕರು ತಮ್ಮ ಕಳವಳ ವ್ಯಕ್ತಪಡಿಸಿರುವುದು ವಿವಾದದ ಮೂಲವಾಗಿದೆ.
ದೇಶದ ಎರಡನೆ ಅತಿದೊಡ್ಡ ಸಾಫ್ಟ್ವೇರ್ ರಫ್ತು ಸೇವಾ ಸಂಸ್ಥೆಯಾಗಿರುವ ಬೆಂಗಳೂರು ಮೂಲದ ಇನ್ಫೊಸಿಸ್ನಲ್ಲಿ ಸ್ಥಾಪಕರು ಮತ್ತು ನಿರ್ದೇಶಕ ಮಂಡಳಿ ನಡುವಣ ಕಲಹ ಬೀದಿಗೆ ಬಂದಾಗಿದೆ. ಆರೋಪ, ಸ್ಪಷ್ಟನೆಗಳ ನಂತರ ಸದ್ಯಕ್ಕೆ ಉಭಯ ಬಣಗಳು ಕದನ ವಿರಾಮ ಘೋಷಿಸಿರುವಂತೆ ಕಂಡು ಬರುತ್ತಿದೆ.
ಸಿಇಒ, ಅಧ್ಯಕ್ಷ ಹಾಗೂ ಸಹಸ್ಥಾಪಕ ನಾರಾಯಣಮೂರ್ತಿ ಅವರ ನಡುವಣ ಬಾಂಧವ್ಯ ಹಳಸಿಲ್ಲ ಎಂದು ಸ್ಪಷ್ಟನೆ ನೀಡಲಾಗುತ್ತಿದೆ. ಆದರೆ, ಬೋರ್ಡ್ರೂಂ ಹೊರಗೆ ನಡೆಯುತ್ತಿರುವ ವಿದ್ಯಮಾನಗಳು ಮಾತ್ರ ಸಂಸ್ಥೆಯಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವ ವಾದಕ್ಕೆ ಇಂಬು ನೀಡುತ್ತಿವೆ.
ಸಂಸ್ಥೆ ಕಟ್ಟಿ ಬೆಳೆಸಿದವರು ವ್ಯಕ್ತಪಡಿಸಿರುವ ಆತಂಕವನ್ನೂ ಕೆಲವರು ಟೀಕಿಸಿದ್ದಾರೆ. ಸ್ಥಾಪಕರು ಈಗ ಸಂಸ್ಥೆಯನ್ನು ಸ್ವತಂತ್ರವಾಗಿ ಮುನ್ನಡೆಸಲು ಅವಕಾಶ ಮಾಡಿಕೊಟ್ಟು ಮತ್ತೆ ಅದರ ಮೇಲೆ ನಿಯಂತ್ರಣ ಹೊಂದಲು ಬಯಸುವುದು ಸರಿಯಲ್ಲ ಎನ್ನುವುದು ಅವರ ವಾದವಾಗಿದೆ. ಆದರೆ, ಈ ಹಿಂದೆಯೇ ಸಂಸ್ಥೆ ತೊರೆದಿರುವ ಮುಖ್ಯ ಹಣಕಾಸು ಅಧಿಕಾರಿಗಳಾಗಿದ್ದ ಟಿ. ಎ. ಮೋಹನದಾಸ್ ಪೈ ಮತ್ತು ವಿ.ಬಾಲಕೃಷ್ಣನ್ ಅವರು ನಾರಾಯಣ ಮೂರ್ತಿ ಅವರ ಬೆಂಬಲಕ್ಕೆ ನಿಂತಿದ್ದಾರೆ. ಬಹಿರಂಗ ಹೇಳಿಕೆ ನೀಡುವ ಮೂಲಕ ಮೂರ್ತಿ ಅವರ ಕಳವಳಕ್ಕೆ ದನಿ ಗೂಡಿಸಿದ್ದಾರೆ. ಆಡಳಿತಾತ್ಮಕ ಲೋಪಗಳಿಗೆ ಹೊಣೆ ಹೊತ್ತು ಸಂಸ್ಥೆಯ ಅಧ್ಯಕ್ಷ ಆರ್. ಶೇಷಸಾಯಿ ಅವರು ರಾಜೀನಾಮೆ ನೀಡಬೇಕು ಎಂದೂ ಒತ್ತಾಯಿಸಿದ್ದಾರೆ.
ಮೂರ್ತಿ ಅವರು ವ್ಯಕ್ತಪಡಿಸಿರುವ ಆತಂಕವು ಸಣ್ಣ ಹೂಡಿಕೆದಾರರ ಹಿತಾಸಕ್ತಿ ರಕ್ಷಿಸುವ ಪರವಾಗಿ ಇದೆ. ಸದ್ಯಕ್ಕೆ ಅವರ ಆಕ್ಷೇಪಕ್ಕೆ ಬೆಲೆ ಸಿಗದಿದ್ದರೂ ಮುಂದೊಂದು ದಿನ ಇದು ವಿವಾದವಾಗಿ ಬೆಳೆಯಲಿದೆ ಎನ್ನುವ ಅಭಿಪ್ರಾಯವೂ ಇದೆ. ಆದರೆ, ಸಂಸ್ಥೆಯಲ್ಲಿ ಬಹುದೊಡ್ಡ ಪಾಲು ಹೊಂದಿರುವ ಸಾಂಸ್ಥಿಕ ಹೂಡಿಕೆದಾರರು ಸಿಕ್ಕಾ ಮತ್ತು ಅಧ್ಯಕ್ಷ ಆರ್. ಶೇಷಸಾಯಿ ಅವರ ಬೆಂಬಲಕ್ಕೆ ನಿಂತಿರುವುದು ಗಮನಾರ್ಹ ಸಂಗತಿಯಾಗಿದೆ.