ಹಳಿಯಾಳ: 24 ವರ್ಷದ ನಂತರ ಪಟ್ಟಣದಲ್ಲಿ ಗ್ರಾಮದೇವಿ ಉಡಚಮ್ಮಾ ಹಾಗೂ ಶ್ರೀಲಕ್ಷ್ಮೀದೇವಿಯ ಜಾತ್ರೆ ನಡೆಯುತ್ತಿರುವ ಅಂಗವಾಗಿ ಏಪ್ರಿಲ್ 17 ರಂದು ನಡೆಯುವ ರಥೋತ್ಸವದ ರಥವನ್ನು ಅಚ್ಚುಕಟ್ಟಾಗಿ ನಿರ್ಮಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.
ಗುರುವಾರ ಸಾಯಂಕಾಲ ಸ್ಥಳಿಯ ಗ್ರಾಮದೇವಿ ದೇವಸ್ಥಾನದಲ್ಲಿ ಜಾತ್ರೆ ನಿಮಿತ್ತ ನಡೆದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಥೋತ್ಸವದ ವೇಳೆ ದೇವಿಯ ಮೂರ್ತಿಯನ್ನು ಹೊರತು ಪಡಿಸಿ ಯಾರಿಗೂ ರಥದ ಮೇಲೆ ಕುಳ್ಳಿರಿಸಬೇಡಿ. ರಥ ಸಾಗುವಾಗ ಅಕ್ಕಪಕ್ಕ ಸೂಕ್ತ ಭದ್ರತೆಯನ್ನು ಒದಗಿಸುತ್ತಾ ರಥೋತ್ಸವವನ್ನು ನಡೆಸಿರಿ.
ರಥ ನಿರ್ಮಾಣದಲ್ಲಿ ಉಪಯೋಗಿಸುವ ಕಟ್ಟಿಗೆ ಹಾಗೂ ಇನ್ನಿತರ ಸಲಕರಣೆಗಳು ಉತ್ತಮ ಗುಣಮಟ್ಟದ ಸಲಕರಣೆಗಳನ್ನು ಉಪಯೋಗಿಸಿರಿ ಎಂದು ರಥ ನಿರ್ಮಾಣ ಮಾಡುವ ಶಿಲ್ಪಿಗಳಿಗೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ಫೆ.21 ರಂದು ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ಸೂಚಿಸಲಾದ ವಿಷಯಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚಿಸಿ ಜಾತ್ರೆಯಲ್ಲಿ ಹೊರಗಿನ ಹಾಗೂ ಆಸುಪಾಸಿನ ಬಹಳಷ್ಟು ಜನರು ಹಳಿಯಾಳಕ್ಕೆ ಬರುವ ಕಾರಣ ಹೆಚ್ಚಿನ ವಾಹನದ ಸೌಕರ್ಯದ ವ್ಯವಸ್ಥೆ ಮಾಡಬೇಕೆಂದು ವಾಯುವ್ಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಸೂಚಿಸಿದರು. ಎಲ್ಲೆಲ್ಲಿ ಜನನಿಬಿಡ ಮಾರ್ಗಗಳು ಇರುತ್ತದೆ ಅಲ್ಲೆಲ್ಲಾ ಏಕ ಮುಖ ಸಂಚಾರದ ಮಾರ್ಗವನ್ನು ಅಳ ವಡಿಸಿರಿ ಎಂದು ಪೋಲಿಸ್ ಇಲಾಖೆಗೆ ತಿಳಿಸಿದರು.
ಪ್ರತಿಯೊಂದು ವಾರ್ಡುಗಳಲ್ಲಿ ವಾರ್ಡ್ ಮುಖಂಡರ ಜೊತೆ ಸಭೆ ನಡೆಸಿ ದೇವಿಯ ಹೊನ್ನಾಟ ನಡೆಯುವ ಸಂದರ್ಭದಲ್ಲಿ ವಾರ್ಡ್ ಜನರ ಜವಾಬ್ದಾರಿಯನ್ನು ಹೆಚ್ಚಿಸಿ, ಹೊನ್ನಾಟ ಸಾಂಗವಾಗಿ ನಡೆಯುವಂತೆ ನೋಡಿಕೊಳ್ಳಿ. ಈಗಾಗಲೇ ಜಾತ್ರಾ ಮಹೋತ್ಸವ ಅಂಗವಾಗಿ ವಿವಿಧ 12 ಕಮಿಟಿಗಳನ್ನು ರಚಿಸಿ ಹೊಣೆಗಾರಿಕೆ ಯನ್ನು ನೀಡಲಾಗಿದೆ.
ಜಾತ್ರೆಯ ನಡೆಯುವ ಸಂದರ್ಭದಲ್ಲಿ ನಸುಕಿನ ಜಾವ ಸ್ವಚ್ಛತೆ ಕಾರ್ಯ ಕೈಗೊಳ್ಳ ಬೇಕೆಂದು. ರಥ ಸಾಗುವ ಮಾರ್ಗ ದಲ್ಲಿಯ ವಿದ್ಯುತ್ ತಂತಿಯನ್ನು ತೆರವು ಗೊಳಿಸುವುದು, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಜಾತ್ರೆಗೆ ಸಂಬಂಧಿ ಸಿದಂತೆ ಮತ್ತಿತರರ ವಿಷಯಗಳನ್ನು ಜಾತ್ರಾ ಕಮಿಟಿಯಿಂದ ಪ್ರಸ್ತಾಪಿಸ ಲಾಯಿತು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ, ಜಾತ್ರಾ ಕಮೀಟಿ ಅಧ್ಯಕ್ಷ ಮಂಗೇಶ ದೇಶಪಾಂಡೆ, ಪುರಸಭೆ ಅಧ್ಯಕ್ಷ ಉಮೇಶ ಬೊಳಶೆಟ್ಟಿ, ಶ್ರೀಕಾಂತ ಹೂಲಿ, ನಂದಕಿಶೋರ ಬೊಂಗಾಳೆ, ರಾಜು ಧೂಳಿ, ಶಂಕರ ಬೆಳಗಾಂವಕರ ಮತ್ತಿತರರ ಜಾತ್ರಾ ಕಮೀಟಿ ಸದಸ್ಯರ, ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
ಸಭೆಯ ನಂತರ ಸಚಿವ ದೇಶಪಾಂಡೆ ಹಾಗೂ ಜಾತ್ರಾ ಕಮಿಟಿ ಸದಸ್ಯರೆಲ್ಲರೂ ಸೇರಿ ನೂತನವಾಗಿ ನಿರ್ಮಿಸಲಾಗುತ್ತಿರುವ ಲಕ್ಷ್ಮೀ ದೇವಮ್ಮಾ ದೇವಿಯ ದೇವಸ್ಥಾನ ಹಾಗೂ ಜಾತ್ರಾ ರಥದ ನಿರ್ಮಾಣ ಕಾರ್ಯ, ರಥ ಸಾಗುವ ಮಾರ್ಗ ಪರಿಶೀಲಿಸಿದರು.
ವಿದ್ಯುತ್ ತಂತಿ ಮಾರ್ಗ ಹಾಗೂ ರಥ ನಿಲುಗಡೆಯ ಸ್ಥಳ, ಪಾರ್ಕಿಂಗ್ ವ್ಯವಸ್ಥೆ ರಸ್ತೆ ಬದಿಯ ಕಾಲುವೆಯ ಮೇಲೆ ಬ್ಲಾಕ್ ಅಳವಡಿಕೆ , ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮೇರಾ ಅಳವಡಿಕೆ, ಕುಡಿಯುವ ನೀರಿನ ವ್ಯವಸ್ಥೆ , ಜಾತ್ರಾ ದೇವಿಯ ಗದ್ದುಗೆ, ಅಂಗಡಿಗಳ ಸ್ಥಳ ಪರಿಶೀಲನೆ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.