ಚಿಕ್ಕಮಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ ಮುಂದಿನ ಚುನಾವಣೆಯ ಪ್ರಣಾಳಿಕೆ ಯಂತಿದೆ ಎಂದು ಮೂಡಿಗೆರೆ ಶಾಸಕ ಬಿ.ಬಿ. ನಿಂಗಯ್ಯ ಆರೋಪಿಸಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಸಾಲಿನ ಬಜೆಟ್ ದೊಡ್ಡ ಗಾತ್ರದ ಹಾಗೂ ಉಳಿತಾಯ ಬಜೆಟ್ ಎಂದು ಕಾಂಗ್ರೆಸ್ನವರು ಹೇಳಿಕೊಳ್ಳುತ್ತಿ ದ್ದಾರೆ. ಸಿದ್ದರಾಮಯ್ಯ ಅವರು ರಾಜ್ಯದ ಜನತೆಯನ್ನು ಸಾಲದ ಸುಳಿಯಲ್ಲಿ ಸಿಲುಕಿಸಿದ್ದಾರೆ ಎಂದು ಟೀಕಿಸಿದರು.ಜಿಲ್ಲೆಗೆ
ಮೆಡಿಕಲ್ ಕಾಲೇಜ್, ವಿಮಾನ ಇಳಿದಾಣ, ಕರಗಡ ನೀರಾವರಿ ಯೋಜನೆಗೆ ಅನುದಾನ, ಐಟಿಐ ಕಾಲೇಜು ನೀಡಿರುವುದು ಸ್ವಾಗತಾರ್ಹ. ರೈತರ ಸಾಲಮನ್ನಾ ಮಾಡಲು ಕಾಲ ಮಿಂಚಿಲ್ಲ, ರೈತರ ಸಾಲಮನ್ನಾ ಮಾಡಲು ಮುಂದಾಗಬೇಕು ಎಂದು ಹೇಳಿದರು.
40 ವರ್ಷಗಳಿಂದ ಕಳಸವನ್ನು ತಾಲ್ಲೂಕು ಕೇಂದ್ರ ಮಾಡಬೇಕು ಎಂದು ಹೋರಾಟ ನಡೆಯುತ್ತಿದೆ. ಕಳಸ ಸುತ್ತಮುತ್ತಲ ಜನರು ಸುಮಾರು 100 ಕಿ.ಮೀ. ದೂರದಲ್ಲಿರುವ ಮೂಡಿಗೆರೆ ತಾಲೂಕು ಕೇಂದ್ರಕ್ಕೆ ಬರಬೇಕಾದಂತಹ ಪರಿಸ್ಥಿತಿಯಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ, ಮೋಟಮ್ಮ ಅವರಂತ ಹಿರಿಯ ರಾಜಕಾರಣಿಗಳಿದ್ದಾರೆ. ಆದರೂ ಯಾಕೆ ಸಾಧ್ಯವಾಗಲಿಲ್ಲ?. ಇದೇ 20 ರಂದು ಸಿ.ಎಂ. ಸಿದ್ದರಾಮಯ್ಯ, ಉಸ್ತು ವಾರಿ ಸಚಿವ ಡಾ.ಜಿ. ಪರಮೇಶ್ವರ್, ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರ ಬಳಿಗೆ ಜಿಲ್ಲೆಯ ನಾಯಕರ ನಿಯೋಗ ತೆರಳಿ, ಕಳಸ ತಾಲ್ಲೂಕು ಕೇಂದ್ರ ಮಾಡಲು ಒತ್ತಾಯಿಸಲಾಗುವುದು ಎಂದರು.
ಕಸ್ತೂರಿ ರಂಗನ್ ವರದಿ ಅನುಷ್ಠಾನ ಕ್ಕೆ ಕೇಂದ್ರ ಸರ್ಕಾರ ಮುಂದಾಗಿದ್ದು, ಮಲೆನಾಡಿನ ಸುಮಾರು 147 ಗ್ರಾಮ ಗಳ ಜನರು ತೊಂದರೆಗೆ ಒಳಗಾಗಲಿ ದ್ದಾರೆ. ಈ ಪ್ರದೇಶವನ್ನು ಅತೀ ಸೂಕ್ಷ್ಮ ಪ್ರದೇಶವೆಂದು ಘೋಷಣೆ ಮಾಡುವುದ ರಿಂದ ಯಾವುದೇ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ರಾಜ್ಯ ಸರ್ಕಾರ ಪುನರ್ ಪರಿಶೀಲನ ಅರ್ಜಿ ಸಲ್ಲಿಸಬೇಕು ಹಾಗೂ ರಾಜ್ಯದ ಸಂಸದರ ನಿಯೋಗ ಪ್ರಧಾನಿಯನ್ನು ಭೇಟಿ ಮಾಡಿ ಅವರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ವಿಧಾನ ಪರಿಷತ್ ಸದಸ್ಯೆ ಮೋಟಮ್ಮ ಅವರ ಭೂ ಒತ್ತುವರಿ ಪ್ರಕರಣದ ಹಿಂದೆ ನನ್ನ ಕೈವಾಡವಿಲ್ಲ. ಅವರು ಅತ್ಯಂತ ಹಿರಿಯ ರಾಜಕಾರಣಿ. ಅವರು ನಿರಾಧಾರವಾಗಿ ಈ ರೀತಿಯ ಹೇಳಿಕೆಗಳನ್ನು ನೀಡಬಾರದು. ಯಾವುದೇ ಹೇಳಿಕೆಗಳನ್ನು ನೀಡುವಾಗ ಎಚ್ಚರಿಕೆ ವಹಿಸಬೇಕು ಎಂದರು.
ಮೂಡಿಗೆರೆ ಸುತ್ತಮುತ್ತಲ ಕಾಡಿನಲ್ಲಿ ಒಂಟಿ ಸಲಗ ಈ ಹಿಂದೆ ಹಲವಾರು ಬಾರಿ ರೈತರ ಜಮೀನಿನಲ್ಲಿ ಬೆಳೆ ಹಾನಿ ಮಾಡಿ ಪ್ರಾಣ ಹಾನಿ ಮಾಡಿದೆ. ಬುಧವಾರ ಅರಣ್ಯ ಇಲಾಖೆ ಒಂಟಿ ಸಲಗವನ್ನು ಹಿಡಿದಿದೆ. ಆದರೆ, ಹಾನಿ ಮಾಡಿದ ಆನೆ ಬೇರೆ, ಹಿಡಿದಿರುವ ಆನೆ ಬೇರೆ ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಇದರ ಬಗ್ಗೆ ಮಾಹಿತಿ ನೀಡುವಂತೆ ಅರಣ್ಯ ಇಲಾಖೆಗೆ ಕೇಳಲಾಗಿದೆ ಎಂದರು.
ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ರಂಜನ್ ಅಜಿತ್ ಕುಮಾರ್, ಹೊಲದಗದ್ದೆ ಗಿರೀಶ್, ಎಚ್.ಎಸ್. ಮಂಜಪ್ಪ, ಲಕ್ಷ್ಮಣ್, ಸತೀಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.