ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗಿಗೆ ಒಲಿದ ಯೋಗ

ಮೌರ್ಯ, ದಿನೇಶ್‌ ಶರ್ಮ ಉಪಮುಖ್ಯಮಂತ್ರಿಗಳು
Last Updated 18 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಲಖನೌ: ಅಚ್ಚರಿಯ ಬೆಳವಣಿಗೆಯಲ್ಲಿ ಬಿಜೆಪಿಯು, ಕಟ್ಟರ್ ಹಿಂದುತ್ವದ ಪ್ರತಿಪಾದಕ ಮತ್ತು ಗೋರಖ್‌ಪುರ ಸಂಸದ ಯೋಗಿ ಆದಿತ್ಯನಾಥ್‌ ಅವರನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಹುದ್ದೆಗೆ ಆಯ್ಕೆ ಮಾಡಿದೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೇಶವ ಪ್ರಸಾದ್‌ ಮೌರ್ಯ ಮತ್ತು ಲಖನೌ ಮೇಯರ್‌ ದಿನೇಶ್‌ ಶರ್ಮ ಅವರನ್ನು ಉಪಮುಖ್ಯಮಂತ್ರಿ ಹುದ್ದೆಗೆ ಪರಿಗಣಿಸಲಾಗಿದೆ.

ಲಖನೌದಲ್ಲಿ ಶನಿವಾರ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ, ಗೋರಖ್‌ಪುರದ ಪ್ರಸಿದ್ಧ ಗೋರಕ್ಷನಾಥ ಪೀಠದ ‘ಮಹಂತ’ (ಧಾರ್ಮಿಕ ಮುಖ್ಯಸ್ಥ) ಯೋಗಿ ಆದಿತ್ಯನಾಥ್‌ ಅವರು ಶಾಸಕಾಂಗ ಪಕ್ಷದ ನಾಯಕರಾಗಿ ಅವಿರೋಧ ಆಯ್ಕೆಯಾದರು.

ಆದಿತ್ಯನಾಥ್‌ ಅವರು ಉತ್ತರ ಪ್ರದೇಶದ 21ನೇ ಮುಖ್ಯಮಂತ್ರಿಯಾಗಿ ಭಾನುವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ವೀಕ್ಷಕರಾಗಿ ಬಂದಿದ್ದ ಕೇಂದ್ರ ಸಚಿವರಾದ ವೆಂಕಯ್ಯ ನಾಯ್ಡು ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ್‌  ಸಭೆಯಲ್ಲಿದ್ದರು.

‘ಶಾಸಕರ ಸಭೆಯಲ್ಲಿ ಆದಿತ್ಯನಾಥ್‌ ಅವರು ಅವಿರೋಧವಾಗಿ ಆಯ್ಯೆಯಾಗಿದ್ದಾರೆ’ ಎಂದು ವೆಂಕಯ್ಯ ನಾಯ್ಡು ಸಭೆ ನಂತರ ಹೇಳಿದರು. ಮುಖ್ಯಮಂತ್ರಿ ಹುದ್ದೆಗೆ ಬೇರೆ ಯಾರ ಹೆಸರು ಕೂಡ ಪ್ರಸ್ತಾಪವಾಗಿಲ್ಲ ಎಂದು ತಿಳಿಸಿದರು.

ಆಡಳಿತದಲ್ಲಿ ತಮಗೆ ನೆರವಾಗಲು ಇಬ್ಬರು ಹಿರಿಯ ಮುಖಂಡರು ಬೇಕು ಎಂದು ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದ ನಂತರ ಆದಿತ್ಯನಾಥ್‌ ಅವರು ವರಿಷ್ಠರನ್ನು ಕೇಳಿಕೊಂಡರು ಎಂದು ನಾಯ್ಡು ವಿವರಿಸಿದರು.

ಅವರ ಮನವಿ ಮೇರೆಗೆ, ಕೇಶವ ಪ್ರಸಾದ್‌ ಮೌರ್ಯ ಮತ್ತು ದಿನೇಶ್‌ ಶರ್ಮ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲು ಪಕ್ಷದ ನಾಯಕತ್ವ ಅನುಮತಿ ನೀಡಿತು. ಉತ್ತರ ಪ್ರದೇಶದ ಮತದಾರರು ಬಿಜೆಪಿಗೆ ನೀಡಿರುವ ಜನಾದೇಶ ‘ಐತಿಹಾಸಿಕ’ ಎಂದು ಬಣ್ಣಿಸಿದ ನಾಯ್ಡು,  ‘ಅಭಿವೃದ್ಧಿ’ ಮತ್ತು ‘ಉತ್ತಮ ಆಡಳಿತ’  ನೀಡುವುದು ಪಕ್ಷದ ಪ್ರಮುಖ ಕಾರ್ಯಸೂಚಿ  ಎಂದರು.

ಬಿರುಸುಗೊಂಡ ಚಟುವಟಿಕೆ
ಆದಿತ್ಯನಾಥ್‌ ಅವರು ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾಗುವುದಕ್ಕೂ ಮುನ್ನ ಹಲವು ಬೆಳವಣಿಗೆಗಳು ನಡೆದವು.

ಚುನಾವಣಾ ಫಲಿತಾಂಶ ಪ್ರಕಟಗೊಂಡ ನಂತರ ಉತ್ತರ ಪ್ರದೇಶ ಮುಖ್ಯಮಂತ್ರಿ ಹುದ್ದೆಗೆ ಕೇಂದ್ರ ಸಚಿವ ಮನೋಜ್‌ ಸಿನ್ಹಾ, ಕೇಶವ ಪ್ರಸಾದ್‌ ಮೌರ್ಯ ಹಾಗೂ ಇತರರ ಹೆಸರು ಕೇಳಿ ಬಂದಿತ್ತು.

ಶನಿವಾರ ಸಂಜೆ ನಿಗದಿಯಾಗಿದ್ದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಗೂ  ಕೆಲವು ಗಂಟೆಗಳ ಮುನ್ನ, ಅಂದರೆ ಮಧ್ಯಾಹ್ನದ ಹೊತ್ತಿಗೆ ಸಿನ್ಹಾ  ಹಾಗೂ ಇತರರ ಬದಲು ಆದಿತ್ಯನಾಥ್‌ ಹೆಸರು ಕೇಳಿಬರಲು ಆರಂಭಿಸಿತು.

ದೆಹಲಿಗೆ ದಿಢೀರ್‌ ಭೇಟಿ ನೀಡಿದ ಆದಿತ್ಯನಾಥ್‌ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಮತ್ತು ಮುಖಂಡ ಓಂ ಮಾಥೂರ್‌ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿದರು.  ನಂತರ  ಮೌರ್ಯ ಮತ್ತು ಮಾಥೂರ್‌ ಜತೆ ಲಖನೌಗೆ ದೌಡಾಯಿಸಿದರು.

ಇರದ ಸುಳಿವು: ಮುಖ್ಯಮಂತ್ರಿ ಹುದ್ದೆಗೆ ಯಾರ ಹೆಸರನ್ನು ಅಂತಿಮಗೊಳಿಸಲಾಗುತ್ತದೆ ಎಂಬ ಬಗ್ಗೆ 325 ಶಾಸಕರಿಗೆ ಕೊನೆ ಕ್ಷಣದವರೆಗೂ ಸುಳಿವು
ಇರಲಿಲ್ಲ.

ಬಿಜೆಪಿ ಹಾಗೂ ಮೈತ್ರಿ ಪಕ್ಷಗಳಾದ ಅಪ್ನಾ ದಳ ಮತ್ತು ಸುಹಲ್ದೇವ್‌ ಭಾರತೀಯ ಸಮಾಜ್‌ ಪಕ್ಷಗಳ ಶಾಸಕರನ್ನು ಉದ್ದೇಶಿಸಿ ಮಾತನಾಡಿದ ಆದಿತ್ಯನಾಥ್‌, ‘ನಾವೆಲ್ಲರೂ ಒಟ್ಟಾಗಿ ಉತ್ತರ ಪ್ರದೇಶವನ್ನು  ಅಭಿವೃದ್ಧಿ ಪಡಿಸೋಣ ಮತ್ತು ಗೂಂಡಾ ರಾಜ್ಯಕ್ಕೆ ಕೊನೆ ಹಾಡೋಣ’ ಎಂದು ಹೇಳಿದರು.

ಷಹಜಾನ್‌ಪುರ ಕ್ಷೇತ್ರದ ಶಾಸಕ ಸೌರೇಶ್‌ ಖನ್ನಾ ಅವರು ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಆದಿತ್ಯನಾಥ್‌ ಅವರ ಹೆಸರನ್ನು ಸೂಚಿಸಿದರು. ಈ ಪ್ರಸ್ತಾವವನ್ನು ಅವಿರೋಧವಾಗಿ ಅಂಗೀಕರಿಸಲಾಯಿತು ಎಂದು ಮೂಲಗಳು ತಿಳಿಸಿವೆ. ಆದಿತ್ಯನಾಥ್‌ ಅವರ ಸಂಪುಟದ ಇತರ ಸದಸ್ಯರ ಹೆಸರುಗಳನ್ನು ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೂ ಮುನ್ನ ಘೋಷಿಸಲಾಗುವುದು ಎಂದು ಮೂಲಗಳು ಹೇಳಿವೆ.

ಹಳೆಯ ಬೇಡಿಕೆ: ಆದಿತ್ಯನಾಥ್‌ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಬೇಕು ಎಂದು ಅವರ ಬೆಂಬಲಿಗರು ಚುನಾವಣೆಗೂ ಮುನ್ನವೇ ಬೇಡಿಕೆ ಇಟ್ಟಿದ್ದರು. ಪ್ರಚಾರದ ಸಂದರ್ಭದಲ್ಲೂ ಈ ಕೂಗು ಇತ್ತು.

ಚುನಾವಣೆಯಲ್ಲಿ ಪಕ್ಷದ ತಾರಾ ಪ್ರಚಾರಕರಾಗಿದ್ದ ಯೋಗಿ ಆದಿತ್ಯನಾಥ್‌, ರಾಜ್ಯದ ವಿವಿಧ ಕಡೆಗಳಲ್ಲಿ 100 ಚುನಾವಣಾ ರ್‌್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ್ದರು. ಭಾನುವಾರ ನಡೆಯಲಿರುವ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಷಾ ಭಾಗವಹಿಸಲಿದ್ದಾರೆ ಎಂದು ವೆಂಕಯ್ಯ ನಾಯ್ಡು ಹೇಳಿದರು.

‘ರಾಜ್ಯದ ಸಮಗ್ರ ಅಭಿವೃದ್ಧಿ’ (ಲಖನೌ ವರದಿ): ಪ್ರಧಾನಿ ನರೇಂದ್ರ ಮೋದಿ ಅವರ ‘ಸಬ್‌ಕಾ ಸಾಥ್‌, ಸಬ್‌ಕಾ ವಿಕಾಸ್‌’ (ಎಲ್ಲರ ಜೊತೆಗೆ, ಎಲ್ಲರ ಏಳಿಗೆ) ಘೋಷ ವಾಕ್ಯದ ಅಡಿಯಲ್ಲಿ ಕೆಲಸ ಮಾಡುವುದಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ   ಯೋಗಿ ಆದಿತ್ಯನಾಥ್‌ ಹೇಳಿದರು.
ಮುಖ್ಯಮಂತ್ರಿಯಾಗಿ ರಾಜ್ಯವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸುವ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದರು.

‘ಜಾತ್ಯತೀತ ಮೌಲ್ಯದ ಮೇಲೆ ಹಲ್ಲೆ’
ನವದೆಹಲಿ (ಪಿಟಿಐ): ಯೋಗಿ ಆದಿತ್ಯನಾಥ್‌ ಅವರನ್ನು ಉತ್ತರ ಪ್ರದೇಶ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿದ ಬಿಜೆಪಿಯ ಕ್ರಮವನ್ನು ಕಾಂಗ್ರೆಸ್ ಮುಖಂಡ ವೀರಪ್ಪ ಮೊಯಿಲಿ ಅವರು ‘ಜಾತ್ಯತೀತ ತತ್ವದ ಮೇಲಿನ ದೊಡ್ಡ ಹಲ್ಲೆ’ ಎಂದು ಹೇಳಿದ್ದಾರೆ.

ಜನರ ಹಿತಾಸಕ್ತಿ ಕಾಯುವ ಕೆಲಸ ಮುಂದುವರಿಸುವುದಾಗಿ ಕಾಂಗ್ರೆಸ್ ಹೇಳಿದೆ.

‘ಜಾತಿ, ಧರ್ಮಗಳನ್ನು ಮೀರಿ ಭಾರತವನ್ನು ಕಟ್ಟಲಾಗಿದೆ. ವಸುಧೈವ ಕುಟುಂಬಕಂ ಎಂಬುದು ನಮ್ಮ ಜಾತ್ಯತೀತ ಸಮಾಜದ ತಳಪಾಯ. ಆದಿತ್ಯನಾಥ್‌ ಅವರ ಆಯ್ಕೆ ಜಾತ್ಯತೀತ ಮೌಲ್ಯದ ಮೇಲಿನ ಹಲ್ಲೆ’ ಎಂದು ಮೊಯಿಲಿ ಹೇಳಿದರು.

ಮುಖ್ಯಾಂಶಗಳು
* ಅಚ್ಚರಿ ತಂದ ನಿರ್ಧಾರ
* ಇಂದು ಮಧ್ಯಾಹ್ನ 2.15ಕ್ಕೆ ಪ್ರಮಾಣವಚನ
* ಕೊನೆ ಕ್ಷಣದವರೆಗೂ ರಹಸ್ಯವಾಗಿದ್ದ ಮಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT