ಹುಬ್ಬಳ್ಳಿ: ‘2007ರಲ್ಲಿಯೇ ಹುಬ್ಬಳ್ಳಿ–ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ ಆಶ್ರಯ ಮನೆಗಳ ನಿರ್ಮಾಣಕ್ಕಾಗಿ ಯಲ್ಲಾಪುರ ಗ್ರಾಮದಲ್ಲಿ 35 ಎಕರೆ ಜಮೀನು ಖರೀದಿಸಿದೆ. ಆದರೆ, ಶಾಸಕ ಪ್ರಸಾದ ಅಬ್ಬಯ್ಯ ಅವರು ನಾಲ್ಕು ವರ್ಷಗಳಿಂದ ಒಂದು ಮನೆಯನ್ನೂ ಕಟ್ಟಿಸಿಕೊಟ್ಟಿಲ್ಲ’ ಎಂದು ಬಿಜೆಪಿ ಹುಬ್ಬಳ್ಳಿ–ಧಾರವಾಡ ಮಹಾನಗರ ಜಿಲ್ಲಾ ಎಸ್.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ರಂಗನಾಯಕ ತಪೇಲಾ ಟೀಕಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ತಪೇಲಾ, ‘900 ಜನ ಫಲಾನುಭವಿಗಳ ಪಟ್ಟಿಯನ್ನು ಶಾಸಕರು ಸರ್ಕಾರದ ಮಂಜೂರಾತಿಗಾಗಿ ಕಳಿಸಿದ್ದಾರೆ.
ಆದರೆ, ತಮ್ಮ ಪಕ್ಷದ ಕಾರ್ಯಕರ್ತರು ಹಾಗೂ ಹಣ ನೀಡಿದವರ ಹೆಸರುಗಳನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿದೆ. ಮನೆಗಳಿಗಾಗಿ ಅರ್ಜಿ ಸಲ್ಲಿಸಿದ ಎಲ್ಲರನ್ನೂ ಕೂಡಿಸಿಕೊಂಡು ಪ್ರತಿಭಟನೆ ನಡೆಸಲಿದ್ದೇವೆ’ ಎಂದು ತಿಳಿಸಿದ್ದಾರೆ.
ಯಲ್ಲಾಪುರ ಗ್ರಾಮದ ಸರ್ವೆ ನಂಬರಿನಲ್ಲಿ ನಿರ್ಮಿಸಿರುವ 430 ಮನೆಗಳನ್ನು ಕನ್ಯಾನಗರ, ರಾಜಗೋಪಾಲನಗರ ಹಾಗೂ ಮಂಟೂರ ರಸ್ತೆಯ ಸುಡಗಾಡ ಚಾಳದ ಕೊಳೆಗೇರಿ ಪ್ರದೇಶಗಳ ನಿವಾಸಿಗಳಿಗೆ ನೀಡಬೇಕು’ ಎಂದೂ ಅವರು ಒತ್ತಾಯಿಸಿದ್ದಾರೆ.