ಹೊಸನಗರ: ತಾಲ್ಲೂಕಿನಾದ್ಯಂತ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಖಂಡಿಸಿ ಹಾಗೂ ಗುಣಮಟ್ಟದ ವಿದ್ಯುತ್ ಸರಬರಾಜಿಗೆ ಆಗ್ರಹಿಸಿ ತಾಲ್ಲೂಕು ಬೆಳೆಗಾರರ ಸಂಘದ ಸದಸ್ಯರು ಮಂಗಳವಾರ ಮೆಸ್ಕಾಂ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ಮೂರು ತಿಂಗಳಿಂದ ಗುಣಮಟ್ಟದ ವಿದ್ಯುತ್ ಪೂರೈಕೆಯಾಗದೆ ಕೃಷಿ ಪಂಪ್ ಸೆಟ್ಗಳ ಕಾಯಿಲ್ಗಳು ಸುಟ್ಟು ಹೋಗುತ್ತಿವೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಸಂಘದ ಕಾರ್ಯದರ್ಶಿ ಎಂ.ವಿ.ಜಯರಾಮ್ ದೂರಿದರು.
ಹೊಸದಾಗಿ ತಾಲ್ಲೂಕಿಗೆ 110 ಕೆ.ವಿ.ವಿದ್ಯುತ್ ಸರಬರಾಜು ತಂತಿ ಎಳೆಯುವ ಕಾಮಗಾರಿಯು ವಿಳಂಬ ಆಗುತ್ತಿದೆ. ಕೂಡಲೇ ಕಾಮಗಾರಿಯನ್ನು ಪೂರ್ಣ ಮಾಡುವಂತೆ ಅವರು ಈ ಸಂದರ್ಭದಲ್ಲಿ ಸಾಗರದ ಮೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ಗೆ ದೂರವಾಣಿ ಮೂಲಕ ಒತ್ತಾಯಿಸಿದರು.
ದೀರ್ಘಕಾಲಿಕ ತೋಟಗಾರಿಕಾ ಬೆಳೆಗಳಾದ ಅಡಿಕೆ, ತೆಂಗಿನ ತೋಟಗಳು ಬರದಿಂದಾಗಿ ಒಣಗುತ್ತಿವೆ. ಇರುವ ಅಲ್ಪಸ್ವಲ್ಪ ನೀರನ್ನು ಮೇಲೆತ್ತಿ ತೋಟಕ್ಕೆ ಹರಿಸಲು ಸಮರ್ಪಕ ವಿದ್ಯುತ್ ಸಹ ನೀಡುತ್ತಿಲ್ಲ ಎಂದು ಆರೋಪಿಸಿದರು.
ತಾಲ್ಲೂಕಿನಾದ್ಯಂತ ಅನಧಿಕೃತ ಕೊಳವೆಬಾವಿಗಳನ್ನು ಕೊರೆದು ಪಂಪ್ ಸೆಟ್ಗಳನ್ನು ಅಳವಡಿಸಲಾಗುತ್ತಿದೆ. ಅದರ ವಿರುದ್ಧ ಕಾನೂನು ಕ್ರಮ ಜರುಗಿ
ಸುವಂತೆ ಅವರು ಒತ್ತಾಯಿಸಿದರು.
ಪ್ರತಿಭಟನಾ ಮೆರವಣಿಗೆಯು ಗಣಪತಿ ದೇವಸ್ಥಾನದಿಂದ ಹೊರಟು ಪ್ರಮುಖ ಬೀದಿಗಳಲ್ಲಿ ಸಾಗಿ ಮೆಸ್ಕಾಂ ಕಚೇರಿ ಆವರಣಕ್ಕೆ ಬಂದು ತಲುಪಿತು.
ಬೆಳೆಗಾರರ ಸಂಘದ ಅಧ್ಯಕ್ಷ ಹೊಸಕೋಟೆ ಹಾಲಪ್ಪ ಗೌಡ, ಬೆಳೆಗಾರರರಾದ ಜಬಗೋಡು ಹಾಲಪ್ಪ ಗೌಡ, ದುಮ್ಮಾ ಅಶೋಕ್, ಶ್ರೀಧರ ಉಡುಪ, ಪಿ.ಎನ್.ಪ್ರಭಾಕರ, ಕೆ.ವಿ.ಜಗದೀಶ್, ಕೆ.ಎನ್.ಸ್ವರೂಪ, ದ್ಯಾವರ್ಸ ರಘು, ಬೈಸೆ ರವಿಕುಮಾರ್, ಶ್ರೀಪತಿರಾವ್, ಸಾಕಮ್ಮ ಮನೋಹರ್ ಹಾಜರಿದ್ದರು.