ಕೆ.ಆರ್.ನಗರ: ‘ಈಗ ನಾನು ಕಾಂಗ್ರೆಸ್ನಲ್ಲಿಯೇ ಇದ್ದೇನೆ. ಯಾರೂ ಕರೆಯದೇ ಇದ್ದರೂ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರವೂ ಮಾಡುತ್ತೇನೆ. ನನಗೆ ಅಲ್ಲಿನ ಅಭ್ಯರ್ಥಿ ಮುಖ್ಯ. ಕಾಂಗ್ರೆಸ್ನಲ್ಲಿ ಇರುವವರೆಗೆ ನಿಯತ್ತಾಗಿಯೇ ಇರುತ್ತೇನೆ’ ಎಂದು ಕಾಂಗ್ರೆಸ್ ಮುಖಂಡ ಅಡಗೂರು ಎಚ್.ವಿಶ್ವನಾಥ್ ತಿಳಿಸಿದರು.
‘ಸಿ.ಎಸ್.ಪುಟ್ಟರಾಜು ನಮ್ಮ ಸಂಸದರು, ಅಭಿಮಾನದಿಂದ ಹೇಳಿ ದ್ದಾರೆ’ ಎಂದು ಬುಧವಾರ ಇಲ್ಲಿ ಹೇಳಿದರು. ‘ಚುನಾವಣೆ ಸಂದರ್ಭದಲ್ಲಿ ಊಹಾಪೋಹ ಸಾಮಾನ್ಯ. ವಿಶ್ವನಾಥ್ ಅವರನ್ನು ಕಾಂಗ್ರೆಸ್ ಉಪೇಕ್ಷೆ ಮಾಡಿದೆ ಎಂದು ಜನರ ಮನಸ್ಸಿನಲ್ಲಿದೆ. ಹೀಗಾಗಿ, ಕಾಂಗ್ರೆಸ್ ಬಿಟ್ಟು ಬಿಡುತ್ತಾರೇನೋ? ಬಿಟ್ಟರೆ ನಮ್ಮೊಟ್ಟಿಗೆ ಬರಲಿ ಎನ್ನುವ ಪ್ರೀತಿಗೆ ಹಾಗೆ ಹೇಳಿದ್ದಾರೆ’ ಎಂದರು.
‘ಯಡಿಯೂರಪ್ಪ ನನಗೆ ಆತ್ಮೀಯರು. ಅವರಂತೆ ಎಲ್ಲ ಪಕ್ಷದಲ್ಲೂ ನನ್ನ ಸ್ನೇಹಿತರು ಇದ್ದಾರೆ, ಸಂಪರ್ಕದಲ್ಲೂ ಇದ್ದಾರೆ. ಅವರೆಲ್ಲರೂ ಒಳ್ಳೆಯದನ್ನೇ ಬಯಸುತ್ತಾರೆ. ಇದೆಲ್ಲ ಪ್ರೀತಿ, ವಿಶ್ವಾಸದಿಂದ ಬರುವಂಥದ್ದು. ಇದರಲ್ಲಿ ವಿಶ್ವಾಸ ಬಿಟ್ಟರೆ ಬೇರೇನೂ ಇಲ್ಲ. ಅದರಂತೆ ಸಂಸದ ಪುಟ್ಟರಾಜು ವಿಶ್ವಾಸದ ಮೇಲೆ ಮಾತನಾಡಿದ್ದಾರೆ ಎಂದರು.