ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡ್ಡದಾರಿ ಪ್ರವೇಶ, ಸಿಕ್ಸ್‌ಪ್ಯಾಕ್‌ ಬಂಡವಾಳ!

Last Updated 23 ಮಾರ್ಚ್ 2017, 19:30 IST
ಅಕ್ಷರ ಗಾತ್ರ

‘ಇತ್ತೀಚೆಗೆ ಬರುತ್ತಿರುವ ಹೊಸ ಕಲಾವಿದರಲ್ಲಿ ಎಫರ್ಟ್‌ ಇಲ್ಲ. ಅವರೆಲ್ಲ ಶಾರ್ಟ್‌ಕಟ್ ಮೂಲಕ ಚಿತ್ರರಂಗಕ್ಕೆ ಬರುತ್ತಿದ್ದಾರೆ. ಹಾಗಾಗಿಯೇ ಯಾರೂ ನೆಲೆಯೂರಲಾಗದೆ ಹೀಗೆ ಬಂದು ಹಾಗೆ ಹೋಗುತ್ತಿದ್ದಾರೆ. ಸೌಂದರ್ಯ ಪ್ರಜ್ಞೆ ಮತ್ತು ಸಿಕ್ಸ್‌ಪ್ಯಾಕ್ ದೇಹ ಇವರಡೇ ಅವರ ಬಂಡವಾಳವಾಗುತ್ತಿರುವುದು ಬೇಸರದ ಸಂಗತಿ. ಸಿನಿಮಾಗೆ ಬರುವುದಕ್ಕೂ ಮುಂಚೆ ರಂಗಭೂಮಿಯಲ್ಲಿ ಒಂದಷ್ಟು ದಿನ ಕೆಲಸ ಮಾಡಿದರೆ ಮಾತ್ರ ಇಲ್ಲಿ ನೆಲೆ ಕಂಡುಕೊಳ್ಳಲು ಸಾಧ್ಯ’.

ಯುವ ನಟರ ಬಗ್ಗೆ ದುನಿಯಾ ವಿಜಿ ಅವರ ಅನಿಸಿಕೆಯಿದು. ಪಾಳುಬಿದ್ದಿರುವ ಮಿನರ್ವ ಮಿಲ್‌ನ ಕಟ್ಟದೊಳಗೆ ‘ಕನಕ’ ಚಿತ್ರದ ಹೊಡೆದಾಟದ ಚಿತ್ರೀಕರಣ ಮುಗಿಸಿಕೊಂಡು ಸುದ್ದಿಗಾರರ ಎದುರು ಕೂತಿದ್ದ ವಿಜಯ್, ಚಿತ್ರರಂಗದ ಸ್ಥಿತಿಗತಿ ಬಗ್ಗೆಯೂ ಅನೌಪಚಾರಿಕವಾಗಿ ಮಾತನಾಡಿದರು.
ಜೀನ್ಸ್ ಪ್ಯಾಂಟ್, ಟೀ ಶರ್ಟ್‌, ಅದರ ಮೇಲೆ ಖಾಕಿ ಅಂಗಿ ಧರಿಸಿದ್ದ ವಿಜಯ್ ಅವರ ಪೋಷಾಕು, ಚಿತ್ರದಲ್ಲಿ ಅವರದು ಆಟೋ ಚಾಲಕನ ಪಾತ್ರ ಎನ್ನುವುದನ್ನು ಸೂಚಿಸುತ್ತಿತ್ತು. ತಮ್ಮ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಮಾಧ್ಯಮ ಮಂದಿಯನ್ನು ಶೂಟಿಂಗ್ ಸ್ಥಳಕ್ಕೆ ಚಿತ್ರತಂಡ ಕರೆಸಿಕೊಂಡಿತ್ತು.

(ಆರ್. ಚಂದ್ರು)

‘ಇದು ನನ್ನ ಬ್ಯಾನರ್‌ನಿಂದ ನಿರ್ಮಾಣವಾಗುತ್ತಿರುವ ಮೂರನೇ ಚಿತ್ರ’ ಎಂದು ಮಾತು ಆರಂಭಿಸಿದ ನಿರ್ಮಾಪಕ–ನಿರ್ದೇಶಕ ಆರ್. ಚಂದ್ರು, ‘ನಾನು ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದಾಗಿನಿಂದಲೂ ವಿಜಯ್ ನನಗೆ ಪರಿಚಿತರು. ನಮ್ಮಿಬ್ಬರ ಸ್ನೇಹ ಹದಿನೈದು ವರ್ಷ ಹಳೆಯದು. ಸ್ವತಂತ್ರವಾಗಿ ನಿರ್ದೇಶನಕ್ಕಿಳಿದ ಬಳಿಕ ಇಬ್ಬರೂ ಸೇರಿ ಒಂದು ಚಿತ್ರ ಮಾಡೋಣ ಅಂದುಕೊಂಡರೂ ಆಗಿರಲಿಲ್ಲ. ಇದೀಗ ‘ಕನಕ’ ಮೂಲಕ ಕಾಲ ಕೂಡಿ ಬಂದಿದೆ’ ಎಂದರು.

‘ವಿಜಯ್ ಅವರ ವ್ಯಕ್ತಿತ್ವವನ್ನು ಈ ಸಮಾಜ ನೋಡುವ ಬಗೆಯೇ ಬೇರೆ. ಆದರೆ, ಅವರ ನಿಜ ವ್ಯಕ್ತಿತ್ವ ಏನೆಂದು ನಾನು ಹತ್ತಿರದಿಂದ ಬಲ್ಲೆ. ಈ ಚಿತ್ರ ಹಲವು ಬಗೆಯಲ್ಲಿ ಅವರ ಬದುಕಿಗೆ ಹತ್ತಿರವಾದುದಾಗಿದೆ. ವಿಜಯ್ ಅವರು ನಿಜ ಜೀವನದಲ್ಲೂ ರಾಜಕುಮಾರ್ ಅವರ ಅಭಿಮಾನಿ. ಅಂತೆಯೇ ನಮ್ಮ ಚಿತ್ರ ಶೀರ್ಷಿಕೆಯ ಅಡಿಬರಹ ಕೂಡ ‘ಅಣ್ಣಾವ್ರ ಅಭಿಮಾನಿ’. ಅವಿದ್ಯಾವಂತ ಕನಕ ಅಣ್ಣಾವ್ರ ಆದರ್ಶಗಳನ್ನು ಇಟ್ಟುಕೊಂಡು ಹೇಗೆ ಮಾದರಿಯಾಗಿ ಬದುಕುತ್ತಾನೆ ಎಂಬುದೇ ಕಥೆ’ ಎಂದು ಚಿತ್ರದ ತಿರುಳನ್ನು ಹಂಚಿಕೊಂಡರು.

(ಸತ್ಯ ಹೆಗಡೆ)

ಹೊಡೆದಾಟದ ದೃಶ್ಯಗಳನ್ನು ಚಿತ್ರೀಕರಿಸಿ ಆಯಾಸಗೊಂಡತೆ ಕಂಡುಬಂದ ಕ್ಯಾಮೆರಾಮನ್ ಸತ್ಯ ಹೆಗಡೆ, ‘ಒಳ್ಳೆಯ ಕಥೆ ಇರುವ ಸಿನಿಮಾ ಇದು’ ಎಂದರು. ‘ದುನಿಯಾ’ ನಂತರ ವಿಜಯ್ ಮತ್ತು ಸಾಹಸ ನಿರ್ದೇಶಕ ಡಿಫರೆಂಟ್ ಡ್ಯಾನಿ ಅವರು ಮತ್ತೆ ಒಂದಾಗಿ ಕೆಲಸ ಮಾಡುತ್ತಿರುವುದು ವಿಶೇಷ. ಈ ಚಿತ್ರ ಡ್ಯಾನಿ ಅವರ ವೃತ್ತಿಜೀವನದ 541ನೇ ಚಿತ್ರ.

ನವೀನ್ ಸಜ್ಜು ಸಂಗೀತ ನಿರ್ದೇಶನವಿರುವ ಚಿತ್ರದಲ್ಲಿ ಇಬ್ಬರು ನಾಯಕಿಯರು. ಮಾನ್ವಿತಾ ಹರೀಶ್ ಸದ್ಯ ಆಯ್ಕೆಯಾಗಿದ್ದು, ಮತ್ತೊಬ್ಬರ ಆಯ್ಕೆ ಪ್ರಕ್ರಿಯೆಯಲ್ಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT