ಕರ್ನಾಟಕ ಲಲಿತಕಲಾ ಅಕಾಡೆಮಿ ವತಿಯಿಂದ ನಗರದಲ್ಲಿ ಗುರುವಾರ ಆಯೋಜಿಸಿದ್ದ ಸಮಾರಂಭದಲ್ಲಿ ರಾಜ್ಯದ ಚಿತ್ರಕಲಾವಿದೆ ವಿ.ಅಂಜಲಿ ಸೇರಿದಂತೆ ವಿವಿಧ ರಾಜ್ಯಗಳ 14 ಕಲಾವಿದರಿಗೆ ‘ಕಲಾ ಸಂಕ್ರಾಂತಿ ಪುರಸ್ಕಾರ’ವನ್ನು ಪ್ರದಾನ ಮಾಡಲಾಯಿತು.
ಬಳ್ಳಾರಿಯ ಶಿವಾನಂದ ಎಚ್. ಬಂಟನೂರು ಅವರ ‘ಸಮಕಾಲೀನ ಕನ್ನಡ ದೃಶ್ಯ ಕಲಾ ಸಾಹಿತ್ಯ’ ಕೃತಿಗೂ ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿ ತಲಾ ₹1 ಲಕ್ಷ ನಗದು ಹಾಗೂ ಚಿನ್ನದ ಸ್ಮರಣಿಕೆಯನ್ನು ಒಳಗೊಂಡಿದೆ. ನಿತ್ಯ ರೈಲಿನಲ್ಲಿ ಪ್ರಯಾಣಿಸುವವರ ಸಂಕಷ್ಟದ ಬಗ್ಗೆ ಅಂಜಲಿ ರಚಿಸಿದ್ದ ಕಲಾಕೃತಿಗೆ ಈ ಪ್ರಶಸ್ತಿ ಸಿಕ್ಕಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಮುದ್ದಲಿಂಗನಹಳ್ಳಿಯ ನಿವಾಸಿಯಾದ ಅವರು ಚಿಕ್ಕಂದಿನಲ್ಲೇ ಚಿತ್ರಕಲೆ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದರು. ಅವರಿಗೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿಗಳು ಸಂದಿವೆ.
ಅಕಾಡೆಮಿ 50 ವರ್ಷ ಪೂರೈಸಿದ್ದರಿಂದ ರಾಷ್ಟ್ರೀಯ ಕಲಾ ಪ್ರದರ್ಶನ ಆಯೋಜಿಸಲಾಗಿತ್ತು. ಮೊದಲ ಸುತ್ತಿನಲ್ಲಿ 117 ಕಲಾಕೃತಿ, ಅಂತಿಮ ಸುತ್ತಿನಲ್ಲಿ 14 ಕಲಾಕೃತಿಗಳನ್ನು ಈ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿತ್ತು.