ಕೊಪ್ಪಳ: ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಮೆರವಣಿಗೆ ಯಲಬುರ್ಗಾ ತಾಲ್ಲೂಕಿನ ಹಿರೇವಂಕಲಕುಂಟಾ ಗ್ರಾಮದಲ್ಲಿ ಶುಕ್ರವಾರ ವೈಭವದಿಂದ ನಡೆಯಿತು.
ಮೆರವಣಿಗೆಯಲ್ಲಿ ಗೊಂಬೆ ಕುಣಿತ, ಮಹಿಳಾ ಮತ್ತು ಪುರುಷರ ಡೊಳ್ಳು ಕುಣಿತ ತಂಡಗಳು, ಹಗಲು ವೇಷಗಾರ ಕಲಾವಿದರು, ಪೂರ್ಣ ಕುಂಭ ಹೊತ್ತ ಮಹಿಳೆಯರು, ಶಾಲಾ ಮಕ್ಕಳು ಪಾಲ್ಗೊಂಡು ಉತ್ಸವಕ್ಕೆ ಮೆರುಗು ನೀಡಿದರು.
ಸಮ್ಮೇಳನದ ಅಧ್ಯಕ್ಷ ರಂಗರಾವ್ ನಿಡಗುಂದಿ ಅವರನ್ನು ಅಲಂಕೃತ ಎತ್ತಿನಬಂಡಿಯಲ್ಲಿ ಸಮ್ಮೇಳನದ ಅಂಗಣದತ್ತ ಕರೆದೊಯ್ಯಲಾಯಿತು.
ಕಲಾ ತಂಡಗಳೇ ಮೇಳೈಸಿದ್ದ ಗ್ರಾಮದಲ್ಲಿ ಉತ್ಸವದ ವಾತಾವರಣ ನಿರ್ಮಾಣವಾಗಿದೆ.
ಉದ್ಘಾಟನೆ
ಕಸಾಪ ಅದ್ಯಕ್ಷ ಡಾ.ಮನು ಬಳಿಗಾರ್ ಅವರು ಸಮ್ಮೇಳನ ಉದ್ಘಾಟನೆ ನೆರವೇರಿಸಿದರು. ಗಂಗಾವತಿಯ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಆತಿಥ್ಯವನ್ನು ಮನು ಬಳಿಗಾರ್ ಸ್ಮರಿಸಿದರು.
ಬೆಂಗಳೂರಿನಲ್ಲಿ ಕನ್ನಡ ಉಳಿಯಬಹುದೇ ಎಂಬ ಆತಂಕ ಇದೆ. ಕನ್ನಡ ಉಳಿದಿರುವುದೇ ಈ ಭಾಗದಲ್ಲಿ. ಏಕೆಂದರೆ ಇದು ತಿರುಳ್ಗನ್ನಡ ನಾಡು. ಇಂಗ್ಲಿಷ್ ವ್ಯಾಮೋಹ ಅಡುಗೆ ಮನೆವರೆಗೂ ಬಂದಿದೆ ಎಂದು ಅಭಿಪ್ರಾಯಪಟ್ಟರು.