ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಸರನ ಬೀಡಿನಲ್ಲಿ ಕನ್ನಡ ಕಲರವ

ಅಕ್ಷರ ಗಾತ್ರ

ಹುಬ್ಬಳ್ಳಿ: ಬೈಲಹೊಂಗಲ ತಾಲ್ಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಜ್ಜಾಗಿರುವ ನೇಸರಗಿ ‘ನೇಸರನ ಬೀಡು’ ಎಂದೇ ಖ್ಯಾತಿವೆತ್ತಿದೆ.

ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ಜೋಡು ಗುಡಿ ದೇಗುಲ ಸಂಕೀರ್ಣ ದಲ್ಲಿರುವ ಈಶ್ವರ ಲಿಂಗಗಳ ಮೇಲೆ ಸೂರ್ಯನ ಪ್ರಭಾವಳಿ ವರ್ಷವಿಡೀ ಬೀಳುವುದರಿಂದ ‘ನೇಸರನ ಬೀಡು’ ಎಂದು ಕರೆಯಿಸಿಕೊಂಡಿದ್ದ ಗ್ರಾಮ ‘ನೇಸರಗಿ’ ಎಂದು ಹೆಸರಾಗಿದೆ.

ಸಾಹಿತ್ಯ, ಇತಿಹಾಸ, ಕಲೆ, ಸಂಸ್ಕೃತಿ, ಶಿಕ್ಷಣ, ವ್ಯಾಪಾರ, ಕೃಷಿ, ಎಲ್ಲ ರಂಗಗಳಲ್ಲಿಯೂ ಮುಂಚೂಣಿಯಲ್ಲಿ ಇರುವ ಇದು, ಶಾಸನಗಳ ಉಲ್ಲೇಖ ದಂತೆ ನೇಸರಗಿ ಗಂಗ, ಕದಂಬ, ರಾಷ್ಟ್ರಕೂಟ, ಶಾತವಾಹನ, ಚಾಲುಕ್ಯ, ವಿಜಯನಗರ, ಕಲಚೂರಿಗಳು, ಆದಿಲ್‌ ಷಾಹಿಗಳು, ಮರಾಠರು, ಸವದತ್ತಿಯ ರಟ್ಟರು... ಮುಂತಾದ ಪ್ರಸಿದ್ಧ ರಾಜಮನೆತನಗಳ ಆಳ್ವಿಕೆಗೆ ಒಳಪಟ್ಟಿದೆ.

ಅಲ್ಲದೆ ಕಾಲಾನಂತರ ಬೆಳವಡಿ, ಕಿತ್ತೂರು, ಕೆಳದಿ, ವಂಟಮೂರಿ, ಶಿರಸಂಗಿ ಸಂಸ್ಥಾನಿಕರ ಸುಪರ್ದಿಯಲ್ಲಿ ಗ್ರಾಮ ಹಲವು ಏಳು– ಬೀಳುಗಳನ್ನು ಕಂಡಿದೆ. ಕಲ್ಯಾಣ ಚಾಲುಕ್ಯರು, ಸವದತ್ತಿಯ ರಟ್ಟರ ಕಾಲದಲ್ಲಿ ಗ್ರಾಮದಲ್ಲಿ ಐತಿಹಾಸಿಕ ದೇಗುಲಗಳು ನಿರ್ಮಾಣಗೊಂಡಿವೆ.

ಕಲ್ಯಾಣ ಚಾಲುಕ್ಯರ ದೊರೆ ನಾಲ್ವಡಿ ಸೋಮೇಶ್ವರನ ಸಾಮಂತ ನಾಗಿದ್ದ ಬಾಚಯ್ಯ ನಾಯಕ ನೇಸರಗಿ ಯಲ್ಲಿ ಮಾಣಿಕೇಶ್ವರ ದೇಗುಲವನ್ನು ಹಾಗೂ ಆತನ ಹೆಂಡತಿ ಮಾಯಾದೇವಿ ಸಿದ್ದೇಶ್ವರ ದೇಗುಲವನ್ನು ಕಟ್ಟಿಸಿದರೆಂಬ ಉಲ್ಲೇಖವಿದೆ. ಇವೇ ದೇಗುಲಗಳು ಇಂದು ‘ಜೋಡಗುಡಿ’ ಎಂದು ಹೆಸರಾಗಿವೆ. ಗರ್ಭಗೃಹ, ಅಂತರಾಳ, ಸಭಾಮಂಟಪ, ಸ್ತಂಭಗಳು, ಅಧಿ ಷ್ಠಾನ, ಭಿತ್ತಿ, ಬಂಧನಾ ಪಟ್ಟಿಗಳನ್ನು ಒಳಗೊಂಡಿರುವ ದೇಗುಲಗಳು ಆಕರ್ಷಕವಾಗಿವೆ.

ಮಾಣಿಕೇಶ್ವರ ದೇಗುಲದ ಮೇಲೆ ಪ್ರತಿಷ್ಠಾಪಿತವಾಗಿ ರುವ ನಟರಾಜನ ವಿಗ್ರಹ ಗಮನ ಸೆಳೆಯುವಂತಿದೆ. ನಿಧಿಗಳ್ಳರ ದುರಾಸೆಗೆ ಬಲಿಯಾಗಿ ದೇಗುಲದ ಆವರಣ, ಹಾಗೂ ಆವರಣದಲ್ಲಿದ್ದ ಶಾಸನ ಶಿಥಿಲ ಗೊಂಡಿವೆ. ಸದ್ಯ ದೇಗುಲವನ್ನು ಜೀರ್ಣೋದ್ಧಾರ ಮಾಡುವ ಅಗತ್ಯವಿದೆ.

ಗ್ರಾಮದ ಪ್ರಮುಖ ಆಕರ್ಷಣೆ ‘ವೀರಭದ್ರ ದೇಗುಲ’. ಇದು ಆರಂಭದಲ್ಲಿ ಜೈನ ಸಂಪ್ರದಾಯಕ್ಕೆ ಸೇರಿತ್ತು. ಇದಕ್ಕೆ ಸಾಕ್ಷಿಯಾಗಿ ದೇಗುಲದ ಸಭಾ ಮಂಟಪದ ಭಿತ್ತಿಗಳಲ್ಲಿ ಇಂದಿಗೂ ಜಿನ ಬಿಂಬಗಳಿರುವುದನ್ನು ಕಾಣಬಹುದು. ನಂತರ ಶೈವ ಆರಾ ಧನೆಯ ಕೇಂದ್ರವಾದ ದೇಗುಲದಲ್ಲಿ ದಕ್ಷಬ್ರಹ್ಮ, ಪ್ರಸೂತಾ ದೇವಿ ಸಹಿತ ವೀರಭದ್ರ ಮೂರ್ತಿಯನ್ನು ಪ್ರತಿಷ್ಠಾಪಿಸ ಲಾಗಿದೆ.

ಅಲ್ಲದೆ, ದೇಗುಲದ ಒಳಾಂಗಣ ದಲ್ಲಿ ಈಶ್ವರ ಲಿಂಗ, ವೃಷಭ, ಗಣಪತಿ ಮೂರ್ತಿಗಳನ್ನು ಸ್ಥಾಪಿಸಲಾಗಿದೆ. ಈ ದೇಗುಲ 11ನೆಯ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ನಿರ್ಮಿತ ವಾಗಿದೆ ಎಂಬ ಉಲ್ಲೇಖವಿದೆ.

ಇದಲ್ಲದೆ ಈಗ ಸಮ್ಮೇಳನ ನಡೆಯುತ್ತಿರುವ ಚನ್ನವೃಷಭೇಂದ್ರ ದೇಗುಲ, ಹನುಮ ದೇವಸ್ಥಾನ, ಗ್ರಾಮ ದೇವಿಯರಾದ ದ್ಯಾಮವ್ವ, ದುರ್ಗವ್ವ ದೇಗುಲಗಳು, ಊರ ಮಧ್ಯದಲ್ಲಿರುವ ಮಸೀದಿ ಇಲ್ಲಿನ ಪ್ರಮುಖ ಧಾರ್ಮಿಕ ಕೇಂದ್ರಗಳಾಗಿವೆ. ಈ ಭಾಗದಲ್ಲಿ ಚನ್ನವೃಷಭೇಂದ್ರ ದೇವರಕೊಂಡ ಅಜ್ಜ, ಸಿದ್ಧಾರೂಢರು ಹಲವು ಪವಾಡ ಮೆರೆದ ಉಲ್ಲೇಖಗಳಿವೆ.

1800ರಿಂದ 1900ರವರೆಗೆ ನೇಸರಗಿಯಲ್ಲಿ ಬಸವಣ್ಣೆಪ್ಪ ಕಾಡಣ್ಣವರ ಹಾಗೂ ಅಡಿವೆಪ್ಪಗೌಡ ಚೋಬಾರಿ ಎಂಬ ಕವಿ– ಲಾವಣಿಕಾರರು ಆಗಿ ಹೋಗಿದ್ದಾರೆ.
‘ಭೂಮಿ ನೇಸರಗಿ ಸೋಮಧುರ ಸುತ’ ಎಂಬ ಅಂಕಿತದೊಂದಿಗೆ ಬಸವಣ್ಣೆಪ್ಪ ಕಾಡಣ್ಣವರ 20ಕ್ಕೂ ಹೆಚ್ಚು ಕಾವ್ಯಗಳನ್ನು ರಚಿಸಿದ್ದು, ಇವರು ಬರೆದ ‘ನುಚ್ಚಿನ ಹೊನ್ನವ್ವ’ ಲಾವಣಿ ಇಂದಿಗೂ ಜನಜನಿತವಾಗಿದೆ. ಇವರು ಬಯಲಾಟ ಕಲಾವಿದರೂ, ಹಾಡುಗಾರರು, ಪಾಕ ಪ್ರವೀಣರೂ ಆಗಿದ್ದುದು ವಿಶೇಷ.

ಕಿತ್ತೂರು ಸಂಸ್ಥಾನ, ಸಂಗೊಳ್ಳಿ ರಾಯಣ್ಣನ ಕಟ್ಟಾ ಅನುಯಾಯಿ, ಸ್ವತಃ ಯೋಧ ಕೂಡ ಆಗಿದ್ದ ಅಡಿವೆಪ್ಪಗೌಡ ಚೋಬಾರಿ ‘ಕರವೀರಭದ್ರ’ ಎಂಬ ಅಂಕಿತದೊಂದಿಗೆ ಹಲವು ಲಾವಣಿ, ಕವನಗಳನ್ನು ರಚಿಸಿದ್ದಾರೆ. ಇವರು ಬರೆದ ‘ಕಿತ್ತೂರು ಕಾಳಗ’ ಎಂಬ ಲಾವಣಿ ಇಂದಿಗೂ ಪ್ರಸಿದ್ಧವಾಗಿದೆ.

ಬೀಸುಕಲ್ಲ ಪದ, ಒಳಕಲ್ಲ ಪದ, ಸೋಬಾನ ಪದ, ಹಂತಿಪದ, ಲಾವಣಿ ಪದ, ಒಡಪು, ಶ್ರೀಕೃಷ್ಣ ಪಾರಿಜಾತ, ನಿಜಗುಣ ಶಿವಯೋಗಿ ದೊಡ್ಡಾಟ, ರಾಧಾನಾಟ... ಇತ್ಯಾದಿ ಜಾನಪದ ಕಲಾ ಪ್ರಕಾರಗಳೂ ಗ್ರಾಮದಲ್ಲಿ ಹಾಸುಹೊಕ್ಕಾಗಿದ್ದು ಹಲವು ಜನಪದ ಕಲಾವಿದರು ಗ್ರಾಮದಲ್ಲಿದ್ದಾರೆ.

ಬೈಲಹೊಂಗಲ ತಾಲ್ಲೂಕಿನ ಪ್ರಮುಖ ಹೋಬಳಿಯಾಗಿರುವ ನೇಸರಗಿಯಲ್ಲಿ ಸರ್ಕಾರಿ ಪದವಿ, ಪಿ.ಯು., ಐಟಿಐ ಕಾಲೇಜುಗಳಿವೆ. ವಿದ್ಯಾಮಂದಿರ ಪ್ರೌಢಶಾಲೆ, ಸರ್ಕಾರಿ ಪ್ರೌಢಶಾಲೆ, ಕುವೆಂಪು ಮಾದರಿ ಶಾಲೆ, ಸರ್ಕಾರಿ ಉರ್ದು ಶಾಲೆ, ಚನ್ನ ವೃಷಭೇಂದ್ರ ಪ್ರಾಥಮಿಕ ಶಾಲೆ...

ಹೀಗೆ ಹಲವು ಶಿಕ್ಷಣ ಸಂಸ್ಥೆಗಳಿವೆ. ಆರೋಗ್ಯ, ಬ್ಯಾಂಕಿಂಗ್, ಸಾರಿಗೆ– ಸಂಪರ್ಕ, ಎಪಿಎಂಸಿ, ತರಕಾರಿ ಮಾರುಕಟ್ಟೆ, ಜಾನುವಾರು ಸಂತೆ, ಸಗಟು ವ್ಯಾಪಾರ– ವ್ಯವಹಾರಗಳಿಗೂ ಸುತ್ತಲಿನ ಹಳ್ಳಿಗಳಿಗೆ ನೇಸರಗಿಯೇ ಕೇಂದ್ರ ಸ್ಥಾನವಾಗಿದೆ.

ಕವಿರಾಜ ಮಾರ್ಗದಲ್ಲಿ ‘ತಿರುಳ್ಗನ್ನಡ ನಾಡು’ ಎಂದು ಉಲ್ಲೇಖಿತವಾದ ವಕ್ಕುಂದ ಗ್ರಾಮದ ಮಕ್ಕಳ ಸಾಹಿತಿ ಚನ್ನಬಸಪ್ಪ ಹೊಸಮನಿ ಅವರ ನೇತೃತ್ವದಲ್ಲಿ ನೇಸರಗಿಯ ಚನ್ನವೃಷಭೇಂದ್ರ ಮಠದಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಅರ್ಥಪೂರ್ಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT