ಗಣೇಶ್ ಮತ್ತು ಸಾಯಿಕುಮಾರ್ ಇಬ್ಬರೂ ಪೊಲೀಸ್ ಅವತಾರದಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಹೃದಯಕ್ಕೆ ಕನ್ನ ಹಾಕುವ ತಯಾರಿ ಬಹುತೇಕ ಪೂರ್ಣಗೊಂಡಿದೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ‘ಪಟಾಕಿ’ ಟ್ರೈಲರ್ ಸದ್ದು ಮಾಡುತ್ತಿದ್ದು, ಅದಕ್ಕೆ ಇನ್ನೊಂದಷ್ಟು ಮೆರುಗು ನೀಡುವಂತೆ ಟೀಸರ್ ಅನಾವರಣ ಮಾಡಲಾಗಿದೆ.
ತೆಲುಗಿನಲ್ಲಿ ಭರ್ಜರಿ ಗೆಲುವು ಪಡೆದ ‘ಪಟಾಸ್’ ಚಿತ್ರದ ರೀಮೇಕ್ ‘ಪಟಾಕಿ’. ‘ಪಟಾಸ್’ನ ಮೊದಲ ಷೋ ನೋಡಿದ ತಕ್ಷಣ ಸಾಯಿಕುಮಾರ್ ಅವರು ನಿರ್ಮಾಪಕ ಎಸ್.ವಿ. ಬಾಬು ಅವರಿಗೆ ಕರೆ ಮಾಡಿ, ‘ಈ ಚಿತ್ರದ ರೀಮೇಕ್ ಹಕ್ಕು ಖರೀದಿಸಿ. ಕನ್ನಡ ಅವತರಣಿಕೆಯಲ್ಲಿ ನಾನೇ ನಟಿಸುತ್ತೇನೆ’ ಎಂದರಂತೆ. ಈ ಮಾತಿನಿಂದ ಉತ್ತೇಜಿತರಾದ ಬಾಬು ಅವರು, ಚಿತ್ರ ನೋಡಿ ರೀಮೇಕ್ ಮಾಡಿದ್ದಾರೆ. ಅದರ ಫಲವೇ ‘ಪಟಾಕಿ’.
ಮಂಜು ಸ್ವರಾಜ್ ನಿರ್ದೇಶನದ ನಾಲ್ಕನೇ ಚಿತ್ರ ಇದು. ಗಣೇಶ್ ಅವರನ್ನು ಪೊಲೀಸ್ ಉಡುಪಿನಲ್ಲಿ ತೋರಿಸುವಲ್ಲಿ ಎಷ್ಟು ಸಫಲರಾಗುತ್ತೇವೆ ಎಂಬ ಅವರ ಅನುಮಾನಕ್ಕೆ ಚಿತ್ರದ ಮೊದಲ ಪ್ರತಿ ಉತ್ತರ ಕೊಟ್ಟಿದೆ. ಅವರ ಅನುಮಾನ ಪೂರ್ಣ ಬಗೆಹರಿದಿದೆ. ಮಂಜು ಪ್ರಕಾರ ಸ್ವಮೇಕ್ಗಿಂತ ರೀಮೇಕ್ ಕಷ್ಟವಂತೆ. ‘ಸ್ವಮೇಕ್ನಲ್ಲಾದರೆ ನಮ್ಮ ಕಲ್ಪನೆಯ ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತೇವೆ. ರೀಮೇಕ್ನಲ್ಲಿ ಆಗಲೇ ಎಲ್ಲರಿಗೂ ಗೊತ್ತಿರುವ ದೃಶ್ಯಕ್ಕೆ ಹೊಸತನ ತುಂಬುವುದು ಸವಾಲು. ಯಥಾವತ್ ರೀಮೇಕ್ ಮಾಡುವವರಿಗೆ ಈ ಕಷ್ಟವಿರುವುದಿಲ್ಲ’ ಎನ್ನುತ್ತಾರೆ ಅವರು.
ಭ್ರಷ್ಟ ಪೊಲೀಸ್ ಅಧಿಕಾರಿಯೊಬ್ಬ ತಾನು ಜನರಿಗೆ ಒಳಿತನ್ನೇ ಮಾಡುವ ನಿಲುವಿಗೆ ಬಂದರೆ ಹೇಗೆಲ್ಲ ಸಕ್ರಿಯವಾಗಬಹುದು ಎಂಬುದು ಚಿತ್ರದ ಕಥೆ. ಮೂಲ ಚಿತ್ರಕ್ಕೂ, ‘ಪಟಾಕಿ’ಗೂ ಚಿತ್ರಕಥೆಯಲ್ಲಿ ಸಾಕಷ್ಟು ವ್ಯತ್ಯಾಸವಿದೆ ಎನ್ನುವ ನಿರ್ದೇಶಕರು ಅದಕ್ಕೆ ಒಂದಷ್ಟು ಉದಾಹರಣೆಗಳನ್ನೂ ಕೊಡುತ್ತಾರೆ.
ಏಪ್ರಿಲ್ ಕೊನೆಯಲ್ಲಿ ಹಾಡುಗಳನ್ನು ಬಿಡುಗಡೆ ಮಾಡುವ ಮತ್ತು ಮೇ ಎರಡನೇ ವಾರದಲ್ಲಿ ಸಿನಿಮಾವನ್ನು ತೆರೆಗೆ ತರುವ ಯೋಜನೆ ನಿರ್ಮಾಪಕ ಎಸ್.ವಿ. ಬಾಬು ಅವರದ್ದು. ನಾಯಕಿ ರನ್ಯಾ, ನಾಯಕನ ತಂಗಿಯ ಪಾತ್ರದಲ್ಲಿ ನಟಿಸಿರುವ ಪ್ರಿಯಾಂಕ ಸುದ್ದಿಗೋಷ್ಠಿಯಲ್ಲಿದ್ದರು. ಗಣೇಶ್, ಸಾಯಿಕುಮಾರ್ ಸುದ್ದಿಗೋಷ್ಠಿಗೆ ಬಂದಿರಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.