ಕೋಲಾರ: ‘ರಾಜ್ಯ ಮತ್ತು ಹೆದ್ದಾರಿಗಳಲ್ಲಿರುವ ಬಾರ್ ಅಂಡ್ ರೆಸ್ಟೋರೆಂಟ್ಗಳನ್ನು ಸ್ಥಳಾಂತರ ಮಾಡಬೇಕು ಎಂದು ಕೇಂದ್ರ ಸರ್ಕಾರ ನೀಡಿರುವ ಆದೇಶ ಆವೈಜ್ಞಾನಿಕವಾಗಿದ್ದು, ಈ ಕುರಿತು ಏ.20ರಂದು ಮದ್ಯ ಮಾರಾಟಗಾರರ ಸಂಘದಿಂದ ಕರೆ ಕೊಟ್ಟಿರುವ ಪ್ರತಿಭಟನೆಗೆ ಬೆಂಬಲ ನೀಡಲಾಗುವುದು’ ಎಂದು ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಬಾರ್ ಅಂಡ್ ರೆಸ್ಟೋರೆಂಟ್ಗಳನ್ನು 500 ಮೀಟರ್ ಅಂತರದಲ್ಲಿರಬೇಕೆಂಬ ತಿದ್ದುಪಡಿ ತಂದಿರುವುದು ಅವೈಜ್ಞಾನಿಕವಾಗಿದೆ’ ಎಂದರು.
‘ಮದ್ಯದಂಗಡಿಗಳು ಸ್ಥಳಾಂತರ ಮಾಡದಿದ್ದರೆ ಪರವಾನಗಿ ರದ್ದು ಪಡಿಸುವುದರಿಂದ ಸರ್ಕಾರದ ಆದಾಯಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗಲಿದೆ. ಇದರ ಸಾಧಕ ಬಾಧಕಗಳನ್ನು ಅರಿತು ಕೇಂದ್ರ ಸರ್ಕಾರ ಕಾಯ್ದೆಗೆ ತಿದ್ದುಪಡಿ ಮಾಡಬೇಕಾಗಿತ್ತು’ ಎಂದು ಮನವಿ ಮಾಡಿದರು.
‘ನಗರ, ಪಟ್ಟಣಗಳಲ್ಲಿ ಶಾಲಾ, ಕಾಲೇಜು, ದೇವಾಲಯ, ಹರಿಜನ ಕಾಲೊನಿಗಳಿಂದ 100 ಮೀಟರ್ ಅಂತರದಲ್ಲಿರಬೇಕೆಂಬ ನಿಯಮ ಸರಿಯಿದೆ. ಹೆದ್ದಾರಿಗಳಲ್ಲಿ 500 ಮೀಟರ್ ಅಂತರದಲ್ಲಿ ಇರಬೇಕೆನ್ನುವುದು ಸರಿಯಲ್ಲ’ ಎಂದರು.