ಮಾಗಡಿ: ‘ನನ್ನ ತಾಯಿ ಲಕ್ಷ್ಮಮ್ಮ ತಂದೆ ಮಾಗಡಯ್ಯ ಹೆಸರಿನಲ್ಲಿ ₹ 1ಲಕ್ಷ ದತ್ತಿನಿಧಿ ಇಟ್ಟು ಬಡಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲಾಗುವುದು’ ಎಂದು ವಿಧಾನ ಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ತಿಳಿಸಿದರು.
ಮಾಗಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ನಡೆದ ಸಾಂಸ್ಕೃತಿಕ, ಕ್ರೀಡಾ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಇತರೆ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.ನನ್ನ ತಾಯಿ ಕಡುಬಡತನದಲ್ಲೂ ಕಷ್ಟಪಟ್ಟು ಹಣ ಸಂಗ್ರಹಿಸಿ ನನಗೆ ವಿದ್ಯೆ ಕಲಿಸಿದರು.
ಅಧ್ಯಾಪಕರು ಜವಾಬ್ದಾರಿಯಿಂದ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡಿ ಸ್ಪರ್ಧಾತ್ಮಕ ಪರೀಕ್ಷೆಗೆ ಅಣಿಗೊಳಿಸಬೇಕು ಎಂದರು. ನಿವೃತ್ತ ಪ್ರಾಂಶುಪಾಲ ಹಾಗೂ ಚಿತ್ರನಟ ಟಿ.ಎಸ್.ಲೋಹಿತಾಶ್ವ ಮಾತನಾಡಿ ತಾಯಿ ತಂದೆ, ಗುರು ಹಿರಿಯರಿಗೆ ಗೌರವ ಕೊಡುವುದೇ ಸಂಸ್ಕೃತಿ ಎಂದರು.
ಕೆಂಗೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಎಸ್.ಗವಿಯಪ್ಪ, ಕ್ರೀಡಾ ತರಬೇತುದಾರ ಆನಂದ ಗೌಡ, ಹಿರಿಯ ಕ್ರೀಡಾಪಟು ಶ್ಯಾಮಲಾಶೆಟ್ಟಿ, ಜಿಲ್ಲಾಪಂಚಾಯಿತಿ ಸದಸ್ಯ ಚಂದ್ರಮ್ಮ ನಂಜಯ್ಯ, ಪುರಸಭೆ ಅಧ್ಯಕ್ಷೆ ಹೊಂಬಮ್ಮ, ಕುದೂರಿನ ಕಾಲೇಜು ಕಟ್ಟಡದ ದಾನಿ ಕೆ.ಬಿ.ವಿಜಯಗುಪ್ತ, ಶಾಸಕರ ಆಪ್ತಸಹಾಯಕ ವೆಂಕಟೇಶ್ ಮಾತನಾಡಿದರು. ಪ್ರಾಂಶುಪಾಲ ಡಾ.ಆರ್.ಕೆ ರಮೇಶ್ ಬಾಬು ಅಧ್ಯಕ್ಷತೆವಹಿಸಿದ್ದರು.