ಚಿಟಗುಪ್ಪ: 6ನೇ ಮತ್ತು 7ನೇ ತರಗತಿಗಳಲ್ಲಿ ಅಭ್ಯಾಸ ಮಾಡುತ್ತಿರುವ ಮಕ್ಕಳ ಸರ್ವಾಂಗೀಣ ಪ್ರಗತಿಗಾಗಿ ಶಿಕ್ಷಣ ಇಲಾಖೆ ರೂಪಿಸಿರುವ ಸ್ವಲ್ಪು ಓದು ಸ್ವಲ್ಪು ಮೋಜು ಆಧಾರಿತ ಬೇಸಿಗೆ ಸಂಭ್ರಮ ಶಿಬಿರ ಸಹಾಯಕ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಚಂದ್ರಶೇಖರ ಹೇಳಿದರು.
ಕರಕನಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಬೇಸಿಗೆ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜ್ಯದ 30 ಜಿಲ್ಲೆಗಳ 160 ಕಂದಾಯ ತಾಲ್ಲೂಕುಗಳನ್ನು ಸರ್ಕಾರ ಬರಪೀಡಿತ ತಾಲ್ಲೂಕುಗಳೆಂದು ಘೋಷಿಸಿದ್ದು, ಬೇಸಿಗೆ ರಜಾ ಅವಧಿಯಲ್ಲಿ ಮಧ್ಯಾಹ್ನ ಬಿಸಿಯೂಟ ಯೋಜನೆಗೆ 150ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಇಲಾಖೆ ಗುರುತಿಸಿದೆ.
2017–18ನೇ ಸಾಲಿನಲ್ಲಿ 6ನೇ ಮತ್ತು 7ನೇ ತರಗತಿಗಳಲ್ಲಿ ಅಭ್ಯಾಸ ಮಾಡುವ ಮಕ್ಕಳಿಗೆ ಸ್ವಲ್ಪು ಓದು ಸ್ವಲ್ಪು ಮೋಜು ಆಧಾರಿತ ಬೇಸಿಗೆ ಸಂಭ್ರಮ ಕಾರ್ಯಕ್ರಮ ಪ್ರಥಮ ಸಂಸ್ಥೆಯ ಸಹಯೋಗದಲ್ಲಿ ಜಾರಿ ಮಾಡಲಾಗಿದೆ. ಹುಮನಾಬಾದ್ ತಾಲ್ಲೂಕಿನಲ್ಲಿ 172 ಬಿಸಿ ಊಟದ ಕೇಂದ್ರಗಳಿದ್ದು, ಅವುಗಳಲ್ಲಿ 59 ಕೇಂದ್ರಗಳಲ್ಲಿ ಬೇಸಿಗೆ ಸಂಭ್ರಮ ಕಾರ್ಯಕ್ರಮ ಆರಂಭಿಸಲಾಗಿದೆ ಎಂದು ತಿಳಿಸಿದರು.
ಐದು ವಾರಗಳವರೆಗೆ ಬೇಸಿಗೆ ಸಂಭ್ರಮ ಕಾರ್ಯಕ್ರಮ ನಡೆಸಲಾಗುತ್ತದೆ. ಕಾರ್ಯಕ್ರಮದ ಯಶಸ್ಸು ಮಕ್ಕಳ ಪಾಲ್ಗೊಳ್ಳುವಿಕೆಯ ಮೇಲೆ ಇದೆ. ಪಾಲಕರು ಕಾಳಜಿ ವಹಿಸಿ ಮಕ್ಕಳನ್ನು ಶಿಬಿರಕ್ಕೆ ಕಳಿಸಿ, ಅವರ ಪ್ರತಿಭೆಗೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಹುಮನಾಬಾದ್ ಕ್ಷೇತ್ರ ಶಿಕ್ಷಣಾಧಿಕಾರಿ ಅಮೃತ ಬಸಗೊಂಡೆ ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತಾ ರಾಸೂರೆ, ಜೆಡಿಎಸ್ ಪಕ್ಷದ ನಾಯಕ ಸಂತೋಷ ರಾಸೂರ್, ಕ್ಷೇತ್ರ ಸಮನ್ವಯಾಧಿಕಾರಿ ಶಿವಕುಮಾರ ಪಾರಶೆಟ್ಟಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಹಾದೇವಿ ಕರಣಯ್ಯ, ಮನ್ನು, ಸಿಆರ್ಪಿ ಶಾಂತಕುಮಾರ್, ಆರ್.ಎಂ.ಎಸ್ ಅಧಿಕಾರಿ ಜಾಕೀರ್ ಹುಸೇನ್, ಮುಖ್ಯಶಿಕ್ಷಕ ವಿಠಲರೆಡ್ಡಿ ಇದ್ದರು.