ಹೊಸೂರ (ಬೈಲಹೊಂಗಲ): ಗ್ರಾಮದ ಗುರು ಮಡಿವಾಳೇಶ್ವರಮಠದ ಮಹಾರಥೋತ್ಸವ ಭಕ್ತರ ಹರ್ಷೋದ್ಗಾರದ ಮಧ್ಯೆ ವಿಜೃಂಭಣೆಯಿಂದ ನೆರವೇರಿತು. ಮಠದ ದೇವಸ್ಥಾನದಿಂದ ಆರಂಭವಾದ ರಥೋತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಠಕ್ಕೆ ಬಂದು ತಲುಪಿತು. ತರಹೇವಾರಿ ಪುಷ್ಪಮಾಲೆಗಳಿಂದ ಕಂಗೊಳಿಸಿದ ರಥೋತ್ಸವ ನೋಡುಗರ ಕಣ್ಮನ ಸೆಳೆಯಿತು. ಭಕ್ತರು ರಥಕ್ಕೆ ಹೂವು, ಹಣ್ಣು, ಕಾರಿಕು ಅರ್ಪಿಸಿ ನಮಸ್ಕರಿಸಿದರು. ಶ್ರದ್ಧೆ, ಭಕ್ತಿಯಿಂದ ರಥ ಎಳೆದರು. ಹರಹರ ಮಹಾದೇವ, ಗುರು ಮಡಿವಾಳೇಶ್ವರ ಮಹಾರಾಜಕಿ ಜಯ ಎಂದು ಘೋಷಣೆ ಮೊಳಗಿಸಿದರು.
ಬೆಳಗ್ಗೆಯಿಂದ ರಾತ್ರಿಯವರೆಗೆ ಮಠಕ್ಕೆ ಬಂದು ವಿಶೇಷ ಪೂಜೆ, ಪುನಸ್ಕಾರ ನೆರವೇರಿಸಿದರು. ಗುರು ಮಡಿವಾಳೇಶ್ವರ ಗದ್ದುಗೆಗೆ ರುದ್ರಾಭಿಷೇಕ, ಮಹಾಭಿಷೇಕ, ಅಲಂಕಾರ ಪೂಜೆ ನೆರವೇರಿಸಲಾಯಿತು.ನಾಗನೂರು ರುದ್ರಾಕ್ಷಿಮಠದ ಪೀಠಾಧಿಪತಿ ಡಾ.ಸಿದ್ಧರಾಮ ಸ್ವಾಮೀಜಿ ಗುರು ಮಡಿವಾಳೇಶ್ವರಮಠದ 136ನೇ ಜಯಂತ್ಯುತ್ಸವ, ಮಹಾರಥೋತ್ಸವದ ಸಾನ್ನಿಧ್ಯವಹಿಸಿ ಮಾತನಾಡಿ, ‘ನಾಡು ಕಂಡ ತ್ಯಾಗಿ, ಯೋಗಿಗಳಲ್ಲಿ ಗುರು ಮಡಿವಾಳೇಶ್ವರರ ಅತ್ಯಂತ ಶ್ರೇಷ್ಠರಾಗಿದ್ದಾರೆ. ಗುರು ಮಡಿವಾಳೇಶ್ವರ ಕತೃತ್ವ ಶಕ್ತಿ ಇಂದಿಗೂ ಜನಮಾನಸವಾಗಿದೆ. ಮಡಿವಾಳ ಶಿವಯೋಗಿಗಳು ಜೀವನೂದ್ದಕ್ಕು ವೈರಾಗ್ಯ ಚಕ್ರವರ್ತಿಯಾಗಿ ಬಾಳಿ ಭಕ್ತರಿಗೆ ಸದಾ ಸನ್ಮಾರ್ಗ ತೋರಿದ್ದಾರೆ. ಗುರುವಿನ ಕೃಪೆ, ಮಾರ್ಗದಲ್ಲಿ ಎಲ್ಲರು ಮುನ್ನಡೆಯಬೇಕು’ ಎಂದರು.
ದೇಗಲಹಳ್ಳಿ ವಿರೇಶ ಸ್ವಾಮೀಜಿ ಮಾತನಾಡಿ, ‘ಇಂದಿನ ಯುವ ಸಮುದಾಯ ಸನಾತನ ಹಿಂದೂ ಸಂಸ್ಕೃತಿ ಆಚರಣೆ ಮಾಡದೆ ಪಾಶ್ಚಮಾತ್ಯ ಸಂಸ್ಕೃತಿಗೆ ಮಾರುಹೋಗಿದೆ. ಬಾಲ್ಯದಿಂದ ಯೌವನದವರೆಗೆ ಸಾಕಿಸಲುಹಿದ ವೃದ್ದ ತಂದೆ ತಾಯಿಗಳನ್ನು ವೃದ್ದಾಶ್ರಮಕ್ಕೆ ಸೇರಿಸುತ್ತಿರುವದು ಕಳವಳಕಾರಿ ವಿಷಯವಾಗಿದೆ’ ಎಂದರು.ಮಠದ ಪೀಠಾಧಿಪತಿ ಗಂಗಾಧರ ಸ್ವಾಮೀಜಿ ಕಾರ್ಯಕ್ರಮಗಳ ನೇತೃತ್ವವಹಿಸಿದ್ದರು. ಅರಳಿಕಟ್ಟಿ ವಿರಕ್ತಮಠದ ಶಿವಮೂರ್ತಿ ದೇವರು, ಮುರಗೊಡ ಉಮೇಶ್ವರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಸಾಮೂಹಿಕ ಶಿವದೀಕ್ಷೆ, ವಿವಾಹಗಳು ನಡೆದವು.
ಮೃತ್ಯುಂಜಯ ಸ್ವಾಮೀ ಹಿರೇಮಠ ಪ್ರವಚನ ನೀಡಿದರು. ಗರಗ ಚನ್ನಬಸವ ಸ್ವಾಮೀಜಿ, ನಿಚ್ಚಣಕಿ ಪಂಚಾಕ್ಷರ ಸ್ವಾಮೀಜಿ, ಹೂಲಿ ಚನ್ನಬಸವ ಶಿವಾಚಾರ್ಯರು, ಹೀರೆಬಾಗೆವಡಿ ನಿಶ್ಛಲ ಸ್ವರೂಪ ಸ್ವಾಮೀಜಿ, ಕೋರಕೊಪ್ಪ ಸ್ವಾಮೀಜಿ, ಮಡಿವಾಳ ಸ್ವಾಮೀಜಿ, ಗರಗ ಕುಮಾರ ದೇವರು, ವಿರಕ್ತಮಠದ ಪ್ರಭು ನೀಲಕಂಠ ಸ್ವಾಮೀಜಿ, ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.ಇದೇ ವೇಳೆ ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕೌಜಲಗಿ, ಎಪಿಎಂಸಿ ನಿರ್ದೇಶಕರಾದ ಪ್ರಕಾಶ ಮೂಗಬಸವ, ಎಫ್.ಎಸ್. ಸಿದ್ದನಗೌಡರ ಸತ್ಕರಿಸಲಾಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಈರಣ್ಣ ಬೇಂಡಿಗೆರಿ ಸ್ವಾಗತಿಸಿದರು. ಶಂಕರ ತಲ್ಲೂರ ವಂದಿಸಿದರು. ಮಲ್ಲಿಕಾರ್ಜುನ ವಿವೇಕಿ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.