ಹೊಸಪೇಟೆ: ದಿನದಿಂದ ದಿನಕ್ಕೆ ಜಿಲ್ಲೆ ಯಲ್ಲಿ ಬಿಸಿಲಿನ ಪ್ರಮಾಣ ಹೆಚ್ಚಾಗು ತ್ತಿದ್ದು, ಈ ತಿಂಗಳ ಅಂತ್ಯಕ್ಕೆ ಉಷ್ಣಾಂಶ ದಲ್ಲಿ ಭಾರಿ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ಏಪ್ರಿಲ್ ಕೊನೆಯ ವಾರದಲ್ಲಿ ಜಿಲ್ಲೆಯ ತಾಪಮಾನ 43 ರಿಂದ 44 ಡಿಗ್ರಿ ಸೆಲ್ಸಿಯಸ್ಗೆ ಏರಿಕೆಯಾಗುವ ಹೆಚ್ಚಿನ ಸಾಧ್ಯತೆ ಇದೆ. ಕೆಂಡದಂತಹ ಬಿಸಿಲಿಗೆ ಈಗಾಗಲೇ ಭೂಮಿ ಕಾದ ಕಾವಲಿ ಯಂತಾಗಿದೆ. ಪ್ರಖರ ಬಿಸಿಲಿನಿಂದ ಜಿಲ್ಲೆಯ ಜನ ರೋಸಿ ಹೋಗಿದ್ದಾರೆ. ನಿರ್ಜಲೀಕರಣದ (ಡಿಹೈಡ್ರೇಶನ್) ಸಮಸ್ಯೆಯಿಂದ ಅನೇಕ ಜನ ಹಾಸಿಗೆ ಹಿಡಿದಿದ್ದಾರೆ. ಮನೆಯಲ್ಲಿ ಕೂರಲಾಗದೆ, ಹೊರಗೆ ಹೋಗಲಾಗದೆ ಜನ ಸಂಕಟ ಪಡುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಉಷ್ಣಾಂಶದಲ್ಲಿ ಮತ್ತೆ ಏರಿಕೆಯಾದರೆ ಜನ ಆರೋಗ್ಯದ ಕಡೆಗೆ ಹೆಚ್ಚಿನ ಮುತು ವರ್ಜಿ ವಹಿಸಬೇಕಾಗುತ್ತದೆ. ಇಲ್ಲವಾದಲ್ಲಿ ತೊಂದರೆಗೆ ಒಳಗಾಗಬಹುದು.
ಭಾನುವಾರ 40.8 ಡಿಗ್ರಿ ಸೆಲ್ಸಿಯಸ್ ನಷ್ಟಿದ್ದ ಉಷ್ಣಾಂಶ ಸೋಮವಾರ ಕೊಂಚ ಇಳಿಕೆಯಾಗಿದೆ. ಸೋಮವಾರ 39.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಈ ಬೇಸಿಗೆಯಲ್ಲಿ ಏಪ್ರಿಲ್ ಮೊದಲ ವಾರದಲ್ಲಿ ಜಿಲ್ಲೆಯ ಬಿಸಿಲಿನ ಪ್ರಮಾಣ 40 ಡಿಗ್ರಿ ಸೆಲ್ಸಿಯಸ್ ಗಡಿ ದಾಟಿತ್ತು. ಎರಡನೇ ವಾರ ಜಿಲ್ಲೆಯ ಹೊಸಪೇಟೆ, ಸಿರುಗುಪ್ಪ, ಹಗರಿಬೊಮ್ಮನಹಳ್ಳಿ, ಸಂಡೂರು ಸೇರಿ ಕೆಲವೆಡೆ ಮಳೆ ಸುರಿದ ಕಾರಣ ಉಷ್ಣಾಂಶ ಸ್ವಲ್ಪ ತಗ್ಗಿತ್ತು. ಆದರೆ, ಈಗ ಮತ್ತೆ ಬಿಸಿಲಿನ ಪ್ರಮಾಣ ಹೆಚ್ಚಾ ಗಿದ್ದು, ಮುಂಬರುವ ದಿನಗಳಲ್ಲಿ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
‘ಸದ್ಯ ಜಿಲ್ಲೆಯಲ್ಲಿ 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದ್ದು, ಈ ತಿಂಗಳ ಕೊನೆಯಲ್ಲಿ 43ರಿಂದ 44 ಡಿಗ್ರಿ ಸೆಲ್ಸಿಯಸ್ಗೆ ತಲುಪ ಬಹುದು. ಪ್ರತಿ ವರ್ಷ ಏಪ್ರಿಲ್ ಕೊನೆಯ ವಾರ ಹಾಗೂ ಮೇ ತಿಂಗಳಲ್ಲಿ 42ರಿಂದ 43 ಡಿಗ್ರಿ ಸೆಲ್ಸಿಯಸ್ ವರೆಗೆ ಬಿಸಿಲು ಇದ್ದೇ ಇರುತ್ತದೆ’ ಎಂದು ಬಳ್ಳಾರಿ ಹವಾಮಾನ ಇಲಾಖೆಯ ಕ್ಷೇತ್ರ ಸಹಾಯಕ ಗವಿಸಿದ್ದಪ್ಪ ಅವರು ಸೋಮವಾರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ವ್ಯಾಪಾರದ ಮೇಲೆ ಪರಿಣಾಮ: ಬಿಸಿಲಿ ನಿಂದಾಗಿ ವ್ಯಾಪಾರ ವಹಿವಾಟಿನ ಮೇಲೆ ಪರಿಣಾಮ ಬೀರಿದೆ. ಜನ ಬೆಳಿಗ್ಗೆ ಹಾಗೂ ಸಂಜೆ ವೇಳೆ ಮಾತ್ರ ಮನೆಯಿಂದ ಹೊರ ಬಂದು ವಸ್ತುಗಳನ್ನು ಖರೀದಿಸುತ್ತಿರುವ ಕಾರಣ ಮಧ್ಯಾಹ್ನ ಬಹುತೇಕ ಮಾರು ಕಟ್ಟೆಗಳು ಬಿಕೋ ಎನ್ನುತ್ತಿವೆ. ಬಳ್ಳಾರಿ, ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ, ಸಂಡೂರು ಎಲ್ಲೆಡೆ ಇದೇ ಪರಿಸ್ಥಿತಿ ಇದೆ.
ವ್ಯಾಪಾರ ನಡೆಯದ ಕಾರಣ ಮಧ್ಯಾಹ್ನ 12 ಗಂಟೆಯಾಗುತ್ತಿದ್ದಂತೆ ಬಹುತೇಕ ಮಳಿಗೆಗಳಿಗೆ ಬೀಗ ಬೀಳು ತ್ತಿವೆ. ಆದರೆ, ಏರ್ ಕೂಲರ್, ಏರ್ ಕಂಡಿಷನರ್, ಎಳ ನೀರು, ಕಬ್ಬಿನ ರಸ, ತಂಪು ಪಾನೀಯ ಮಳಿಗೆಗಳಲ್ಲಿ ಜನ ಜಾತ್ರೆ ಕಂಡು ಬರುತ್ತಿದೆ.‘ಬೇಸಿಗೆ ಕಾಲ ಆರಂಭವಾದ ದಿನದಿಂದ ವ್ಯಾಪಾರ ಕಡಿಮೆಯಾಗಿದೆ. ಮಾರ್ಚ್ ಕೊನೆಯ ವಾರದಿಂದ ವಹಿ ವಾಟು ಸಂಪೂರ್ಣವಾಗಿ ಇಲ್ಲ ಎಂಬಂ ತಾಗಿದೆ. ಮಧ್ಯಾಹ್ನ 12ರ ವರೆಗೆ ಮಳಿಗೆ ತೆರೆದಿಡುತ್ತೇವೆ. ಆದರೆ, ಯಾರೂ ಬರು ತ್ತಿಲ್ಲ. ಸಂಜೆ ಆರರ ನಂತರ ಆಗೊಬ್ಬರು ಈಗೊಬ್ಬರು ಬರುತ್ತಾರೆ’ ಎಂದು ಹೊಸ ಪೇಟೆಯ ಮೇನ್ ಬಜಾರ್ನಲ್ಲಿರುವ ಚಿಲ್ಲರೆ ದಿನಸಿ ವಸ್ತುಗಳ ವ್ಯಾಪಾರಿ ಪ್ರದೀಪ್ ಜೈನ್ ಹೇಳಿದರು.
‘ಬೇಸಿಗೆ ಮದುವೆ ಸೀಸನ್. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮದುವೆಗಳ ಸಂಖ್ಯೆ ಕೂಡ ಕಡಿಮೆ. ಇದು ನೇರವಾಗಿ ವ್ಯಾಪಾರದ ಮೇಲೆ ಪರಿಣಾಮ ಬೀರಿದೆ. ಗೋದಾಮಿನಲ್ಲಿ ಇರುವ ಅಕ್ಕಿ ಮೂಟೆಗಳನ್ನು ಹೇಗೆ ಜೋಡಿಸಿ ಇಟ್ಟಿದ್ದೇವೆ ಹಾಗೆ ಇವೆ’ ಎಂದು ಮೇನ್ ಬಜಾರ್ನಲ್ಲಿನ ಅಕ್ಕಿ ಸಗಟು ವ್ಯಾಪಾರಿ ದಿನೇಶ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.