ಶಿರಸಿ: ತಾಲ್ಲೂಕಿನ ವಾನಳ್ಳಿ– ಹುಲೇಕಲ್ ಭಾಗದಲ್ಲಿ ಮಾಲ್ಕಿ ಜಮೀನಿನಲ್ಲಿರುವ ಅನೇಕ ಮಾವಿನ ಮರಗಳನ್ನು ಕಟಾವು ಮಾಡಲಾಗಿದೆ. ಇನ್ನೂ 500 ಮರಗಳ ಕಟಾವಿಗೆ ಸಿದ್ಧತೆ ನಡೆದಿದೆ ಎಂದು ಪರಿಸರ ಸಂಘಟನೆಗಳು ಆರೋಪಿಸಿವೆ.ಶಿರಸಿ ಅರಣ್ಯ ವಿಭಾಗದಲ್ಲಿ ಕಳೆದ ಮೂರು ತಿಂಗಳುಗಳಿಂದ ಮಾವಿನ ಮರ ಕಟಾವಿಗೆ ಪರವಾನಿಗೆ ಸಡಿಲಗೊಳಿಸಲಾಗಿದೆ. ಇದನ್ನೇ ಆಧರಿಸಿ ಮರ ಗುತ್ತಿಗೆದಾರರು ಮಾವಿನ ಮರ ಕಡಿಯುತ್ತಿದ್ದಾರೆ. ಪಶ್ಚಿಮಘಟ್ಟದಲ್ಲಿ ನೈಸರ್ಗಿಕವಾಗಿ ಬೆಳೆದ ಲಕ್ಷಾಂತರ ಮಾವಿನ ಮರಗಳು ಖಾಸಗಿ ಭೂಮಿಯಲ್ಲಿವೆ. ವಿನಾಶದ ಅಂಚಿನಲ್ಲಿ ಇರುವ ಈ ಕಾಡು ಮಾವು, ಸಾಸಿವೆ ಹಣ್ಣು, ಅಪ್ಪೆಮಿಡಿ, ಮಿಡಿಮಾವು ಸೇರಿ ಸಾವಿರಕ್ಕೂ ಹೆಚ್ಚು ಜಾತಿಯ ಮಾವಿನ ತಳಿಗಳಿವೆ. ವಿನಾಕಾರಣ ಫಲ ಕೊಡುವ ಮಾವಿನಮರ ಕಡಿಯಲು ಪರವಾನಿಗೆ ಕೊಡಬಾರದು ಎಂಂದು ವೃಕ್ಷಲಕ್ಷ ಆಂದೋಲನ ಸಂಘಟನೆ ಆಗ್ರಹಿಸಿದೆ.