ಆನೇಕಲ್: ‘ಬಸವಣ್ಣ ಅವರ ತತ್ವ ಆದರ್ಶ ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಅಪರಾಧಗಳ ಸಂಖ್ಯೆ ಕಡಿಮೆಯಾಗುತ್ತದೆ’ ಎಂದು ಅತ್ತಿಬೆಲೆ ಪೊಲೀಸ್ ಸರ್ಕಲ್ ಇನ್ ಸ್ಪೆಕ್ಟರ್ ಎಲ್.ವೈ.ರಾಜೇಶ್ ತಿಳಿಸಿದರು.
ತಾಲ್ಲೂಕಿನ ಚಂದಾಪುರದಲ್ಲಿ ಸೋಮವಾರ ಜೇನುಗೂಡು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಹಾಗೂ ರಾಷ್ಟ್ರೀಯ ಬಸವದಳ ಮತ್ತು ಯಡವನಹಳ್ಳಿ ಬಸವ ಸಮಾಜದ ವತಿಯಿಂದ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕಾಯಕ ತತ್ವ ಸಾರುವ ಮೂಲಕ ಜನರಲ್ಲಿ ಶ್ರಮ ಜೀವನದ ಕಲ್ಪನೆಯನ್ನು ಕಟ್ಟಿಕೊಟ್ಟ ಮಹಾನ್ ಚೇತನ ಭಕ್ತಿ ಭಂಡಾರಿ ಬಸವಣ್ಣನವರು ಅವರ ಕಾಯಕ ತತ್ವ ಹಾಗೂ ಚಿಂತನೆ ಯುವಕರು ಅಳವಡಿಸಿಕೊಳ್ಳುವ ಮೂಲಕ ನವ ಸಮಾಜವನ್ನು ನಿರ್ಮಾಣ ಮಾಡಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ ಘಟಕದ ಮಾಜಿ ಅಧ್ಯಕ್ಷ ತಾ.ನಂ. ಕುಮಾರಸ್ವಾಮಿ ಮಾತನಾಡಿ, ವಚನ ಕಾರರ ಅನುಭವ ಮಂಟಪ ಇಡೀ ವಿಶ್ವಕ್ಕೆ ಮಾದರಿಯಾದ ಸಂವಿಧಾನವಿದ್ದಂತೆ. ಇದರ ಮಹತ್ವ ಅರಿತು 23 ಭಾಷೆಗಳಿಗೆ ನಮ್ಮ ವಚನಕಾರರ ವಚನಗಳನ್ನು ಭಾಷಾಂತರಿಸಿ ಇಡೀ ವಿಶ್ವಕ್ಕೆ ಪರಿಚಯಿಸುವ ಕೆಲಸ ಮಾಡಿರುವುದು ನಮ್ಮ ಕನ್ನಡಿಗರ ಹಾಗೂ ಕನ್ನಡ ಸಾಹಿತ್ಯಕ್ಕೆ ಹೆಮ್ಮೆಯಾಗಿದೆ ಎಂದರು.
ಹೆಬ್ಬಗೋಡಿ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಕೆ.ವಿಶ್ವನಾಥ್ ಮಾತನಾಡಿ, 12ನೇ ಶತಮಾತದ ಬಸವಣ್ಣ ಅವರ ವಚನಗಳೇ ನಮ್ಮ ಸಂವಿಧಾನದ ಕಾನೂನಿನ ಒಂದೊಂದು ವಿಧಿಗಳಂತೆ ಎದ್ದು ಕಾಣುತ್ತವೆ. ಅವುಗಳಲ್ಲಿನ ಮಹತ್ವ ಅರಿತು ಜೀವನದಲ್ಲಿ ಅಳವಡಿಸಿಕೊಂಡರೆ ಸಾಕು ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದರು.
ರಾಷ್ಟ್ರೀಯ ಬಸವದಳದ ಗೌರವಾಧ್ಯಕ್ಷ ಶ್ರೀಶೈಲ್ ಜಿ.ಮಸೂತೆ, ಕಾರ್ಯದರ್ಶಿ ಸಂಗಮೇಶ್, ಜೇನುಗೂಡು ಸಾಹಿತ್ಯ ವೇದಿಕೆ ಸಂಸ್ಥಾಪಕ ಕಾರ್ಯದರ್ಶಿ ಮಹೇಶ್ ಊಗಿನಹಳ್ಳಿ, ಸಮಾಜ ಸೇವಕ ತಿಮ್ಮಾರೆಡ್ಡಿ, ಜೇನುಗೂಡು ಉಪಾಧ್ಯಕ್ಷ ಬಿ.ವಿ ಅರಳಪ್ಪನವರ್, ಬಸವ ಸಮಾಜದ ಅಧ್ಯಕ್ಷ ಪರಮೇಶ್, ಪುರಸಭಾ ಸದಸ್ಯೆ ಮಂಜುಳಾ ನೀಲಕಂಠಯ್ಯ, ಕರುನಾಡ ಪ್ರಜಾ ಸೇನೆಯ ರಾಜ್ಯ ಉಪಾಧ್ಯಕ್ಷ ರವಿಕಹಳೇ, ಕಾಂಗ್ರೆಸ್ ಮುಖಂಡ ಬಿ.ಪಿ ರಮೇಶ್ ಹಾಜರಿದ್ದರು.