ಬೆಂಗಳೂರು: ‘ಜೆಡಿಎಸ್ ಇಬ್ಭಾಗ ಮಾಡುವುದರಿಂದ ನಮಗೆ ಯಾವುದೇ ಲಾಭವಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಅವರೊಂದಿಗೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಜೆಡಿಎಸ್ ಪಕ್ಷ ಒಡೆಯುತ್ತಿದ್ದಾರೆ’ ಎಂಬ ಎಚ್.ಡಿ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸ್ವಂತ ಬಲದಿಂದಲೇ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರಲಿದೆ’ ಎಂದರು.
‘ಪೊಲೀಸ್ ವರ್ಗಾವಣೆ ಸಂಬಂಧ ಉದ್ದೇಶಪೂರ್ವಕ ನನ್ನ ಹಾಗೂ ಗೃಹ ಸಚಿವರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಹಿಂದೆಯೂ ಇಂಥದ್ದೊಂದು ದೂರು ದಾಖಲಾಗಿತ್ತು. ಆ ದೂರು ವಜಾ ಆಗಿತ್ತು’ ಎಂದರು.