ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲಿಷ್‌ನಲ್ಲಿ ಬರಲಿದೆ ‘ಕವಿರಾಜಮಾರ್ಗ’

Last Updated 10 ಮೇ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಸಾವಿರ ವರ್ಷಗಳ ಹಿಂದೆ ರಚಿಸಲಾಗಿದ್ದ ಕನ್ನಡದ ಮೊದಲ ಲಾಕ್ಷಣಿಕ ಗ್ರಂಥ ‘ಕವಿರಾಜ ಮಾರ್ಗ’ದ ಮೊದಲ ಅಂತಾರಾಷ್ಟ್ರೀಯ ಇಂಗ್ಲಿಷ್ ಅನುವಾದ ಸದ್ಯದಲ್ಲೇ ಹೊರಬೀಳಲಿದೆ.

ಪೌರ್ವಾತ್ಯರೂ ಸೇರಿದಂತೆ ಕನ್ನಡೇತರ ಓದುಗರನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಮಾಡಲಾಗಿರುವ ಈ ಅನುವಾದವನ್ನು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠ ಮನೋಹರ ಪಬ್ಲಿಷರ್ಸ್ ಜೊತೆಗೂಡಿ ಪ್ರಕಟಿಸಲಿದೆ.

ಕನ್ನಡದಲ್ಲಿ ಗ್ರಂಥ ರಚನೆಯ ಇತಿಹಾಸ ಕ್ರಿ.ಶ.ಏಳು ಮತ್ತು ಎಂಟನೆಯ ಶತಮಾನದಷ್ಟು ಪ್ರಾಚೀನ ಎಂದು ಹೇಳಲಾಗಿದೆ. ಆದರೆ ಈವರೆಗೆ ಲಭಿಸಿರುವ ಅಂತಹ ಗ್ರಂಥ ‘ಕವಿರಾಜ ಮಾರ್ಗ’ ಮಾತ್ರ. ರಾಷ್ಟ್ರಕೂಟ ಅರಸು ನೃಪತುಂಗನ ಸಭಾಸದ ಶ್ರೀವಿಜಯನು ಕ್ರಿ.ಶ.815 ರಿಂದ 877ರ ನಡುವೆ ಈ ಗ್ರಂಥವನ್ನು ರಚಿಸಿರಬಹುದು ಎಂದು ವಿದ್ವಾಂಸರು ಊಹಿಸಿದ್ದಾರೆ.

ಶ್ರೀವಿಜಯ ಕವಿರಾಜ ಮಾರ್ಗಂ- ದ ವೇ ಆಫ್ ದಿ ಕಿಂಗ್ ಪೊಯೆಟ್ಸ್  (SRIVIJAYA KAVIRAJAMARGAM- The Way of the King Poets) ಎಂಬ  ಈ ಕೃತಿಯನ್ನು ಹಳೆಗನ್ನಡದಿಂದ ಅನುವಾದಿಸಿರುವವರು ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಪ್ರೊಫೆಸರ್ ಆರ್.ವಿ.ಎಸ್.ಸುಂದರಂ ಮತ್ತು ಅಮೆರಿಕೆಯ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಸಂಸ್ಕೃತ ಪ್ರೊಫೆಸರ್ ದೇವೆನ್ ಎಂ.ಪಟೇಲ್.


ಮೂರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ಮೊದಲ ಪ್ರಕಟಣೆಯಿದು.
‘ಅಭಿಜಾತ ಕನ್ನಡ ಪುಸ್ತಕ ಮಾಲೆ’ಯಡಿ (ಕ್ಲಾಸಿಕಲ್ ಕನ್ನಡ ಸೀರೀಸ್) ವರ್ಷಾಂತ್ಯದೊಳಗೆ ಇನ್ನೂ ಎರಡು ಮಹತ್ವದ ಕನ್ನಡ ಕೃತಿಗಳನ್ನು ಇಂಗ್ಲಿಷಿಗೆ ತರಲಾಗುವುದು. ಹತ್ತನೆಯ ಶತಮಾನದಲ್ಲಿ ರಚಿಸಲಾದ ಜೈನ ಧಾರ್ಮಿಕ ಕತೆಗಳ ಸಂಗ್ರಹ ‘ವಡ್ಡಾರಾಧನೆ’ ಮತ್ತು ರನ್ನ ಕವಿಯ ‘ಗದಾಯುದ್ಧ’ ಕಾವ್ಯಗಳ ಇಂಗ್ಲಿಷ್ ಅನುವಾದ ಕಾರ್ಯ ಈಗಾಗಲೆ ಪ್ರಗತಿಯಲ್ಲಿದೆ. ಈ ಮೂರು ಕೃತಿಗಳ ಇಂಗ್ಲಿಷ್ ಅನುವಾದಿತ ಆವೃತ್ತಿಗಳನ್ನು ಪ್ರಕಟಿಸಲಾಗುವುದು’ ಎಂದು ಅಧ್ಯಯನ ಪೀಠದ ಮುಖ್ಯಸ್ಥ ಪ್ರೊ.ಪುರುಷೋತ್ತಮ ಬಿಳಿಮಲೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕನ್ನಡವು ಭಾರತದ ಇತರೆ ಭಾಷೆಗಳಿಗಿಂತ ಹೇಗೆ ಭಿನ್ನ ಮತ್ತು ವಿಶಿಷ್ಟ ಎಂಬುದು ಒಡೆದು ಕಾಣುವುದು ಅದರ ಸಾಹಿತ್ಯ ಕೃತಿಗಳಲ್ಲಿ. ಉದಾಹರಣೆಗೆ ಕವಿರಾಜ ಮಾರ್ಗವು ಸಂಸ್ಕೃತದ ದಂಡಿ ವಿರಚಿತ ‘ಕಾವ್ಯಾದರ್ಶ’ವನ್ನು ಆಧರಿಸಿ ಬರೆದ ಕೃತಿಯಾದರೂ, ದಂಡಿಯ ‘ಕಾವ್ಯಾದರ್ಶ’ದ ಚೌಕಟ್ಟನ್ನು ಕನ್ನಡದ  ಕನ್ನಡಿಯಲ್ಲಿ ನೋಡುವ ವಿಶಿಷ್ಟ ಕೃತಿ. ಕಣ್ಣುಮುಚ್ಚಿ ಗಿಳಿಪಾಠದಂತೆ ಅನುವಾದಿಸಲಾಗಿಲ್ಲ. ‘ಕಾವ್ಯಾದರ್ಶ’ವು ಕಾವ್ಯಮೀಮಾಂಸೆಯ ಬಗ್ಗೆ ಏನು ಹೇಳುತ್ತದೆ ಎಂಬುದನ್ನು ಕನ್ನಡದ ಚೌಕಟ್ಟಲ್ಲಿಟ್ಟು ವಿಶ್ಲೇಷಣೆ ಮಾಡಲಾಗಿದೆ. ಅದನ್ನು ಕನ್ನಡದ ವಾತಾವರಣಕ್ಕೆ ಅನ್ವಯಿಸಿ ಕನ್ನಡ ಹೇಗೆ ಭಿನ್ನವೆಂದು ನಿರೂಪಿಸುತ್ತದೆ. ಉದಾಹರಣೆಗೆ ಕನ್ನಡಿಗರನ್ನು ‘ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತಮತಿಗಳ್..’ ಎಂದು ಬಣ್ಣಿಸುವುದು ಜಾನಪದದ ಪರಿಕಲ್ಪನೆ. ಆ ಕಾಲದ ಶಿಷ್ಟಸಾಹಿತ್ಯದ ಬಗ್ಗೆ ಹೇಳುವ ಮಾತಲ್ಲ. ಕನ್ನಡದ ಕಾವ್ಯಗುಣ ಸಂಸ್ಕೃತಕ್ಕಿಂತ ಭಿನ್ನ. ಕನ್ನಡದ ಕಾವ್ಯಗಳು ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಅನನ್ಯತೆಯನ್ನು ಪ್ರಾಚೀನ ಕಾಲದಿಂದಲೂ ಹೇಳುತ್ತಲೇ ಬಂದಿವೆ. ಕನ್ನಡದ ಈ ವಿಶಿಷ್ಟ ಗುಣ ಕಾರಣಾಂತರಗಳಿಂದ ಕನ್ನಡೇತರರಿಗೆ ಗೊತ್ತಿಲ್ಲ. ಈ ದೇಶಕ್ಕೂ ಗೊತ್ತಿಲ್ಲ. ಜಗತ್ತಿಗೂ ಗೊತ್ತಿಲ್ಲ. ಯಾಕೆಂದರೆ ಕನ್ನಡದ ಈ ಮುಖ್ಯ ಕೃತಿಗಳ ಅನುವಾದ ಇಲ್ಲಿಯ ತನಕವೂ ಆಗಿಲ್ಲ'' ಎಂದು ಬಿಳಿಮಲೆ ವಿವರಿಸಿದರು.

‘ತಮಿಳಿಗೆ ಅಂತರರಾಷ್ಟ್ರೀಯ ಇಂಗ್ಲಿಷ್ ಅನುವಾದದ ದೊಡ್ಡ ಪರಂಪರೆಯೇ ಇದೆ. ತೆಲುಗು ಕೂಡ ಈ ದಿಸೆಯಲ್ಲಿ ಹಿಂದೆ ಬಿದ್ದಿಲ್ಲ. ಆದರೆ ಕನ್ನಡದ ಮುಖ್ಯಕೃತಿಗಳು ಇಂತಹ ಪರಂಪರೆಯಿಂದ ವಂಚಿತವಾಗಿವೆ. ಕನ್ನಡ ಭಾಷೆ ಮತ್ತು ಸಾಹಿತ್ಯದ ವಿಶಿಷ್ಟತೆಯನ್ನು ದೇಶಕ್ಕೆ ಹೇಳಬೇಕಿದ್ದರೆ ನಮಗೆ ಅನುವಾದ ಬೇಕೇ ಬೇಕು. ಇಂಗ್ಲಿಷಿಗೆ ಈ ಕೃತಿಗಳು ಬರಲೇಬೇಕು. ಸೀಮಿತ ಅವಧಿ ಮತ್ತು ಸೀಮಿತ ಅನುದಾನದಲ್ಲಿ ನಮ್ಮ ಸಾಹಿತ್ಯದ ವಿಶಿಷ್ಟತೆಯನ್ನು ಬೇರೆ ಭಾಷೆಯವರಿಗೆ ತಿಳಿಸುವುದು ಕನ್ನಡ ಪೀಠದ ಆದ್ಯ ಕರ್ತವ್ಯ. ಕನ್ನಡವನ್ನು ಕನ್ನಡೇತರ ಜಾಗಗಳಲ್ಲಿ ಬಲಪಡಿಸುವ ಕ್ರಮವೂ ಹೌದು’ ಎಂದು ಅವರು ಪ್ರತಿಪಾದಿಸಿದರು.

‘ಈ ಅನುವಾದವೇ ಸರ್ವಶ್ರೇಷ್ಠ ಎಂಬ ಅಭಿಪ್ರಾಯ ನನಗಿಲ್ಲ. ಈ ಕಾವ್ಯಗಳ ಅನುವಾದ ಅಷ್ಟು ಸುಲಭ ಅಲ್ಲ. ಒಂದು ಅತ್ಯುತ್ತಮ ಅನುವಾದ ಸಾಮಾನ್ಯವಾಗಿ ಒಮ್ಮೆಗೇ ಬಂದುಬಿಡುವುದಿಲ್ಲ. ಹಾಗೆಂದು ಕೈ ಕಟ್ಟಿ ಕುಳಿತುಕೊಳ್ಳುವ ಬದಲು ಒಂದು ಪ್ರಯತ್ನ ಶುರು ಮಾಡುವುದು ಲೇಸು. ಇಂತಹ ಪ್ರಯತ್ನಗಳು ಭವಿಷ್ಯತ್ತಿನಲ್ಲಿ ಹೆಚ್ಚು ಅನುವಾದಗಳಿಗೆ ದಾರಿ ಮಾಡಿಕೊಡಬೇಕು. ಆ ಮೂರು ಕೃತಿಗಳು ಬಂದರೆ ಕನಿಷ್ಠ ಪಕ್ಷ ಕನ್ನಡ ಕಾವ್ಯದ ಸುವರ್ಣಯುಗ ಎಂದು ಕರೆಯುವ ಹತ್ತನೆಯ ಶತಮಾನದ ಅತ್ಯುತ್ತಮ ಕೃತಿಗಳನ್ನು ಕನ್ನಡೇತರರಿಗೆ ಹೇಳಿದಂತೆ ಆಗುತ್ತದೆ’ ಎಂದರು.
ತುಳು ಪಾಡ್ದನಗಳ ಇಂಗ್ಲಿಷ್ ‘ರೀಡರ್’ ತಯಾರಿಯೂ ನಡೆದಿದೆ. ಪರ್ಯಾಯ ಸಂಸ್ಕೃತಿ - ಸಂವಾದವನ್ನು ಒಳಗೊಂಡ ತುಳು ಪಾಡ್ದನಗಳ ಮುಖ್ಯ ಭಾಗಗಳನ್ನು ಪ್ರೊ.ಎ.ವಿ.ನಾವಡ ಅವರು ಆಯ್ದು ಕೊಡಲಿದ್ದು ಚಿನ್ನಪ್ಪಗೌಡ ಮತ್ತು ಸುರೇಂದ್ರರಾವ್ ಅವರು ಇಂಗ್ಲಿಷಿಗೆ ಅನುವಾದ ಮಾಡಲಿದ್ದಾರೆ. ಡಾ.ರಹಮತ್ ತರೀಕೆರೆ ಅವರ ‘ಕರ್ನಾಟಕದ ಸೂಫಿ ಪರಂಪರೆ’   ಕೃತಿಯನ್ನೂ ಕನ್ನಡ ಪೀಠ ಇಂಗ್ಲಿಷಿಗೆ ತರಲಿದೆ ಎಂದು ಪ್ರೊ.ಬಿಳಿಮಲೆ ತಿಳಿಸಿದರು.
ಪಿಎಚ್.ಡಿ. ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆಯನ್ನು ತೀವ್ರ ಪ್ರಮಾಣದಲ್ಲಿ ಖೋತಾ ಮಾಡಿರುವ ಜೆ.ಎನ್.ಯು. ಆಡಳಿತದ ನಿರ್ಧಾರ ಒಂದು ವೇಳೆ ಕನ್ನಡಪೀಠದ ಆ ಸಂಬಂಧದ ಕೆಲಸ ಕಾರ್ಯವನ್ನು ಕುಂಠಿತಗೊಳಿಸಿದರೆ, ಅನುವಾದ-ಪ್ರಕಾಶನದ ಕೆಲಸವನ್ನು ರಭಸದಿಂದ ನಡೆಸಲಾಗುವುದು. ಯಾವುದೇ ಕಾರಣಕ್ಕೆ ಕೈ ಕಟ್ಟಿ ಕುಳಿತುಕೊಳ್ಳುವುದಿಲ್ಲ. ಈಗಾಗಲೆ ಕನ್ನಡ ಪೀಠಕ್ಕೆ ಬೇರೆ ಭಾಷೆಗಳ ಹಿರಿಯ ವಿದ್ವಾಂಸರು ನಿಯತವಾಗಿ ಭೇಟಿ ನೀಡುತ್ತಿದ್ದಾರೆ ಎಂದರು.

ಕಾವೇರಿಯಿಂದ ಗೋದಾವರಿವರೆಗೆ..
ಅಂದಿನ ಕಾಲದ ಕನ್ನಡ ನಾಡಿನ ಸೀಮೆಗಳನ್ನು ಗುರುತಿಸುವ ‘ಕಾವೇರಿಯಿಂದಮಾ ಗೋದಾವರಿವರೆಮಿರ್ದ ನಾಡದಾ ಕನ್ನಡದೋಳ್ ...’  ಮತ್ತು ಕನ್ನಡ ಮೌಖಿಕ ವಿದ್ವತ್ ಪರಂಪರೆಯ ‘ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತ ಮತಿಗಳ್..’ ಹಾಗೂ ಕನ್ನಡ ಜನರ ಗುಣಸ್ವಭಾವಗಳ ‘ಸುಭಟರ್ಕಳ್, ಚೆಲ್ವರ್ಕಳ್, ಗುಣಿವಳಿ, ಅಭಿಮಾನಿಗಳ್, ಅತ್ಯುಗ್ರರ್, ವಿವೇಕಿಗಳ್’ ಎಂಬ ಪ್ರಸ್ತಾಪಗಳು ಕವಿರಾಜ ಮಾರ್ಗದಲ್ಲಿ ಕಾಣಬರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT