ಹುಣಸೂರು: ತಾಲ್ಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಡಿ.ಬಿ.ಕುಪ್ಪೆ ವಲಯದಲ್ಲಿ 3 ತಿಂಗಳ ಹೆಣ್ಣು ಹುಲಿ ಮರಿ ಮೃತಪಟ್ಟಿದೆ.
ಕೈ ಮರ ಬೀಟ್ ವ್ಯಾಪ್ತಿಗೆ ಸೇರಿದ ಕೈ ಮರದ ಬಳಿ ತಾಯಿಯಿಂದ ಬೇರ್ಪಟ್ಟ ಹುಲಿ ಮರಿ ಮೃತಪಟ್ಟಿದೆ. ಸ್ಥಳಕ್ಕೆ ಹುಲಿ ಯೋಜನೆ ನಿರ್ದೇಶಕ ಮಣಿಕಂಠನ್ ಮತ್ತು ಪಶು ವೈದ್ಯಾಧಿಕಾರಿ ಡಾ.ಉಮಾಶಂಕರ್ ಭೇಟಿ ನೀಡಿ ಮರಣೋತ್ತರ ಪರೀಕ್ಷೆ ನಡೆಸಿದರು. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಆನೆ ಮರಿಗೆ ಗಾಯ
ಹುಣಸೂರು– ಗೋಣಿಕೊಪ್ಪಲು ಮುಖ್ಯರಸ್ತೆಯ ಆನೇಚೌಕೂರು ಆನೆ ಶಿಬಿರಕ್ಕೆ ಸೇರಿದ ಶಂಕರಪುರ ಶಿಬಿರದ 5 ವರ್ಷದ ಆನೆ ಮರಿಗೆ ಕಾರು ಡಿಕ್ಕಿ ಹೊಡೆದಿದೆ.
ಆನೆಯನ್ನು ಎಂದಿನಂತೆ ಕಾಡಿನಲ್ಲಿ ಮೇಯಲು ಬಿಡಲಾಗಿತ್ತು. ಸಂಜೆ ಶಿಬಿರಕ್ಕೆ ಹಿಂದಿರುಗುವ ಸಮಯದಲ್ಲಿ ಕಾರು ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಕಾರು ಸಂಪೂರ್ಣ ಜಖಂಗೊಂಡಿದೆ.
ತೀವ್ರವಾಗಿ ಗಾಯಗೊಂಡಿರುವ ಆನೆಮರಿಗೆ ಅರಣ್ಯ ಇಲಾಖೆ ಸಿಬ್ಬಂದಿ ಚಿಕಿತ್ಸೆ ನೀಡಿದ್ದಾರೆ. ಕೊಡಗು ಜಿಲ್ಲೆಯ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.