ಮೈಸೂರು: ರೈತರ ಕೃಷಿ ಸಾಲಮನ್ನಾ ಮಾಡಬೇಕೆಂದು ಒತ್ತಾಯಿಸಿ ಮೇ 16ರಿಂದ ಬೆಂಗಳೂರಿನ ಆನಂದ ರಾವ್ ಸರ್ಕಲ್ ಹತ್ತಿರದ ಗಾಂಧಿ ಪ್ರತಿಮೆ ಮುಂಭಾಗ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಬಡ ಗಲಪುರ ನಾಗೇಂದ್ರ ತಿಳಿಸಿದರು.
ರಾಜ್ಯವು ನಿರಂತರ ಬರಗಾಲದಿಂದ ತತ್ತರಿಸಿದ್ದು, ರೈತರು ಉದ್ಯೋಗ ಅರಸಿ ಗುಳೆ ಹೋಗುವ ಹಾಗೂ ಆತ್ಮಹತ್ಯೆಗಳಿಗೆ ಮುಂದಾಗುತ್ತಿರುವ ಸಂಖ್ಯೆಯೂ ಅಧಿಕವಾಗಿದೆ. ರೈತರ ಕೃಷಿ ಸಾಲಮನ್ನಾ ವಿಚಾರದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಿಫಲವಾಗಿದ್ದು, ಕೇಂದ್ರ ಸರ್ಕಾರ ಇಬ್ಬಂದಿತನ ತೋರಿಸುತ್ತಿದೆ.
ಬ್ಯಾಂಕುಗಳು ಸಹ ರೈತರಿಗೆ ಸಿಗುತ್ತಿರುವ ಹಾಲಿನ ಸಹಾಯಧನ, ಉದ್ಯೋಗ ಖಾತ್ರಿ ಹಣ, ವೃದ್ಧಾಪ್ಯ ವೇತನಗಳಂತಹ ಸಹಾಯಧನವನ್ನು ಸಾಲಕ್ಕೆ
ಜಮೆ ಮಾಡಿಕೊಳ್ಳುತ್ತಿರುವುದು ಅಮಾನವೀಯ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದರು.
‘ದೊಡ್ಡ ದೊಡ್ಡ ಕಂಪೆನಿಗಳ ಸಾವಿರಾರು ಕೋಟಿ ಸಾಲ ಮನ್ನಾ ಮಾಡುವ ಕೇಂದ್ರ ಸರ್ಕಾರ, ರೈತರ ಕೃಷಿ ಸಾಲ ಮನ್ನಾ ಮಾಡುವುದು ದೇಶದ ಆರ್ಥಿಕ ಅಶಿಸ್ತಿನ ಪರಮಾ ವಧಿ ಎಂದು ಹೇಳುತ್ತಿದೆ. ಆದರೆ ಇದೇ ಸರ್ಕಾರ ಉತ್ತರ ಪ್ರದೇಶ ದಲ್ಲಿ ರೈತರ ಕೃಷಿ ಸಾಲ ಮನ್ನಾ ಮಾಡಿದ್ದು, ಕೇಂದ್ರ ಸರ್ಕಾರ ತಾನು ರೈತ ವಿರೋಧಿ ಎಂಬುದನ್ನು ಮತ್ತೆ ಸಾಬೀತು ಮಾಡುತ್ತಿದೆ’ ಎಂದು ವ್ಯಂಗ್ಯವಾಡಿದರು.
ಪ್ರತಿ ದಿನ ವಿವಿಧ ಜಿಲ್ಲೆಗಳಿಂದ ಸಾವಿರಾರು ರೈತರು ಧರಣಿಯಲ್ಲಿ ಭಾಗವಹಿಸಲಿದ್ದಾರೆ. ಮೇ 16ರಂದು ತುಮಕೂರು, ಮಂಡ್ಯ ಹಾಗೂ ಬೆಳಗಾವಿ ಜಿಲ್ಲೆಗಳ ರೈತರು ಪಾಲ್ಗೊಳ್ಳಲಿದ್ದಾರೆ. ಮೇ 19 ರಂದು ಮೈಸೂರು, ರಾಯಚೂರು, ಯಾದಗಿರಿ ಜಿಲ್ಲೆಯ ರೈತರು ಭಾಗವಹಿಲಿದ್ದಾರೆ ಎಂದು ಮಾಹಿತಿ ನೀಡಿದರು.
ಹೊಸಕೋಟೆ ಬಸವರಾಜು, ಹೊಸೂರು ಕುಮಾರ್ ಇದ್ದರು.