ಕೂಡಲಸಂಗಮ: ಸಮೀಪದ ಹೂವನೂರ ಗ್ರಾಮದ ಹೊಲವೊಂದರಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದನ್ನು ಪತ್ತೆ ಹಚ್ಚಿರುವ ಪೊಲೀಸರು ಹೊಲದಲ್ಲಿ ಬೆಳೆದು ನಿಂತ ಸುಮಾರು 7 ಕೆ.ಜಿ. ಗಾಂಜಾ ಮತ್ತು ಇಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ತಹಶೀಲ್ದಾರ್ ಸುಭಾಷ ಸಂಪಗಾವಿ ಸಮ್ಮುಖದಲ್ಲಿ ಸಿಪಿಐ. ಜೆ. ಕರುಣೇಶಗೌಡ ಹಾಗೂ ಪಿಎಸ್ಐ. ಶರಣಬಸಪ್ಪ ಆಜೂರ ನೇತೃತ್ವದ ಹುನಗುಂದ ಪೊಲೀಸರ ತಂಡ ಮಂಗಳವಾರ ಸಂಜೆ ದಾಳಿ ನಡೆಸಿದ ಸಂದರ್ಭದಲ್ಲಿ ಹೊಲವೊಂದರಲ್ಲಿ ಗಾಂಜಾ ಬೆಳೆದಿರುವುದು ಪತ್ತೆಯಾಗಿದೆ.
ಗಾಂಜಾ ಬೆಳೆದ ಹೊಲ ಇಳಕಲ್ ನಗರದ ಮಹಾಂತೇಶ ಸೂಳಿಭಾವಿ ಅವರಿಗೆ ಸೇರಿದ್ದಾಗಿದ್ದು, ತಾಲೂಕಿನ ಗಂಜಿಹಾಳ ಗ್ರಾಮದ ಬುಡ್ನೆಸಾಬ ಲಾಲಸಾಬ ಮುಲ್ಲಾ ಅವರಿಗೆ ಕೃಷಿ ಚಟುವಟಿಕೆ ಮಾಡಲು ಲಾವಣಿ ಕೊಟ್ಟಿದ್ದರು ಎಂದು ಹೇಳಲಾಗುತ್ತಿದೆ.
ಪೊಲೀಸ್ ದಾಳಿ ಸಂದರ್ಭದಲ್ಲಿ ಹೊಲದಲ್ಲಿ ಇದ್ದ ಬುಡ್ನೆಸಾಬ ಲಾಲಸಾಬ ಮುಲ್ಲಾ ಮತ್ತು ಆತನ ಮಗ ಹುಸೆನಸಾಬ ಮುಲ್ಲಾ ಅವರನ್ನು ವಶಕ್ಕೆ ಪಡೆದು ಕೊಂಡಿದ್ದಾರೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪಿಎಸ್ಐ. ಶರಣಬಸಪ್ಪ ಆಜೂರ ಮುಂದಿನ ತನಿಖೆ ಕೈಗೊಂಡಿದ್ದಾರೆ.