ನವದೆಹಲಿ: ‘ಮುಸ್ಲಿಂ ವಿವಾಹ ಪದ್ದತಿಯಲ್ಲಿ ತ್ರಿವಳಿ ತಲಾಖ್ಗೆ ಸಂಬಂಧಿಸಿದ ನಿರ್ಣಯಗಳನ್ನು ಕೈಗೊಳ್ಳುವ ವೇಳೆ ಮಹಿಳೆಗೂ ತನ್ನ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡಬಹುದು’ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ(ಎಐಎಂಪಿಎಲ್ಬಿ)ಗೆ ಸುಪ್ರೀಂ ಕೋರ್ಟ್ ತಿಳಿಸಿದೆ.
ಸುಪ್ರಿಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಜೆ.ಎಸ್ ಖೇಹರ್ ಅವರನ್ನೊಳಗೊಂಡ ಐದು ಜನ ನ್ಯಾಯಾಧೀಶರ ಸಂವಿಧಾನಿಕ ಪೀಠ, ‘ಮುಸ್ಲಿಂ ಸಮುದಾಯದ ನಾಯಕರು(ಕ್ವಾಜಾ)ಗಳಿಗೆ ತಮ್ಮ ಧರ್ಮದ ಮದುವೆ ಸಂದರ್ಭದಲ್ಲಿಯೇ ಈ ನಿಯಮವನ್ನು ಅಳವಡಿಸಿಕೊಳ್ಳಬೇಕು’ ಎಂದು ಹೇಳಿದೆ.
‘ಮರಣದಂಡನೆ ಸಮಯದಲ್ಲಿ ತಲಾಕ್ಗೆ ಅಸಮ್ಮತಿ ಸೂಚಿಸಲು ಮಹಿಳಯರಿಗೆ ಅವಕಾಶವಿದೆ. ಹಾಗಾಗಿ ಇದನ್ನು ಅಳವಡಿಸಿಕೊಳ್ಳ ಬಹುದು’ ಎಂದು ಕುರಿಯನ್ ಜೋಸೆಫ್, ಆರ್.ಎಫ್ ನಾರೀಮನ್, ಯು.ಯು ಲಲಿತ್ ಹಾಗೂ ಅಬ್ದುಲ್ ನಾಜೀರ್ ಅವರಿದ್ದ ಪೀಠಕ್ಕೆ ನ್ಯಾಯಾಧೀಶರು ಹೇಳಿದ್ದಾರೆ.
ಇದಕ್ಕೆ ಪ್ರತಿಯಾಗಿ ಎಐಎಂಪಿಎಲ್ಬಿ ಪರ ವಾದ ಮಂಡಿಸುತ್ತಿರುವ ಮಾಜಿ ಸಚಿವರೂ ಆದ ಕಪಿಲ್ ಸಿಬಲ್, ‘ನಮ್ಮ ಕಡೆಯಿಂದ ಯಾವ ನಿರ್ಣಯವನ್ನೂ ಕೈಗೊಳ್ಳಲಾಗದು’ ಎಂದಿದ್ದಾರೆ. ಜತೆಗೆ ‘ಇದು ಧಾರ್ಮಿಕ ನಂಬಿಕೆಯ ವಿಷಯವಾಗಿದ್ದು, ಸಂವಿಧಾನದ ಕಾನೂನುಗಳ ಆಧಾರದ ಮೇಲೆ ತೀರ್ಮಾನಿಸಲಾಗದು’ ಎಂದು ಹೇಳಿದ್ದಾರೆ.
ನಿನ್ನೆ ತಮ್ಮ ಧರ್ಮದ ವಿವಾಹ ಕಾನೂನನ್ನು ‘ಶ್ರೀರಾಮ ಅಯೋಧ್ಯೆಯಲ್ಲಿ ಹುಟ್ಟಿದ್ದ ಎಂಬ ನಂಬಿಕೆ ಎಷ್ಟು ಸತ್ಯವೋ ನಮ್ಮ ಕಾನೂನೂ ಸಹ ಅಷ್ಟೇ ಸತ್ಯ’ ಎಂದು ಎಐಎಂಪಿಎಲ್ಬಿ ಪ್ರತಿಪಾದಿಸಿತ್ತು.
ಐದನೇ ದಿನ ಪ್ರಕರಣ ಕುರಿತ ವಾದ ಆಲಿಸಿದ ಸಂವಿಧಾನಿಕ ಪೀಠದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಖ್ ಹಾಗೂ ಪಾರ್ಸಿಯಂತ ವಿವಿಧ ಧರ್ಮಕ್ಕೆ ಸೇರಿದ ನ್ಯಾಯಮೂರ್ತಿಗಳಿದ್ದಾರೆ.