ಕುಂದಾಪುರ (ಉಡುಪಿ ಜಿಲ್ಲೆ): ‘ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರವನ್ನು ದಕ್ಷಿಣ ಭಾರತದಲ್ಲಿಯೇ ಮುಂಚೂಣಿಯ ಕ್ಷೇತ್ರವಾಗಿಸಲು ಸಮಗ್ರವಾಗಿ ಅಭಿವೃದ್ಧಿ ಪಡಿಸಲಾಗುವುದು.
ಕ್ಷೇತ್ರದ ಶಾಸಕರು, ವ್ಯವಸ್ಥಾಪನಾ ಮಂಡಳಿ ಹಾಗೂ ಭಕ್ತರ ಅಭಿಪ್ರಾಯಗಳನ್ನು ಪಡೆದುಕೊಂಡು ಸಮಗ್ರ ಅಭಿವೃದ್ಧಿಯ ನೀಲ ನಕ್ಷೆಯನ್ನು ರೂಪಿಸಲಾಗುವುದು’ ಎಂದು ಸಚಿವ ರುದ್ರಪ್ಪ ಮಾನಪ್ಪ ಲಮಾಣಿ ಹೇಳಿದರು.
ಬುಧವಾರ ಕೊಲ್ಲೂರಿಗೆ ಭೇಟಿ ನೀಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ‘ಅಂದಾಜು ₹26 ಕೋಟಿ ವೆಚ್ಚದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಅಭಿವೃದ್ಧಿಗಾಗಿ ಮಾಸ್ಟರ್ ಪ್ಲಾನ್ ರೂಪಿಸಲಾಗಿದೆ.
₹76 ಕೋಟಿ ವೆಚ್ಚದಲ್ಲಿ ಮೈಸೂರಿನ ಚಾಮುಂಡಿ ಬೆಟ್ಟ ಹಾಗೂ ಸವದತ್ತಿ ಕ್ಷೇತ್ರದಲ್ಲಿ 246 ಕೊಠಡಿಗಳ ವಸತಿ ಗೃಹ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಲಾಗಿದೆ.
ರಾಜ್ಯದಲ್ಲಿ ‘ಎ’ ಹಾಗೂ ‘ಬಿ’ ದರ್ಜೆಯ ದೇವಾಲಯಗಳಿಂದ ಬರುವ ಆದಾಯ ಗಳನ್ನು ಬಳಸಿಕೊಂಡು ಅಂದಾಜು ₹400 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುವುದು’ ಎಂದರು.