ರಾಯಚೂರು: ‘ನಗರದ ವಾರ್ಡ್ ಸಂಖ್ಯೆ 9 ರ ಬೇರೂನಕಿಲ್ಲಾ ಕೋಟೆಯಲ್ಲಿ ಸಾರ್ವಜನಿಕ ಶೌಚಾಲಯಗಳ ಕೊರತೆಯಿಂದಾಗಿ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಹಂದಿಗಳ ಹಾವಳಿಯಿಂದ ಮಕ್ಕಳು ಬಹಿರ್ದೆಸೆಗೆ ಹೋಗುವುದು ದುಸ್ತರವಾಗಿದೆ. ಕೂಡಲೇ ಸಾರ್ವಜನಿಕ ಶೌಚಾಲಯಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ಕ್ರಾಂತಿಯೋಗಿ ಶ್ರೀ ಬಸವೇಶ್ವರ ಸೇವಾ ಸಂಘದ ಪದಾಧಿಕಾರಿಗಳು ಹೆಚ್ಚುವರಿ ಜಿಲ್ಲಾಧಿಕಾರಿಗೆ ಬುಧವಾರ ಮನವಿ ಸಲ್ಲಿಸಿದರು.
‘ಸ್ವಚ್ಛ ಭಾರತ ಅಭಿಯಾನಕ್ಕಾಗಿ ಸರ್ಕಾರವು ಕೋಟ್ಯಂತರ ಹಣ ವೆಚ್ಚ ಮಾಡುತ್ತಿದೆ. ಆದರೆ ನಗರದ ಹೃದಯಭಾಗದಲ್ಲಿ ಶೌಚಾಲಯಗಳನ್ನು ಸಮರ್ಪಕವಾಗಿ ನಿರ್ಮಿಸುತ್ತಿಲ್ಲ. ವಯೋವೃದ್ಧರು, ಮಹಿಳೆಯರು ಮತ್ತು ಮಕ್ಕಳು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಈ ಬಗ್ಗೆ ನಗರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ’ ಎಂದು ದೂರಿದ್ದಾರೆ.
‘ಬಡಾವಣೆಯಲ್ಲಿ ಸೊಳ್ಳೆಗಳ ಕಾಟ ಹೆಚ್ಚಿದೆ. ಪ್ರತಿದಿನ ಫಾಗಿಂಗ್ ಮತ್ತು ಚರಂಡಿಗಳಿಗೆ ಬ್ಲಿಚಿಂಗ್ ಪೌಡರ್ ಹಾಕಿಸುವ ವ್ಯವಸ್ಥೆ ಮಾಡಿಸಬೇಕು. ಬಡಾವಣೆಯ ದೇವಸ್ಥಾನಗಳಿಗೆ ಬರುವ ಭಕ್ತರಿಗೆ ಹಂದಿಗಳು ಕಾಟ ನೀಡುತ್ತಿವೆ. ಬೀದಿ ದೀಪಗಳು ಸರಿಯಾಗಿಲ್ಲ. ಕೂಡಲೇ ಸಮಸ್ಯೆಗಳನ್ನು ಪರಿಹರಿಸಬೇಕು’ ಎಂದು ಒತ್ತಾಯಿಸಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ರಾಜೇಶಕುಮಾರ, ಮುಖಂಡರಾದ ಯಕ್ಲಾಸಪುರ ಚಂದ್ರು, ಸೂಗುರೇಶ್ವರ, ಮಹೇಶ, ನಾಗರಾಜ, ಆನಂದ, ವೀರೇಶ, ಪ್ರಶಾಂತ, ಭರತ, ಶಿವು, ಶೇರು ಇದ್ದರು.