ಹುಣಸಗಿ: ‘ಸಾವು ಯಾವುದಕ್ಕೂ ಪರಿಹಾರವಲ್ಲ. ಆದ್ದರಿಂದ ರೈತರು ಆರ್ಥಿಕ ಸಂಕಷ್ಟ ಎದುರಾದಾಗ ಆತ್ಮಹತ್ಯೆಯ ದಾರಿ ತುಳಿಯುವುದು ಸರಿಯಲ್ಲ’ ಎಂದು ಮಾಜಿ ಸಚಿವ ರಾಜುಗೌಡ ಹೇಳಿದರು.
ಹುಣಸಗಿ ಸಮೀಪದ ಜಾಲಿಗಿಡದ ತಾಂಡಾದಲ್ಲಿ ಕಳೆದ ಮೇ 17ರಂದು ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತ ಲಕ್ಷ್ಮಣ ಚವ್ಹಾಣ ಮನೆಗೆ ಭೇಟಿ ನೀಡಿ, ಸಾಂತ್ವನ ಹೇಳಿದರು. ವೈಯಕ್ತಿಕವಾಗಿ ₹20 ಸಾವಿರ ಪರಿಹಾರ ಧನವನ್ನು ರೈತನ ಕುಟುಂಬಕ್ಕೆ ನೀಡಿ, ನಂತರ ಮಾತನಾಡಿದರು.
‘ಭೂಮಿತಾಯಿಯನ್ನು ನಂಬಿದರೇ ಕೈಬಿಡುವುದಿಲ್ಲ. ಈ ವರ್ಷ ಬೆಳೆಹಾನಿಯಾಗಿ ತೊಂದರೆಗೆ ಒಳಗಾಗಿದ್ದರೂ ಮುಂದಿನ ವರ್ಷದಲ್ಲಿ ಮತ್ತೆ ಒಳ್ಳೆಯ ಫಸಲು ಬರುತ್ತದೆ. ಆದರೆ, ಕಳೆದುಕೊಂಡ ಜೀವ ಮತ್ತೆ ಬರುವುದಿಲ್ಲ. ಆದ್ದರಿಂದ ರೈತರು ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಬಾರದು’ ಎಂದು ಮನವಿ ಮಾಡಿದರು.
‘ರಾಜ್ಯ ಸರ್ಕಾರ ರೈತರ ಆತ್ಮಹತ್ಯೆ ತಡೆಯುವಲ್ಲಿ ವಿಫಲವಾಗಿದೆ’ ಎಂದು ಆರೋಪಿಸಿದ ಅವರು, ‘ಜಿಲ್ಲಾಡಳಿತ ರೈತರ ಆತ್ಮಹತ್ಯೆಯ ವರದಿಯನ್ನು ಶೀಘ್ರದಲ್ಲಿಯೇ ಪರಿಶೀಲಿಸಿ, ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.
ಮುಖಂಡ ಬಬಲುಗೌಡ, ಮಲ್ಲು ನವಲಗುಡ್ಡ, ತಿರುಪತಿ ಮಾರನಾಳತಾಂಡಾ, ರಾಚಪ್ಪಗೌಡ ಪಾಟೀಲ, ಭೀಮಸಿಂಗ್ ಜಾಧವ, ಬಾಬು ಚವ್ಹಾಣ, ಜೈರಾಮ ನಾಯಕ, ಗಣೇಶ ನಾಯಕ, ಸಂತೋಷ ಜಾಧವ, ಸುನಿಲ ಜಾಧವ, ಹರಿಸಿಂಗ್ ನಾಯಕ, ಸಂಜಯ ಅಂಗಡಿ, ಗುರು, ಬಾಲಚಂದ್ರ ರಾಠೋಡ ಇದ್ದರು.