ನವದೆಹಲಿ: ಮಹಾತ್ಮ ಗಾಂಧಿ ಅವರ ಹತ್ಯೆಯಲ್ಲಿ ಮತ್ತೊಬ್ಬ ವ್ಯಕ್ತಿಯೂ ಪಾಲ್ಗೊಂಡಿದ್ದನೇ?
ಸುಪ್ರೀಂ ಕೋರ್ಟ್ಗೆ ಸಲ್ಲಿಕೆಯಾಗಿರುವ ಅರ್ಜಿಯಲ್ಲಿ ಇಂಥದ್ದೊಂದು ಪ್ರಶ್ನೆ ಕೇಳಲಾಗಿದೆ.
ಪೊಲೀಸ್ ತನಿಖೆ ಪ್ರಕಾರ, ನಾಥುರಾಮ್ ಗೋಡ್ಸೆ ಹಾರಿಸಿದ ಮೂರು ಗುಂಡುಗಳು ಗಾಂಧೀಜಿ ಅವರ ದೇಹದಲ್ಲಿ ಸಿಕ್ಕಿವೆ. ಆದರೆ ಗೋಡ್ಸೆಯ ಹೊರತಾಗಿ ಬೇರೆಯವರು ಹಾರಿಸಿದ ನಾಲ್ಕನೇ ಗುಂಡೂ ಇತ್ತೇ ಎಂಬ ಪ್ರಶ್ನೆ ಅರ್ಜಿಯಲ್ಲಿ ವ್ಯಕ್ತವಾಗಿದೆ.
ಮುಂಬೈನ ಅಭಿನವ್ ಭಾರತ್ನ ಟ್ರಸ್ಟಿ ಮತ್ತು ಸಂಶೋಧಕರೂ ಆಗಿರುವ ಡಾ. ಪಂಕಜ್ ಫಡ್ನಿಸ್ ಅವರು ಸಲ್ಲಿಸಿರುವ ಅರ್ಜಿಯಲ್ಲಿ, ‘ಹಿಂದೆ ನಡೆದ ತನಿಖೆಯು ದೊಡ್ಡದೊಂದು ಪ್ರಕರಣವನ್ನು ಮುಚ್ಚಿಹಾಕುವ ಯತ್ನವಾಗಿತ್ತೇ ಮತ್ತು ಪ್ರಕರಣದಲ್ಲಿ ವಿನಾಯಕ ದಾಮೋದರ ಸಾವರ್ಕರ್ ಅವರನ್ನು ದೂರಲು ಸಮರ್ಪಕ ಕಾರಣಗಳಿದ್ದವೇ’ ಎಂದು ಕೇಳಲಾಗಿದೆ.
ಗಾಂಧಿ ಹತ್ಯೆಯ ಹಿಂದಿರುವ ಪಿತೂರಿ ಬಯಲಿಗೆಳೆಯಲು ಹೊಸ ತನಿಖಾ ಆಯೋಗ ರಚಿಸುವಂತೆಯೂ ಅರ್ಜಿಯಲ್ಲಿ ಕೋರಲಾಗಿದೆ.