ವಿಜಯಪುರ: ಪುರುಷ ಪ್ರಧಾನವಾದ ಸಮಾಜದಲ್ಲಿ ಮಹಿಳೆಯರು ಮುಖ್ಯವಾಹಿನಿಗೆ ಬರಬೇಕಾದರೆ, ಆರ್ಥಿಕವಾಗಿ ಸಬಲರಾಗುವ ಕಡೆಗೆ ಚಿಂತನೆ ನಡೆಸಬೇಕು ಎಂದು ಸನ್ನಿಧಿ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಶ್ರೀನಿವಾಸ್ ಎಂ. ಸನ್ನಿಧಿ ಹೇಳಿದರು.
ಇಲ್ಲಿನ 23 ನೇ ವಾರ್ಡಿನ ರಾಜೀವ್ ನಗರದಲ್ಲಿ ಸೋಮವಾರ ಆಯೋಜಿಸಿದ್ದ ಉಚಿತ ಟೈಲರಿಂಗ್ ತರಬೇತಿ ಕಾರ್ಯಕ್ರಮ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಸಮಾಜದಲ್ಲಿ ಪರಿವರ್ತನೆ ತರಲು ಮಹಿಳಾ ಸಬಲೀಕರಣವಾಗಬೇಕು. ಮಾನವ ಸಂಪನ್ಮೂಲವನ್ನು ಸರಿಯಾದ ದಿಕ್ಕಿನಲ್ಲಿ ಬಳಸುತ್ತಿಲ್ಲ ಎಂದರು.
ತರಬೇತಿ ಮೂಲಕ ಸ್ವಾವಲಂಬಿ ಜೀವನ ನಡೆಸಲು ಅವಕಾಶ ಮಾಡಿಕೊಡುವ ಉದ್ದೇಶವನ್ನು ಸಂಸ್ಥೆ ಹೊಂದಿದೆ ಎಂದು ಹೇಳಿದರು. ಕುಟುಂಬಗಳ ನಿರ್ವಹಣೆ, ಮಕ್ಕಳ ಪೋಷಣೆ, ಸೇರಿದಂತೆ ಸಮಾಜದಲ್ಲಿ ಮಹತ್ತರ ಜವಾಬ್ದಾರಿಗಳನ್ನು ಮಹಿಳೆಯರು ನಿಭಾಯಿಸುತ್ತಿದ್ದಾರೆ.
ಅವರು ಆದಾಯದ ಮೂಲ ಕಂಡು ಹಿಡಿದುಕೊಂಡು ಸ್ವಾವಲಂಬನೆಯ ಜೀವನ ಮಾಡಬೇಕು. ಇದಕ್ಕಾಗಿ ಸನ್ನಿಧಿ ಫೌಂಡೇಷನ್ ತಾಲ್ಲೂಕಿನಾದ್ಯಂತ ಮಹಿಳೆಯರಿಗೆ ಉಚಿತ ಟೈಲರಿಂಗ್ ತರಬೇತಿ ಶಿಬಿರ, ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪ್ರೋತ್ಸಾಹ ಸೇರಿದಂತೆ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು.
ಸ್ಥಳೀಯ ಮುಖಂಡ ಶಿವಕುಮಾರ್ ಮಾತನಾಡಿ, ಇಂತಹ ಸಂಸ್ಥೆಗಳು ನೀಡುವ ಅವಕಾಶಗಳನ್ನು ಮಹಿಳೆಯರು ಬಳಸಿಕೊಳ್ಳಬೇಕು. ಸ್ವಯಂ ಉದ್ಯೋಗ ಮಾಡಿಕೊಂಡು ಜೀವನ ರೂಪಿಸಿಕೊಳ್ಳಬೇಕು ಎಂದರು.
ಯುವ ಮುಖಂಡ ರವಿಕುಮಾರ್ ಮಾತನಾಡಿ, ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬನೆ ಹೊಂದಲು ಸಾಧ್ಯವಾಗಲಿಲ್ಲ, ಮೀಸಲಾತಿಯಲ್ಲಿ ಅರ್ಧದಷ್ಟು ನೀಡಿದರೂ ಇದನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಿಲ್ಲ. ವಿವಿಧ ಕೌಶಲಾಭಿವೃದ್ಧಿ ಚಟುವಟಿಕೆ ಮೂಲಕ ಅಭಿವೃದ್ಧಿ ಹೊಂದಬೇಕು ಎಂದರು.
ಸ್ಥಳೀಯರಾದ ಶಶಿಕುಮಾರ್, ಮುರುಗೇಶ್, ನರಸಿಂಹಪ್ಪ, ಮುನಿರಾಜು, ಹರೀಶ್ ಬಾಬು, ಮುಖಂಡ ಅಶ್ವತ್ಥನಾರಾಯಣ, ಶ್ರೀನಿವಾಸ್, ಅನ್ಸರ್ ಪಾಷ, ಸತೀಶ್, ವೆಂಕಟೇಶ್ ಪ್ರಭು, ರಾಘವ, ಹಾಜರಿದ್ದರು.
* *
ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಜನರು ಗುಳೆ ಹೊರಡುವಂತಹ ಸ್ಥಿತಿ ಇದೆ. ಇದನ್ನು ನಿವಾರಿಸಲು ಕೌಶಲಾಭಿವೃದ್ಧಿ ತರಬೇತಿ ನೀಡಬೇಕು
ಶ್ರೀನಿವಾಸ್ ಎಂ. ಸನ್ನಿಧಿ,
ಸನ್ನಿಧಿ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.