ಲಿಂಗಸುಗೂರು: ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಜಾರಿಗಾಗಿ ಆಗ್ರಹಿಸಿ ಜು.13ರಂದು ಲಿಂಗಸುಗೂರಿನಲ್ಲಿ ಆಯೋಜಿಸಿರುವ ಮಾದಿಗರ ಬೃಹತ್ ಸಮಾವೇಶದ ನಿಮಿತ್ತ ಶನಿವಾರ ಬೈಕ್ ರ್್ಯಾಲಿಗೆ ಚಾಲನೆ ನೀಡಲಾಯಿತು.
ಮಾದಿಗ ಹೋರಾಟ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಂಬಣ್ಣ ಆರೋಲಿ ಮಾತನಾಡಿ, ‘ಜನಸಂಖ್ಯೆ ಆಧಾರಿತ ಮೀಸಲಾತಿ ನೀಡುವಂತೆ 1996ರ ಅವಧಿಯಲ್ಲಿ ಆರಂಭಗೊಂಡ ಹೋರಾಟಕ್ಕೆ 21 ವಸಂತಗಳು ತುಂಬಿವೆ. ಮಲಮೂತ್ರ ತೊಳೆಯುವ ಕ್ಷೇತ್ರದಲ್ಲಿ ಶೇ 100ರಷ್ಟು ಮೀಸಲಾತಿ ನೀಡಿದೆ. ಶಿಕ್ಷಣ, ಉದ್ಯೋಗ ಇತರೆ ಕ್ಷೇತ್ರಗಳಲ್ಲಿ ಶೇ 6ರಷ್ಟು ಮೀಸಲಾತಿ ನೀಡಿರುವುದು ಯಾವ ನ್ಯಾಯ’ ಎಂದು ಪ್ರಶ್ನಿಸಿದರು.
‘ಆಡಳಿತಕ್ಕೆ ಬಂದಿರುವ ಯಾವೊಂದು ಸರ್ಕಾರಗಳು ತಮ್ಮ ನೋವು, ನಲಿವುಗಳಿಗೆ ಸ್ಪಂದಿಸುತ್ತಿಲ್ಲ. ಬಾಂಗ್ಲಾ ನಿವಾಸಿಗಳಿಗೆ ಮೀಸಲಾತಿ ಘೋಷಣೆ ಮಾಡಿದೆ. ಆದರೆ 21ವರ್ಷಗಳ ನಿರಂತರ ಹೋರಾಟ ಮಾಡಿದ ತಮಗೆ ಆಯೋಗ ರಚನೆಗೆ 9ವರ್ಷ, ಅಧ್ಯಯನಕ್ಕೆ 7ವರ್ಷ ತೆಗೆದುಕೊಳ್ಳಲಾಗಿದೆ. ಅನುಷ್ಠಾನಕ್ಕೆ ಇನ್ನೆಷ್ಟು ವರ್ಷ ಬೇಕು ಎಂದು’ ಪ್ರಶ್ನಿಸಿದರು.
‘1976ರಲ್ಲಿ ದೇವರಾಜು ಅರಸು ಸರ್ಕಾರ ಬೋವಿ, ಬಂಜಾರ, ಭಜಂತ್ರಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಿದರು. ಸಿದ್ದಧರಾಮಯ್ಯ ಸರ್ಕಾರ ಬಾಂಗ್ಲಾ ನಿವಾಸಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರ್ಪಡೆ ಮಾಡುವ ಮೂಲಕ ಮತ ಬ್ಯಾಂಕ್ ರಾಜಕಾರಣ ನಡೆಸಿವೆ. ಮುಖ್ಯಮಂತ್ರಿಗಳು ಮಾದಿಗರು ಬೀದಿಗೆ ಇಳಿಯುವ ಮೊದಲು ತಮ್ಮ ನಿಲುವು ಸ್ಪಷ್ಟಪಡಿಸುವಂತೆ ಒತ್ತಾಯಿಸಲಾಗುವುದು’ ಎಂದರು.
‘ಹೈದರಾಬಾದ್ ಕರ್ನಾಟಕದ ಎಲ್ಲ ಜಿಲ್ಲೆಗಳು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆ, ತಾಲ್ಲೂಕುಗಳಲ್ಲಿ ಹಲೋ ಮಾದಿಗ ಚಲೋ ಲಿಂಗಸುಗೂರು ಘೋಷಣೆಗಳೊಂದಿಗೆ ದಲಿತ ಕೇರಿಗಳಲ್ಲಿ ಜಾಗೃತಿ ಜಾಥಾ ನಡೆಸುತ್ತಿದ್ದೇವೆ. 25ಸಾವಿರಕ್ಕೂ ಹೆಚ್ಚು ಜನಸಂಖ್ಯೆಯಲ್ಲಿ ಸೇರುತ್ತಿರುವ ಸಮಾವೇಶಕ್ಕೆ ಮುಖ್ಯಮಂತ್ರಿ ಬರಬೇಕು’ ಎಂದು ಒತ್ತಾಯಿಸಿದರು.
ಮಾದಿಗ ಮೀಸಲಾತಿ ಹೋರಾಟ ಸಮಿತಿ ಮುಖಂಡರಾದ ಹನುಮಂತಪ್ಪ ವೆಂಕಟಾಪುರ, ಮಲ್ಲಯ್ಯ ಬಳ್ಳಾ, ಹನುಮಂತಪ್ಪ ಕುಣಿಕೆಲ್ಲೂರು, ಉಮೇಶ ಹುನಕುಂಟಿ, ಬಸವರಾಜ ಕುಣಿಕೆಲ್ಲೂರು, ಹುಲಗಪ್ಪ ಕೆಸರಟ್ಟಿ, ಹನುಮಂತ, ಯಂಕಣ್ಣ ಚಿತ್ತಾಪುರ, ಮಹಾದೇವಪ್ಪ ಪರಾಂಪುರ, ಹುಲಗಪ್ಪ ನಗನೂರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.