<p><strong>ಬೆಂಗಳೂರು:</strong> ಯಶವಂತಪುರ– ಹೊಸೂರು ರೈಲು ಪದೇ ಪದೇ ವಿಳಂಬವಾಗುತ್ತಿರುವುದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದ್ದರೆ ಈ ಮಾರ್ಗದಲ್ಲಿ ಆದಷ್ಟು ಶೀಘ್ರ ಜೋಡಿ ಹಳಿ ನಿರ್ಮಿಸಬೇಕು. ಈ ಮಾರ್ಗವನ್ನು ವಿದ್ಯುದೀಕರಣಗೊಳಿಸಬೇಕು ಎಂದು ರೈಲ್ವೆ ಹೋರಾಟಗಾರರು ಒತ್ತಾಯಿಸಿದ್ದಾರೆ.</p>.<p>ಯಶವಂತಪುರ ಜಂಕ್ಷನ್ನಿಂದ ಬೆಳಿಗ್ಗೆ 6.30ಕ್ಕೆ ಹೊರಡುವ ರೈಲು ಹೊಸೂರನ್ನು 8 ಗಂಟೆಗೆ ತಲುಪಬೇಕು. ಈ ರೈಲು ಕೊನೆಯ ನಿಲ್ದಾಣ ತಲುಪುವಾಗ ನಿತ್ಯವೂ ಸುಮಾರು ಒಂದು ಗಂಟೆ ತಡವಾಗುತ್ತಿದೆ. ಇದರಿಂದ ಸಿಟ್ಟಿಗೆದ್ದ ಪ್ರಯಾಣಿಕರು ಒಂದೇ ವಾರದಲ್ಲಿ ಎರಡು ಬಾರಿ ರೈಲನ್ನು ತಡೆದು ಪ್ರತಿಭಟನೆ ನಡೆಸಿದ್ದಾರೆ. ಸಂಜೆ ಹೊಸೂರಿನಿಂದ ಯಶವಂತಪುರಕ್ಕೆ ಬರುವ ರೈಲು ಕೂಡ ವಿಳಂಬವಾಗುತ್ತಿದೆ ಎಂಬುದು ಪ್ರಯಾಣಿಕರ ದೂರು.</p>.<p>‘ಎಲೆಕ್ಟ್ರಾನಿಕ್ಸ್ ಸಿಟಿ, ಸರ್ಜಾಪುರ ರಸ್ತೆ, ಮಹದೇವಪುರ, ವೈಟ್ಫೀಲ್ಡ್ ಪ್ರದೇಶದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕೈಗಾರಿಕೆಗಳೂ ಸೇರಿದಂತೆ ಅನೇಕ ಕೈಗಾರಿಕೆಗಳಿವೆ. ಯಶವಂತಪುರ, ಪೀಣ್ಯ ಪ್ರದೇಶದಲ್ಲೂ ಅನೇಕ ಕೈಗಾರಿಕೆಗಳಿವೆ. ಇಲ್ಲಿನ ಉದ್ಯೋಗಿಗಳು ಈ ರೈಲನ್ನು ಬಳಸುತ್ತಿದ್ದಾರೆ. ಈ ರೈಲಿನಲ್ಲಿ ನಿತ್ಯ ಸರಾಸರಿ 9,000 ಮಂದಿ ಪ್ರಯಾಣಿಸುತ್ತಾರೆ. ರೈಲು ವಿಳಂಬವಾದರೆ ಅವರೆಲ್ಲರೂ ಸಮಸ್ಯೆ ಎದುರಿಸಬೇಕಾಗುತ್ತದೆ’ ಎನ್ನುತ್ತಾರೆ ರೈಲ್ವೆ ಹೋರಾಟಗಾರ ಸುಹಾಸ್ ನಾರಾಯಣಮೂರ್ತಿ.</p>.<p>‘ವಿಳಂಬಕ್ಕೆ ಪ್ರಮುಖ ಕಾರಣ ರೈಲುಗಳ ಕ್ರಾಸಿಂಗ್. ಬೆಳಿಗ್ಗೆ ಕಣ್ಣೂರು ಎಕ್ಸ್ಪ್ರೆಸ್ ರೈಲಿಗೆ ದಾರಿ ಬಿಟ್ಟುಕೊಡುವ ಕಾರಣಕ್ಕೆ ಯಶವಂತಪುರ– ಹೊಸೂರು ರೈಲು ವಿಳಂಬವಾಗುತ್ತದೆ. ಈ ರೈಲು ಸಂಜೆ ಹೊಸೂರಿನಿಂದ ಯಶವಂತಪುರಕ್ಕೆ ಸಂಚರಿಸುವಾಗ ನಾಗರಕೋಯಿಲ್ ಎಕ್ಸ್ಪ್ರೆಸ್ಗೆ ದಾರಿ ಬಿಟ್ಟು ಕೊಡಬೇಕಾಗುತ್ತದೆ. ಆ ರೈಲು ಕಾರೈಕಲ್ ಎಕ್ಸ್ಪ್ರೆಸ್ ಹಾದುಹೋಗುವವರೆಗೂ ಕಾಯಬೇಕು. ರೈಲುಗಳ ವೇಳಾಪಟ್ಟಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿದರೆ ಪ್ರಯಾಣಿಕರಿಗೆ ಆಗುವ ಅನನುಕೂಲವನ್ನು ತಪ್ಪಿಸಬಹುದು’ ಎನ್ನುತ್ತಾರೆ ಅವರು.</p>.<p>‘ಸಬ್ಅರ್ಬನ್ ರೈಲು ವ್ಯವಸ್ಥೆ ಇರುವ ಮಹಾನಗರಗಳಲ್ಲಿ ಕ್ರಾಸಿಂಗ್ ವೇಳೆ ಎಕ್ಸ್ಪ್ರೆಸ್ ರೈಲುಗಳಿಗಿಂತ ಸ್ಥಳೀಯ ರೈಲುಗಳಿಗೆ ಆದ್ಯತೆ ನೀಡಲಾಗುತ್ತದೆ. ರೈಲ್ವೆ ಮಂಡಳಿಯ ನಿಯಮಗಳೂ ಇದನ್ನೇ ಹೇಳುತ್ತವೆ. ನಿತ್ಯ ಕಚೇರಿಗೆ ಹೋಗಲು ರೈಲು ಬಳಸುವವರಿಗೆ ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ಈ ನಿಯಮ ರೂಪಿಸಲಾಗಿದೆ. ಆದರೆ, ನಮ್ಮಲ್ಲಿ ಸ್ಥಳೀಯ ರೈಲನ್ನು ನಿಲ್ಲಿಸಿ ಹೊರಗಿನಿಂದ ಬರುವ ಎಕ್ಸ್ಪ್ರೆಸ್ ರೈಲುಗಳು ಹಾದುಹೋಗುವುದಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಇದು ನಿಜಕ್ಕೂ ದುರದೃಷ್ಟಕರ ಎನ್ನುತ್ತಾರೆ’ ಪ್ರಜಾರಾಗ್ ಸಂಘಟನೆಯ ಸಂಜೀವ ದ್ಯಾಮಣ್ಣವರ್.</p>.<p>‘ಸಿಗ್ನಲಿಂಗ್ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸುವ, ಸ್ವಯಂಚಾಲಿತ ಸಿಗ್ನಲಿಂಗ್ ವ್ಯವಸ್ಥೆ ಅಳವಡಿಸುವ ಮೂಲಕವೂ ವಿಳಂಬ ತಪ್ಪಿಸಬಹುದು’ ಎಂದು ಅವರು ಸಲಹೆ ನೀಡುತ್ತಾರೆ.</p>.<p>‘ಸಬ್ಅರ್ಬನ್ ರೈಲು ಜಾಲವನ್ನು ಅಭಿವೃದ್ಧಿಪಡಿಸುವುದಾದರೆ ಈ ಮಾರ್ಗವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು. ಇದನ್ನು ಅಭಿವೃದ್ಧಿಪಡಿಸುವುದರಿಂದ ನಗರದ ಒಳಗಿನ ಸಂಚಾರ ದಟ್ಟಣೆಯ ಮೇಲಿನ ಹೊರೆ ಬಹಳಷ್ಟು ತಗ್ಗಲಿದೆ’ ಎನ್ನುತ್ತಾರೆ ಕರ್ನಾಟಕ ರೈಲ್ವೆ ವೇದಿಕೆ ಸಂಚಾಲಕ ಟಿ.ಪಿ.ಲೋಕೇಶ್.</p>.<p>‘ಯಶವಂತಪುರ– ಸೇಲಂ ಮಾರ್ಗದಲ್ಲೇ ಹೊಸೂರು ಕೂಡಾ ಬರುತ್ತದೆ. ಈ ಮಾರ್ಗದಲ್ಲಿ ಜೋಡಿಹಳಿ ನಿರ್ಮಿಸುವ ಪ್ರಸ್ತಾವ ರೈಲ್ವೆ ಇಲಾಖೆ ಮುಂದಿದೆ. ಆದರೆ, ಅದಕ್ಕಿನ್ನೂ ಮಂಜೂರಾತಿ ಸಿಕ್ಕಿಲ್ಲ. ಜೋಡಿ ಮಾರ್ಗ ನಿರ್ಮಾಣವಾದರೆ ಈ ಮಾರ್ಗದ ಬಹುತೇಕ ಸಮಸ್ಯೆಗಳು ಬಗೆಹರಿಯುತ್ತವೆ’ ಎಂದು ರೈಲ್ವೆ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.</p>.<p>‘ಈ ಮಾರ್ಗ 10 ವರ್ಷಗಳ ಹಿಂದೆ ನಿರ್ಮಾಣವಾಗಿದೆ. ಇತ್ತೀಚೆಗೆ ನಗರದಲ್ಲಿ ರೈಲುಗಳ ದಟ್ಟಣೆ ಹೆಚ್ಚಿದೆ. ಹಾಗಾಗಿ ಕ್ರಾಸಿಂಗ್ ಸಮಸ್ಯೆ ಉಂಟಾಗುವುದು ಸಹಜ. ಆದರೂ ನಮ್ಮ ಇತಿಮಿತಿಯೊಳಗೆ ಸಮಸ್ಯೆ ಬಗೆಹರಿಸಲು ನಾವು ಪ್ರಯತ್ನ ಪಡುತ್ತಿದ್ದೇವೆ’ ಎಂದರು.</p>.<p><strong>‘ರೈಲು ನಿಲ್ಲಿಸುವ ಸ್ಥಳ ಬದಲಾಗಲಿ’</strong><br /> ‘ಬೈಯಪ್ಪನಹಳ್ಳಿ ನಿಲ್ದಾಣದಿಂದ ಬೆಳ್ಳಂದೂರು ಕಡೆಗೆ ಹೋಗುವ ಮಾರ್ಗದ ತಿರುವಿನಲ್ಲಿ ರೈಲನ್ನು ನಿಲ್ಲಿಸಲಾಗುತ್ತಿದೆ. ಇಲ್ಲಿ ರೈಲನ್ನು ಈಗ ನಿಲ್ಲಿಸುತ್ತಿರುವ ಜಾಗಕ್ಕಿಂತ 300 ಮೀಟರ್ನಷ್ಟು ಮುಂದಕ್ಕೆ (ಬೈಯಪ್ಪನಹಳ್ಳಿ ನಿಲ್ದಾಣದ ಕಡೆಗೆ) ನಿಲ್ಲಿಸಲು ವ್ಯವಸ್ಥೆ ಕಲ್ಪಿಸಬೇಕು. ಇದರಿಂದ ಈ ರೈಲಿನ ಬೋಗಿಗಳು ಬೆಳ್ಳಂದೂರು ಕಡೆಯ ಟ್ರ್ಯಾಕ್ನಲ್ಲಿ ಉಳಿಯುವುದನ್ನು ತಡೆಯಬಹುದು. ಆಗ ಬೆಳ್ಳಂದೂರು– ಬಾಣಸವಾಡಿ ಮಾರ್ಗ ಇತರ ರೈಲುಗಳ ಸಂಚಾರಕ್ಕೆ ಮುಕ್ತವಾಗುತ್ತದೆ’ ಎಂದು ಸುಹಾಸ್ ಸಲಹೆ ನೀಡಿದರು.</p>.<p><strong>ಸಬ್ಅರ್ಬನ್ಗೆ ಪ್ರತ್ಯೇಕ ಹಳಿ ಇರಲಿ</strong><br /> ‘ಮುಂಬೈನಲ್ಲಿ ಸಬ್ಅರ್ಬನ್ ರೈಲುಗಳಿಗೆ ಆರು ಪ್ರತ್ಯೇಕ ಮಾರ್ಗಗಳಿವೆ. ಚೆನ್ನೈನಲ್ಲಿ ನಾಲ್ಕು ಪ್ರತ್ಯೇಕ ಮಾರ್ಗಗಳಿವೆ. ಹಾಗಾಗಿ ಅಲ್ಲಿ ದೂರ ಪ್ರಯಾಣದ ರೈಲುಗಳಿಂದ ಸಬ್ಅರ್ಬನ್ ರೈಲುಗಳಿಗೆ ಅಡ್ಡಿ ಉಂಟಾಗುವುದಿಲ್ಲ. ನಮ್ಮಲ್ಲೂ ಸಬ್ಅರ್ಬನ್ ರೈಲುಗಳಿಗೆ ಪ್ರತ್ಯೇಕ ಹಳಿ ನಿರ್ಮಿಸಬೇಕು’ ಎಂದು ಒತ್ತಾಯಿಸುತ್ತಾರೆ ರೈಲ್ವೆ ಹೋರಾಟಗಾರ ಕೃಷ್ಣಪ್ರಸಾದ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಯಶವಂತಪುರ– ಹೊಸೂರು ರೈಲು ಪದೇ ಪದೇ ವಿಳಂಬವಾಗುತ್ತಿರುವುದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದ್ದರೆ ಈ ಮಾರ್ಗದಲ್ಲಿ ಆದಷ್ಟು ಶೀಘ್ರ ಜೋಡಿ ಹಳಿ ನಿರ್ಮಿಸಬೇಕು. ಈ ಮಾರ್ಗವನ್ನು ವಿದ್ಯುದೀಕರಣಗೊಳಿಸಬೇಕು ಎಂದು ರೈಲ್ವೆ ಹೋರಾಟಗಾರರು ಒತ್ತಾಯಿಸಿದ್ದಾರೆ.</p>.<p>ಯಶವಂತಪುರ ಜಂಕ್ಷನ್ನಿಂದ ಬೆಳಿಗ್ಗೆ 6.30ಕ್ಕೆ ಹೊರಡುವ ರೈಲು ಹೊಸೂರನ್ನು 8 ಗಂಟೆಗೆ ತಲುಪಬೇಕು. ಈ ರೈಲು ಕೊನೆಯ ನಿಲ್ದಾಣ ತಲುಪುವಾಗ ನಿತ್ಯವೂ ಸುಮಾರು ಒಂದು ಗಂಟೆ ತಡವಾಗುತ್ತಿದೆ. ಇದರಿಂದ ಸಿಟ್ಟಿಗೆದ್ದ ಪ್ರಯಾಣಿಕರು ಒಂದೇ ವಾರದಲ್ಲಿ ಎರಡು ಬಾರಿ ರೈಲನ್ನು ತಡೆದು ಪ್ರತಿಭಟನೆ ನಡೆಸಿದ್ದಾರೆ. ಸಂಜೆ ಹೊಸೂರಿನಿಂದ ಯಶವಂತಪುರಕ್ಕೆ ಬರುವ ರೈಲು ಕೂಡ ವಿಳಂಬವಾಗುತ್ತಿದೆ ಎಂಬುದು ಪ್ರಯಾಣಿಕರ ದೂರು.</p>.<p>‘ಎಲೆಕ್ಟ್ರಾನಿಕ್ಸ್ ಸಿಟಿ, ಸರ್ಜಾಪುರ ರಸ್ತೆ, ಮಹದೇವಪುರ, ವೈಟ್ಫೀಲ್ಡ್ ಪ್ರದೇಶದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕೈಗಾರಿಕೆಗಳೂ ಸೇರಿದಂತೆ ಅನೇಕ ಕೈಗಾರಿಕೆಗಳಿವೆ. ಯಶವಂತಪುರ, ಪೀಣ್ಯ ಪ್ರದೇಶದಲ್ಲೂ ಅನೇಕ ಕೈಗಾರಿಕೆಗಳಿವೆ. ಇಲ್ಲಿನ ಉದ್ಯೋಗಿಗಳು ಈ ರೈಲನ್ನು ಬಳಸುತ್ತಿದ್ದಾರೆ. ಈ ರೈಲಿನಲ್ಲಿ ನಿತ್ಯ ಸರಾಸರಿ 9,000 ಮಂದಿ ಪ್ರಯಾಣಿಸುತ್ತಾರೆ. ರೈಲು ವಿಳಂಬವಾದರೆ ಅವರೆಲ್ಲರೂ ಸಮಸ್ಯೆ ಎದುರಿಸಬೇಕಾಗುತ್ತದೆ’ ಎನ್ನುತ್ತಾರೆ ರೈಲ್ವೆ ಹೋರಾಟಗಾರ ಸುಹಾಸ್ ನಾರಾಯಣಮೂರ್ತಿ.</p>.<p>‘ವಿಳಂಬಕ್ಕೆ ಪ್ರಮುಖ ಕಾರಣ ರೈಲುಗಳ ಕ್ರಾಸಿಂಗ್. ಬೆಳಿಗ್ಗೆ ಕಣ್ಣೂರು ಎಕ್ಸ್ಪ್ರೆಸ್ ರೈಲಿಗೆ ದಾರಿ ಬಿಟ್ಟುಕೊಡುವ ಕಾರಣಕ್ಕೆ ಯಶವಂತಪುರ– ಹೊಸೂರು ರೈಲು ವಿಳಂಬವಾಗುತ್ತದೆ. ಈ ರೈಲು ಸಂಜೆ ಹೊಸೂರಿನಿಂದ ಯಶವಂತಪುರಕ್ಕೆ ಸಂಚರಿಸುವಾಗ ನಾಗರಕೋಯಿಲ್ ಎಕ್ಸ್ಪ್ರೆಸ್ಗೆ ದಾರಿ ಬಿಟ್ಟು ಕೊಡಬೇಕಾಗುತ್ತದೆ. ಆ ರೈಲು ಕಾರೈಕಲ್ ಎಕ್ಸ್ಪ್ರೆಸ್ ಹಾದುಹೋಗುವವರೆಗೂ ಕಾಯಬೇಕು. ರೈಲುಗಳ ವೇಳಾಪಟ್ಟಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿದರೆ ಪ್ರಯಾಣಿಕರಿಗೆ ಆಗುವ ಅನನುಕೂಲವನ್ನು ತಪ್ಪಿಸಬಹುದು’ ಎನ್ನುತ್ತಾರೆ ಅವರು.</p>.<p>‘ಸಬ್ಅರ್ಬನ್ ರೈಲು ವ್ಯವಸ್ಥೆ ಇರುವ ಮಹಾನಗರಗಳಲ್ಲಿ ಕ್ರಾಸಿಂಗ್ ವೇಳೆ ಎಕ್ಸ್ಪ್ರೆಸ್ ರೈಲುಗಳಿಗಿಂತ ಸ್ಥಳೀಯ ರೈಲುಗಳಿಗೆ ಆದ್ಯತೆ ನೀಡಲಾಗುತ್ತದೆ. ರೈಲ್ವೆ ಮಂಡಳಿಯ ನಿಯಮಗಳೂ ಇದನ್ನೇ ಹೇಳುತ್ತವೆ. ನಿತ್ಯ ಕಚೇರಿಗೆ ಹೋಗಲು ರೈಲು ಬಳಸುವವರಿಗೆ ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ಈ ನಿಯಮ ರೂಪಿಸಲಾಗಿದೆ. ಆದರೆ, ನಮ್ಮಲ್ಲಿ ಸ್ಥಳೀಯ ರೈಲನ್ನು ನಿಲ್ಲಿಸಿ ಹೊರಗಿನಿಂದ ಬರುವ ಎಕ್ಸ್ಪ್ರೆಸ್ ರೈಲುಗಳು ಹಾದುಹೋಗುವುದಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಇದು ನಿಜಕ್ಕೂ ದುರದೃಷ್ಟಕರ ಎನ್ನುತ್ತಾರೆ’ ಪ್ರಜಾರಾಗ್ ಸಂಘಟನೆಯ ಸಂಜೀವ ದ್ಯಾಮಣ್ಣವರ್.</p>.<p>‘ಸಿಗ್ನಲಿಂಗ್ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸುವ, ಸ್ವಯಂಚಾಲಿತ ಸಿಗ್ನಲಿಂಗ್ ವ್ಯವಸ್ಥೆ ಅಳವಡಿಸುವ ಮೂಲಕವೂ ವಿಳಂಬ ತಪ್ಪಿಸಬಹುದು’ ಎಂದು ಅವರು ಸಲಹೆ ನೀಡುತ್ತಾರೆ.</p>.<p>‘ಸಬ್ಅರ್ಬನ್ ರೈಲು ಜಾಲವನ್ನು ಅಭಿವೃದ್ಧಿಪಡಿಸುವುದಾದರೆ ಈ ಮಾರ್ಗವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು. ಇದನ್ನು ಅಭಿವೃದ್ಧಿಪಡಿಸುವುದರಿಂದ ನಗರದ ಒಳಗಿನ ಸಂಚಾರ ದಟ್ಟಣೆಯ ಮೇಲಿನ ಹೊರೆ ಬಹಳಷ್ಟು ತಗ್ಗಲಿದೆ’ ಎನ್ನುತ್ತಾರೆ ಕರ್ನಾಟಕ ರೈಲ್ವೆ ವೇದಿಕೆ ಸಂಚಾಲಕ ಟಿ.ಪಿ.ಲೋಕೇಶ್.</p>.<p>‘ಯಶವಂತಪುರ– ಸೇಲಂ ಮಾರ್ಗದಲ್ಲೇ ಹೊಸೂರು ಕೂಡಾ ಬರುತ್ತದೆ. ಈ ಮಾರ್ಗದಲ್ಲಿ ಜೋಡಿಹಳಿ ನಿರ್ಮಿಸುವ ಪ್ರಸ್ತಾವ ರೈಲ್ವೆ ಇಲಾಖೆ ಮುಂದಿದೆ. ಆದರೆ, ಅದಕ್ಕಿನ್ನೂ ಮಂಜೂರಾತಿ ಸಿಕ್ಕಿಲ್ಲ. ಜೋಡಿ ಮಾರ್ಗ ನಿರ್ಮಾಣವಾದರೆ ಈ ಮಾರ್ಗದ ಬಹುತೇಕ ಸಮಸ್ಯೆಗಳು ಬಗೆಹರಿಯುತ್ತವೆ’ ಎಂದು ರೈಲ್ವೆ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.</p>.<p>‘ಈ ಮಾರ್ಗ 10 ವರ್ಷಗಳ ಹಿಂದೆ ನಿರ್ಮಾಣವಾಗಿದೆ. ಇತ್ತೀಚೆಗೆ ನಗರದಲ್ಲಿ ರೈಲುಗಳ ದಟ್ಟಣೆ ಹೆಚ್ಚಿದೆ. ಹಾಗಾಗಿ ಕ್ರಾಸಿಂಗ್ ಸಮಸ್ಯೆ ಉಂಟಾಗುವುದು ಸಹಜ. ಆದರೂ ನಮ್ಮ ಇತಿಮಿತಿಯೊಳಗೆ ಸಮಸ್ಯೆ ಬಗೆಹರಿಸಲು ನಾವು ಪ್ರಯತ್ನ ಪಡುತ್ತಿದ್ದೇವೆ’ ಎಂದರು.</p>.<p><strong>‘ರೈಲು ನಿಲ್ಲಿಸುವ ಸ್ಥಳ ಬದಲಾಗಲಿ’</strong><br /> ‘ಬೈಯಪ್ಪನಹಳ್ಳಿ ನಿಲ್ದಾಣದಿಂದ ಬೆಳ್ಳಂದೂರು ಕಡೆಗೆ ಹೋಗುವ ಮಾರ್ಗದ ತಿರುವಿನಲ್ಲಿ ರೈಲನ್ನು ನಿಲ್ಲಿಸಲಾಗುತ್ತಿದೆ. ಇಲ್ಲಿ ರೈಲನ್ನು ಈಗ ನಿಲ್ಲಿಸುತ್ತಿರುವ ಜಾಗಕ್ಕಿಂತ 300 ಮೀಟರ್ನಷ್ಟು ಮುಂದಕ್ಕೆ (ಬೈಯಪ್ಪನಹಳ್ಳಿ ನಿಲ್ದಾಣದ ಕಡೆಗೆ) ನಿಲ್ಲಿಸಲು ವ್ಯವಸ್ಥೆ ಕಲ್ಪಿಸಬೇಕು. ಇದರಿಂದ ಈ ರೈಲಿನ ಬೋಗಿಗಳು ಬೆಳ್ಳಂದೂರು ಕಡೆಯ ಟ್ರ್ಯಾಕ್ನಲ್ಲಿ ಉಳಿಯುವುದನ್ನು ತಡೆಯಬಹುದು. ಆಗ ಬೆಳ್ಳಂದೂರು– ಬಾಣಸವಾಡಿ ಮಾರ್ಗ ಇತರ ರೈಲುಗಳ ಸಂಚಾರಕ್ಕೆ ಮುಕ್ತವಾಗುತ್ತದೆ’ ಎಂದು ಸುಹಾಸ್ ಸಲಹೆ ನೀಡಿದರು.</p>.<p><strong>ಸಬ್ಅರ್ಬನ್ಗೆ ಪ್ರತ್ಯೇಕ ಹಳಿ ಇರಲಿ</strong><br /> ‘ಮುಂಬೈನಲ್ಲಿ ಸಬ್ಅರ್ಬನ್ ರೈಲುಗಳಿಗೆ ಆರು ಪ್ರತ್ಯೇಕ ಮಾರ್ಗಗಳಿವೆ. ಚೆನ್ನೈನಲ್ಲಿ ನಾಲ್ಕು ಪ್ರತ್ಯೇಕ ಮಾರ್ಗಗಳಿವೆ. ಹಾಗಾಗಿ ಅಲ್ಲಿ ದೂರ ಪ್ರಯಾಣದ ರೈಲುಗಳಿಂದ ಸಬ್ಅರ್ಬನ್ ರೈಲುಗಳಿಗೆ ಅಡ್ಡಿ ಉಂಟಾಗುವುದಿಲ್ಲ. ನಮ್ಮಲ್ಲೂ ಸಬ್ಅರ್ಬನ್ ರೈಲುಗಳಿಗೆ ಪ್ರತ್ಯೇಕ ಹಳಿ ನಿರ್ಮಿಸಬೇಕು’ ಎಂದು ಒತ್ತಾಯಿಸುತ್ತಾರೆ ರೈಲ್ವೆ ಹೋರಾಟಗಾರ ಕೃಷ್ಣಪ್ರಸಾದ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>