ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ನಾಟಕ ಶಾಲೆ ಎತ್ತಂಗಡಿ; ಪ್ರತಿಭಟನೆ

ವಸಂತನಗರದ ಗುರುನಾನಕ್‌ ಭವನದಲ್ಲಿದ್ದ ಶಾಲೆಯ ವಸ್ತುಗಳು ಬೀದಿಗೆ
Last Updated 16 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಸಂತನಗರದ ಗುರುನಾನಕ್ ಭವನವನ್ನು ಕಾರ್ಯಸ್ಥಾನವನ್ನಾಗಿಸಿಕೊಂಡಿದ್ದ ರಾಷ್ಟ್ರೀಯ ನಾಟಕ ಶಾಲೆಯನ್ನು ಬುಧವಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಗಳು ಎತ್ತಂಗಡಿ ಮಾಡಿದ್ದು, ಶಾಲೆಯ ವಸ್ತುಗಳನ್ನೆಲ್ಲ ಭವನದಿಂದ ಹೊರ ಹಾಕಿದ್ದಾರೆ.

ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಭವನಕ್ಕೆ 50 ಸಿಬ್ಬಂದಿ ಸಮೇತ ಬಂದಿದ್ದ ಅಧಿಕಾರಿಗಳು, ಮುಖ್ಯ ಬಾಗಿಲಿನ ಬೀಗ ಒಡೆದು ಒಳಪ್ರವೇಶಿಸಿದರು. ಶಾಲೆ ಹಾಗೂ ನಾಟಕಕ್ಕೆ ಸಂಬಂಧಪಟ್ಟ ವಸ್ತುಗಳನ್ನು ಇರಿಸಿದ್ದ ಕೊಠಡಿಯ ಬೀಗಗಳನ್ನೂ ಒಡೆದು, ವಸ್ತುಗಳನ್ನೆಲ್ಲ ಹೊರಗೆ ಹಾಕಿದರು. ತದನಂತರ ಕೊಠಡಿ ಹಾಗೂ ಭವನಕ್ಕೆ ಪ್ರತ್ಯೇಕ ಬೀಗ ಹಾಕಿ, ‘ಇದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಸ್ತಿ. ಅತಿಕ್ರಮ ಪ್ರವೇಶ ನಿರ್ಬಂಧಿಸಲಾಗಿದೆ’ ಎಂಬ ಬರಹವುಳ್ಳ ಭಿತ್ತಿಪತ್ರವನ್ನು ಗೋಡೆಗೆ ಅಂಟಿಸಿದರು.

ಈ ಮಾಹಿತಿ ತಿಳಿದು ಮಧ್ಯಾಹ್ನ ಸ್ಥಳಕ್ಕೆ ಬಂದ ಶಾಲೆಯ ಪ್ರಾದೇಶಿಕ ನಿರ್ದೇಶಕ ಸಿ.ಬಸವಲಿಂಗಯ್ಯ, ಅಧಿಕಾರಿಗಳ ಜತೆ ಮಾತುಕತೆ ನಡೆಸಿದರು. ಆಗ ಅಧಿಕಾರಿಗಳು, ‘ಉನ್ನತ ಅಧಿಕಾರಿಗಳ ಆದೇಶದಂತೆ ಭವನ ಎತ್ತಂಗಡಿ ಮಾಡಿದ್ದೇವೆ. ಬೀಗ ತೆರೆಯುವ ಪ್ರಶ್ನೆಯೇ ಇಲ್ಲ. ನೀವು ಇಲ್ಲಿಂದ ಹೊರಟು ಹೋಗಿ’ ಎಂದು ಹೇಳಿದರು.
ಅದರಿಂದಾಗಿ ಭವನದಿಂದ ಹೊರಗೆ ಹಾಕಲಾಗಿದ್ದ ವಸ್ತುಗಳ ರಾಶಿ ಎದುರೇ ಕುಳಿತು ಬಸವಲಿಂಗಯ್ಯ ಹಾಗೂ ಶಾಲೆಯ ವಿದ್ಯಾರ್ಥಿಗಳು, ಪ್ರತಿಭಟನೆ ಆರಂಭಿಸಿದರು. ರಂಗ ಗೀತೆಗಳನ್ನು ಹಾಡಿ ಆಕ್ರೋಶ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳು ಬೀದಿಪಾಲು: ಈ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಬಸವಲಿಂಗಯ್ಯ, ‘1994ರಿಂದಲೂ ಇದೇ ಭವನದಲ್ಲಿ ಶಾಲೆ ನಡೆಯುತ್ತಿದೆ. ಭವನದ ನೆಲಮಹಡಿಯ ಕೊಠಡಿಗಳಲ್ಲಿ ತರಗತಿಗಳನ್ನು ನಡೆಸುತ್ತೇವೆ. ಭವನದ ವೇದಿಕೆಯಲ್ಲಿ ನಾಟಕದ ತಾಲೀಮು ಹೇಳಿಕೊಡುತ್ತೇವೆ. ಆದರೆ, ಈಗ ಏಕಾಏಕಿ ಎತ್ತಂಗಡಿ ಮಾಡಿರುವುದರಿಂದ ವಿದ್ಯಾರ್ಥಿಗಳು ಬೀದಿಗೆ ಬರುವಂತಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಹಲವರ ಹೋರಾಟದಿಂದಾಗಿ ಶಾಲೆ ಆರಂಭವಾಗಿದೆ. ಕನ್ನಡ, ತಮಿಳು, ಮಲಯಾಳ, ತೆಲುಗು ಭಾಷೆಯ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಾರೆ. ವರ್ಷದ ಕೋರ್ಸ್‌ನಲ್ಲಿ ಪ್ರತಿ ವರ್ಷವು 20 ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಾರೆ. ಇಂಥ ಶಾಲೆಗೆ ರಾಜ್ಯ ಸರ್ಕಾರವೇ ಕಲಾಗ್ರಾಮದಲ್ಲಿ ಜಾಗ ಮಂಜೂರು ಮಾಡಿದ್ದು, ಅಲ್ಲಿ ಕಟ್ಟಡ ನಿರ್ಮಿಸುವ ಕೆಲಸ ನಡೆಯುತ್ತಿದೆ. ಅದು ಪೂರ್ಣಗೊಂಡು ಉದ್ಘಾಟನೆಯಾಗುವ ಮುನ್ನವೇ ಭವನದಲ್ಲಿದ್ದ ಶಾಲೆಯನ್ನು ಎತ್ತಂಗಡಿ ಮಾಡಿರುವುದು ಖಂಡನೀಯ’ ಎಂದರು.

‘ಲಕ್ಷಾಂತರ ರೂಪಾಯಿ ಬೆಲೆ ಬಾಳುವ ವಸ್ತುಗಳನ್ನು ಆವರಣದಲ್ಲಿ ಇಟ್ಟಿದ್ದಾರೆ. ಅವು ಹಾಳಾದರೆ ಸಾಕಷ್ಟು ನಷ್ಟವಾಗಲಿದೆ. ಇದನ್ನು ಭರಿಸುವವರು ಯಾರು? ನಮಗೆ ನ್ಯಾಯ ಸಿಗುವರೆಗೂ ಹೋರಾಟ ನಡೆಸುತ್ತೇವೆ’ ಎಂದು ಹೇಳಿದರು.

ಭವನ ಅಭಿವೃದ್ಧಿಗೆ ಅನುಮತಿ ಕೋರಿ ಮನವಿ:
‘ಶಾಲೆಯ ಆಡಳಿತ ಮಂಡಳಿಯು ದೆಹಲಿಯಲ್ಲಿದೆ. ಶಾಲೆ ಸ್ಥಾಪನೆ ವೇಳೆ ರಾಜ್ಯ ಸರ್ಕಾರವೇ ಮುತುವರ್ಜಿ ವಹಿಸಿ ಈ ಭವನವನ್ನು ಗುತ್ತಿಗೆಗೆ ನೀಡಿದೆ. ಸದ್ಯ ತಿಂಗಳಿಗೆ 55,000 ಬಾಡಿಗೆ ಪಾವತಿ ಮಾಡುತ್ತಿದ್ದೇವೆ’ ಎಂದು ಬಸವಲಿಂಗಯ್ಯ ಹೇಳಿದರು.

‘ಭವನ ಖಾಲಿ ಮಾಡುವಂತೆ ಪ್ರತಿ ವರ್ಷವೂ ಅಧಿಕಾರಿಗಳು ನೋಟಿಸ್‌ ಕೊಡುತ್ತಾರೆ. ಅದಕ್ಕೆ ನಾವೂ ಉತ್ತರ ಕೊಟ್ಟು, ಲೀಸ್‌ ಕರಾರು ಪತ್ರವನ್ನು ನವೀಕರಣ ಮಾಡಿಸುತ್ತಿದ್ದೇವೆ. ಈ ವರ್ಷ ಅವರು ಕೊಟ್ಟಿರುವ ನೋಟಿಸ್‌ ನನ್ನ ಕೈ ಸೇರುವ ಮುನ್ನವೇ ಈ ರೀತಿ ಮಾಡಿದ್ದಾರೆ’ ಎಂದರು.

‘ವರ್ಷದ ಬದಲು 30 ವರ್ಷದವರೆಗೆ ಭವನವನ್ನು ಲೀಸ್‌ಗೆ ನೀಡಿದರೆ, ಸುಸಜ್ಜಿತ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಸಚಿವ ರೋಷನ್‌ ಬೇಗ್‌ ಅವರಿಗೆ ಇತ್ತೀಚೆಗೆ ಮನವಿ ಸಲ್ಲಿಸಿದ್ದೆವು. ಅದಕ್ಕೆ ಒಪ್ಪಿದ್ದ ಅವರು, ಮನವಿಯನ್ನು ಮುಖ್ಯಮಂತ್ರಿ ಅವರಿಗೆ ಕಳುಹಿಸಿದ್ದಾರೆ. ಅದರ ಪರಿಶೀಲನೆ ನಡೆಯುತ್ತಿರುವಾಗಲೇ ಅಧಿಕಾರಿಗಳು ಶಾಲೆಯ ವಸ್ತುಗಳನ್ನೆಲ್ಲ ಹೊರಗೆ ಎಸೆದು ದುಂಡಾವರ್ತನೆ ತೋರಿದ್ದಾರೆ’ ಎಂದು ಕಿಡಿಕಾರಿದರು.

₹18 ಲಕ್ಷ ಬಾಡಿಗೆ ಬಾಕಿ:
ಎತ್ತಂಗಡಿ ಬಗ್ಗೆ ಮಾತನಾಡಿದ ಇಲಾಖೆಯ ಉಪ ನಿರ್ದೇಶಕ, ‘ಶಾಲೆ ಆರಂಭವಾದಾಗಿನಿಂದ ಇಲ್ಲಿವರೆಗೂ ಆಡಳಿತ ಮಂಡಳಿಯು ₹18 ಲಕ್ಷ ಬಾಡಿಗೆ ಬಾಕಿ ಉಳಿಸಿಕೊಂಡಿದೆ. ಈ ಬಗ್ಗೆ ಮೂರು ತಿಂಗಳ ಹಿಂದೆಯೇ ನೋಟಿಸ್‌ ಕೊಟ್ಟಿದ್ದೇವೆ. ಅದಕ್ಕೆ ಉತ್ತರ ಬಂದಿಲ್ಲ. ಕಾನೂನು ಅನ್ವಯ ಭವನ ತೆರವುಗೊಳಿಸಿದ್ದೇವೆ’ ಎಂದರು.

‘ಒಂದು ಎಕರೆ ಪ್ರದೇಶದಲ್ಲಿರುವ ಭವನವು 700 ಆಸನಗಳ ಸಾಮರ್ಥ್ಯವನ್ನು ಒಳಗೊಂಡಿದೆ. ಇದರ ನಿರ್ವಹಣೆ ಜವಾಬ್ದಾರಿ ಬಾಡಿಗೆದಾರರದ್ದಾಗಿತ್ತು. ಆದರೆ, ಅವರ ನಿರ್ಲಕ್ಷ್ಯದಿಂದ ಭವನ ಹಾಳಾಗಿದೆ. ಆಸನಗಳೆಲ್ಲ ಕಿತ್ತುಹೋಗಿವೆ’ ಎಂದು ಹೇಳಿದರು.

‘ನಗರದಲ್ಲಿ ಭವನಗಳ ಕೊರತೆಯಿಂದ ಇಲಾಖೆಯ ಕಾರ್ಯಕ್ರಮಗಳನ್ನು ಮೈಸೂರಿನಲ್ಲಿ ಆಯೋಜಿಸುತ್ತಿದ್ದೇವೆ. ಇಲಾಖೆಯ ಕೆಲಸ ಹಾಗೂ ಕಾರ್ಯಕ್ರಮ ನಡೆಸಿಕೊಡಲು ನಗರಕ್ಕೆ ಬರುವವರಿಗೆ ಉಳಿದುಕೊಳ್ಳಲು ವ್ಯವಸ್ಥೆ ಇಲ್ಲ. ಹೀಗಾಗಿ ಈ ಭವನವನ್ನು ಅದಕ್ಕೆ ಬಳಸಿಕೊಳ್ಳಲು ತೀರ್ಮಾನಿಸಿದ್ದೇವೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT