ಸುರಪುರ: ನಗರಸಭೆ ವ್ಯಾಪ್ತಿಯ ಗುಡಾಳಕೇರಿ ಬಡಾವಣೆಯಲ್ಲಿ ಕಲ್ಲುಬಂಡೆ ಬೀಳುವ ಹಂತದಲ್ಲಿದ್ದು, ಅಪಾಯ ಸಂಭವಿಸುವ ಸಾಧ್ಯತೆ ಇದೆ. ನೆಲಮಟ್ಟದಿಂದ 50 ಅಡಿ ಎತ್ತರದಲ್ಲಿರುವ ಬಂಡೆ ಮೇಲೆ ಕಲ್ಲುಗಳು ಇವೆ.
ಕಲ್ಲುಬಂಡೆ ಸುತ್ತ 15 ಮನೆಗಳು ನಿರ್ಮಾಣವಾಗಿವೆ. ಇಲ್ಲಿ ಕಲ್ಲುಗಣಿಗಾರಿಕೆ ನಡೆಯುತ್ತಿದೆ. ಮಳೆಗೆ ಕಲ್ಲುಬಂಡೆಯ ತಳದ ಭೂಮಿ ಜಾರುತ್ತಿರುವುದರಿಂದ ಅಪಾಯದ ಭೀತಿ ಎದುರಾಗಿದೆ. ಈ ಬಂಡೆಯ ಸುತ್ತಲೂ ಮನೆ ಕಟ್ಟಿಕೊಂಡಿರುವ ನಿವಾಸಿಗಳು ಭಯದಲ್ಲಿ ಜೀವಿಸುವಂತಾಗಿದೆ.
ನಗರಸಭೆ ಅಧಿಕಾರಿಗಳು ಶೀಘ್ರ ಕಲ್ಲುಬಂಡೆಯನ್ನು ತೆರವುಗೊಳಿಸಬೇಕು ಎಂದು ಸುರೇಶನಾಯಕ ಗುಡ್ಡಕಾಯಿ, ಬಸವರಾಜ ದೊರೆ, ರಾಮಪ್ಪ ಸಿದ್ದಾಪುರ, ಪರಮಣ್ಣ ಗುಂತಗುಳೆ, ಯಂಕಮ್ಮ ಗುಡ್ಡಕಾಯಿ, ರೇಣುಕಾ ಗುಂತಗುಳೆ ಒತ್ತಾಯಿಸಿದ್ದಾರೆ.