ಮೈಸೂರು: ಹಿಂದೂ ಧರ್ಮಕ್ಕೆ ಲಿಂಗಾಯತ ಧರ್ಮ ಗುರುವಾಗಬಹುದು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಅರವಿಂದ ಮಾಲಗತ್ತಿ ತಿಳಿಸಿದರು. ಲಿಂಗಾಯತ ಧರ್ಮ ಸಾರ್ವಕಾಲೀಕ ಮೌಲ್ಯ ಹಾಗೂ ವಾಸ್ತವ ಸಂದರ್ಭವನ್ನು ಹೇಳುತ್ತದೆ. ಸನಾತನ ಮೌಲ್ಯಗಳನ್ನು ಪ್ರತಿಪಾದಿಸುವ ಯಾವುದೇ ಧರ್ಮಕ್ಕಿಂತ ಲಿಂಗಾಯತ ಧರ್ಮ ಮೇಲು ಎಂದು ಅವರು ಇಲ್ಲಿ ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದರು.
ವೀರಶೈವ ಹಾಗೂ ಲಿಂಗಾಯತ ಬೇರೆ ಬೇರೆ ಎಂದು ಸಂಶೋಧಕ ಎಂ.ಎಂ.ಕಲಬುರ್ಗಿ ಹೇಳಿದ್ದೇ ಮೊದಲಲ್ಲ. ಇವರಿಗಿಂತಲೂ ಹಿಂದೆ ಅನೇಕರು ಈ ಎರಡೂ ಧರ್ಮದ ಮೌಲ್ಯಗಳು ಬೇರೆ ಬೇರೆ ಎಂದು ಪ್ರತಿಪಾದಿಸಿದ್ದರು. ತಾತ್ವಿಕ ಹಾಗೂ ಮೌಲ್ಯಗಳ ಕಾರಣದಿಂದ ಇವೆರಡೂ ಬೇರೆ ಬೇರೆ ಎಂದು ಕಲಬುರ್ಗಿ ಪ್ರತಿಪಾದಿಸಿದ್ದರು ಎಂದು ಹೇಳಿದರು.
ವೈದಿಕ ಧರ್ಮದ ಮೌಲ್ಯ, ಆಚರಣೆಗಳಷ್ಟೇ ಹಿಂದೂ ಧರ್ಮದ ಮೌಲ್ಯ ಹಾಗೂ ಆಚರಣೆಗಳು ಎಂದು ಬಿಂಬಿಸುವುದು ತಪ್ಪು. ಹಲವು ಮತಗಳ ತತ್ವಗಳನ್ನು ಮುಖವಾಣಿಯಲ್ಲಿ ಅಳವಡಿಸಿಕೊಂಡಾಗ ಮಾತ್ರ ಹಿಂದೂಧರ್ಮಕ್ಕೆ ಉನ್ನತ ಸ್ಥಾನ ದೊರೆಯುತ್ತದೆ. ಆಗ ಹಿಂದೂ ಧರ್ಮದ ಜೀವವನ್ನೂ ಉಳಿಸಬಹುದು ಎಂದು ಅವರು ವಿವರಿಸಿದರು.
ಅಂತರ್ಜಾತಿ ವಿವಾಹ ಕುರಿತು ರಾಜಕೀಯ ನಾಯಕರು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದಾರೆ. ಬಸವಣ್ಣ ಆ ಕಾಲದಲ್ಲೇ ಅಂತರ್ಜಾತಿ ವಿವಾಹ ಮಾಡಿ ತೋರಿಸಿದ್ದ. ಇತರರು ಅಂತರ್ಜಾತಿ ವಿವಾಹವಾಗಬೇಕು ಎಂದು ಹೇಳುವ ರಾಜಕಾರಣಿಗಳು ಮೊದಲು ತಮ್ಮ ಮನೆಯಲ್ಲಿ ಅಂತರ್ಜಾತಿ ವಿವಾಹ ಮಾಡಿ ತೋರಿಸಲಿ ಎಂದು ಸವಾಲು ಹಾಕಿದರು.