ಮೈಸೂರು: ಸಾಹಿತಿ ಕೆ.ವೀರಭದ್ರಪ್ಪ (81) ಜೆ.ಪಿ.ನಗರದ ನಿವಾಸದಲ್ಲಿ ಬುಧವಾರ ನಸುಕಿನಲ್ಲಿ ನಿಧನರಾದರು.
ಪತ್ನಿ, ನಾಲ್ವರು ಪುತ್ರರು ಹಾಗೂ ಪುತ್ರಿ ಇದ್ದಾರೆ. ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಆಧವಾನಿಯವರಾದ ವೀರಭದ್ರಪ್ಪ ಅವರು ವ್ಯಾಸಂಗ ಮುಗಿದ ಬಳಿಕ ಮೈಸೂರಿನ ಜೆಎಸ್ಎಸ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದರು.
ವೀರಭದ್ರ ಎಂಬ ಕಾವ್ಯನಾಮದಲ್ಲಿ 60ಕ್ಕೂ ಹೆಚ್ಚು ಕಥೆ ರಚಿಸಿದ್ದಾರೆ. ‘ಕನ್ನಡಿ ನೋಡಿದ ನಾಯಿ’,‘ನೀಲಿ ನೀರಿನ ಮೇಲೆ’ ಪ್ರಸಿದ್ಧ ಕಥಾಸಂಕಲನ. ತೆಲುಗಿನ ವಿಶ್ವನಾಥ ಸತ್ಯನಾರಾಯಣ, ಚಲಂ ಸೇರಿ ಖ್ಯಾತ ಸಾಹಿತಿಗಳ ಹಲವು ಕೃತಿಗಳನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ.
‘ಪ್ರಜಾವಾಣಿ’ ದೀಪಾವಳಿಕಥಾಸ್ಪರ್ಧೆಯಲ್ಲಿ ಮೂರು ಬಾರಿ ಬಹುಮಾನ ಪಡೆದಿದ್ದರು. ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೂ ಭಾಜನರಾಗಿದ್ದರು. ವಿದ್ಯಾರಣ್ಯಪುರಂ ರುದ್ರಭೂಮಿಯಲ್ಲಿ ಗುರುವಾರ ಅಂತ್ಯಕ್ರಿಯೆ ನೆರವೇರಲಿದೆ.