ಬಸವಾಪಟ್ಟಣ: ಇಲ್ಲಿನ ಕೃಷಿ ಪತ್ತಿನ ಸಹಕಾರ ಸಂಘದಿಂದ ಪ್ರಸಕ್ತ ವರ್ಷ 402 ಮಂದಿ ರೈತರಿಗೆ ₹ 1.97 ಕೋಟಿ ಕೃಷಿ ಸಾಲ ನೀಡಲಾಗಿದೆ ಎಂದು ಸಂಘದ ಅಧ್ಯಕ್ಷ ಬಿ.ಜಿ.ಹಾಲನಗೌಡ ಹೇಳಿದರು. ಗುರುವಾರ ಸಂಘದ ಆವರಣದಲ್ಲಿ ನಡೆದ ಸರ್ವ ಸದಸ್ಯರ ಮಹಾಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸಂಘದಲ್ಲಿ ಈಗ 2,085 ಸದಸ್ಯರಿದ್ದು, ₹ 27.43 ಲಕ್ಷ ಳ ಷೇರುಹಣ ಸಂಗ್ರಹವಾಗಿದೆ. ಸರ್ಕಾರದ ಆದೇಶದಂತೆ ರೈತರ ಕೃಷಿ ಸಾಲದಲ್ಲಿ ₹ 1.45 ಕೋಟಿ ಸಾಲವನ್ನು ಮನ್ನಾ ಮಾಡಲಾಗಿದ್ದು, ಈ ಹಣವನ್ನು ಶೀಘ್ರ ಸರ್ಕಾರ ಸಹಕಾರ ಸಂಘಕ್ಕೆ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.
ಸಂಘದ ಉಪಾಧ್ಯಕ್ಷ ಕುಬೇರನಾಯ್ಕ ಮಾತನಾಡಿ, ‘ ಸಂಘದ ವತಿಯಿಂದ ನಿರ್ಮಿಸಲು ಉದ್ದೇಶಿಸಿರುವ ಉಗ್ರಾಣಕ್ಕೆ ಹಣವನ್ನು ಮಂಜೂರು ಮಾಡಬೇಕು’ ಎಂದು ಆಗ್ರಹಿಸಿದರು.
ಸಭೆಯಲ್ಲಿ ಸಂಘದ ನಿರ್ದೇಶಕರಾದ ಎಸ್.ಲೋಕಪ್ಪ, ಬಿ.ಜಿ.ರುದ್ರೇಶ್, ಪಿ.ನೂರ್ಅಹಮದ್, ಎಚ್.ಟಿ.ಶಶಿಕಲಾ ,ಸೈಯದ್ ಜಾಕೀರ್ ಹಾಜರಿದ್ದರು. ಟಿ.ಲಕ್ಷ್ಮೀಪತಿ ಸ್ವಾಗತಿಸಿದರು. ಕೆ.ಎಂ.ಕರಿಬಸಯ್ಯ ವಂದಿಸಿದರು.