ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಚಾರಿಕತೆ ಮತ್ತು ಸಮಾಜ: ಗ್ರಹಿಕೆಯ ಸವಾಲುಗಳು

Last Updated 12 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ
ADVERTISEMENT

ಗೌರಿ ಲಂಕೇಶ್ ಅವರ ಬರ್ಬರ ಕೊಲೆಯ ಹಿಂದಿರಬಹುದಾದ ಉದ್ದೇಶವನ್ನು ವಿಶ್ಲೇಷಿಸಲು ಈ ಲೇಖನದಲ್ಲಿ ಪ್ರಯತ್ನಿಸಿದ್ದೇನೆ. ಇದನ್ನೊಂದು ರಾಜಕೀಯ ಹತ್ಯೆ ಹಾಗೂ ತಾತ್ವಿಕ ಭಿನ್ನಾಭಿಪ್ರಾಯದ ಕಾರಣಕ್ಕೆ ನಡೆದ ಕೊಲೆ ಎಂದು ನೋಡಲಾಗಿದೆ.

ಈ ಹಿನ್ನೆಲೆಯಲ್ಲಿ ಸಮಾಜ ಮತ್ತು ವೈಚಾರಿಕತೆಗಳ ನಡುವಣ ತಿಕ್ಕಾಟಗಳು, ವಿರೋಧಗಳು ಹಾಗೂ ಕಾರಣಗಳ ಸ್ವರೂಪವನ್ನು ಕುರಿತು ಯೋಚಿಸುವುದು ಇವತ್ತಿನ ಅಗತ್ಯವಾಗಿದೆ. ಏಕೆಂದರೆ, ಎರಡು ವರ್ಷಗಳ ಹಿಂದೆ ಎಂ.ಎಂ. ಕಲಬುರ್ಗಿ ಅವರನ್ನೂ ಹೀಗೆಯೇ ಕೊಲೆ ಮಾಡಲಾಗಿತ್ತು. ಆದರೆ ಅವರ ಕೊಲೆಗೆ ಬೇರೆ ಬೇರೆ ಕಾರಣಗಳಿರಬಹುದು ಎಂದು ಉಹಾಪೋಹ ಹರಿಬಿಡಲಾಗಿತ್ತು. ಗೌರಿಯವರ ಕೊಲೆ ಪ್ರಕರಣದಲ್ಲಿ ಇಂತಹ ಸಂಶಯಕ್ಕೆ ಯಾವುದೇ ಕಾರಣ ಇಲ್ಲ. ಕಲಬುರ್ಗಿ ಮತ್ತು ಗೌರಿಯವರ ಕೊಲೆಗಳನ್ನು ಸೂಕ್ಷ್ಮವಾಗಿ ನೋಡಿದರೆ ಇವೆರಡರ ಹಿಂದಿನ ಉದ್ದೇಶ ಒಂದೇ ಎನ್ನುವುದು ಈಗ ಸ್ಪಷ್ಟವಾಗಿ ಕಾಣುತ್ತಿದೆ.

ಪ್ರಜಾಸತ್ತಾತ್ಮಕ, ಜಾತ್ಯತೀತ ಹಾಗೂ ಬಹುತ್ವದಿಂದ ಕೂಡಿದ ಭಾರತದಲ್ಲಿ ಜಾತಿ, ಧರ್ಮಗಳ ಮೇಲಾಟ; ಊಳಿಗಮಾನ್ಯ ಮನೋಧರ್ಮ ಹಾಗೂ ಮೂಲಭೂತವಾದದ ಕ್ರೌರ್ಯ ಇಂದಿಗೂ ಅತ್ಯಂತ ಪ್ರಬಲವಾಗಿ ನೆಲೆನಿಂತಿದೆ. ವೈಚಾರಿಕತೆ, ತಾತ್ವಿಕತೆ, ಸಮಾನತೆ, ಸಾಮಾಜಿಕ ನ್ಯಾಯ, ಜಾತ್ಯತೀತತೆಯಂಥ ಮೌಲ್ಯಗಳನ್ನು ನೆಲೆಗೊಳಿಸಲು ಪ್ರಾಣವನ್ನು ಪಣಕ್ಕಿಡಬೇಕಾದ ಹೀನಸ್ಥಿತಿ ಕರ್ನಾಟಕಕ್ಕೆ ಬಂದೊದಗಿದೆ. ಸಾಮಾಜಿಕ ಅನಿಷ್ಟಗಳ ವಿರುದ್ಧ ಹೋರಾಡುವ ವಿಚಾರವಂತರನ್ನು ಖಳನಾಯಕರಂತೆ ಬಿಂಬಿಸುವ ಹುನ್ನಾರಗಳು ನಡೆಯುತ್ತಿವೆ. ಅಂದರೆ ಸಮೂಹಗಳ ಪರವಾಗಿ ಧ್ವನಿಯೆತ್ತುವ ಕ್ರಮವನ್ನೇ ‘ದೇಶ ದ್ರೋಹದ’ದ ಕ್ರಿಯೆಯನ್ನಾಗಿ ರೂಪಿಸಲಾಗುತ್ತಿದೆ.

ಭಾರತದ ನಾಗರಿಕತೆಗೆ ಹಲವು ಸಹಸ್ರಮಾನಗಳ ಚರಿತ್ರೆಯಿದೆ ಎಂದು ಬೀಗುವ ನಾವು, ಅಮಾನುಷ ಧೋರಣೆ, ಕ್ರೌರ್ಯಕ್ಕೂ ಅಷ್ಟೇ ಸುದೀರ್ಘ ಚರಿತ್ರೆಯಿದೆ ಎಂಬುದನ್ನು ಒಪ್ಪುವುದಕ್ಕೆ ತಯಾರಿಲ್ಲ. ಏಕೆಂದರೆ ವೇದ, ಉಪನಿಷತ್ತು, ಪುರಾಣಗಳನ್ನು ಅತ್ಯಂತ ಪ್ರಾಚೀನ ಕಾಲದಿಂದಲೂ ನಮ್ಮ ಸ್ಮೃತಿಗಳಲ್ಲೇ ಕಾಪಿಟ್ಟುಕೊಂಡು ಬಂದಿದ್ದೇವೆ ಹಾಗೂ ವಿಶ್ವದ ಎಷ್ಟೋ ದೇಶಗಳಲ್ಲಿ ನಾಗರಿಕತೆ ವಿಕಸನಗೊಳ್ಳುವ ಮೊದಲೇ ಭಾರತ ವೈಚಾರಿಕ, ಶಾಸ್ತ್ರೀಯ ಹಾಗೂ ಪೌರಾಣಿಕ ಪರಂಪರೆಗಳನ್ನು ಹೊಂದಿತ್ತು ಎಂಬ ಅಪ್ಪಟ ನಂಬಿಕೆಯನ್ನು ಬೆಳೆಸಿಕೊಂಡಿದ್ದೇವೆ. ಹಾಗಾದರೆ ವೈಚಾರಿಕತೆಯನ್ನು ಎಲ್ಲಿ, ಯಾವಾಗ ಕಳೆದುಕೊಂಡೆವು? ಇಲ್ಲವೇ ನಾಗರಿಕತೆ, ಪೌರಾಣಿಕ ಹಾಗೂ ಶಾಸ್ತ್ರೀಯ ಅಧ್ಯಯನ ಶಿಸ್ತುಗಳ ಪರಂಪರೆಗಳನ್ನು ಹೊಂದುವುದೆಂದರೆ, ವೈಚಾರಿಕ ಮತ್ತು ತಾತ್ವಿಕ ನಿಲುವುಗಳನ್ನು ಕೈಬಿಟ್ಟು, ಜನವಿರೋಧಿ ನಿಲುವುಗಳನ್ನು ತಾಳುವುದೇ?

ಮನುಷ್ಯ ಪ್ರೀತಿ, ಸಹಜೀವನ ಮೊದಲಾದ ಮೌಲ್ಯಗಳನ್ನು ರೂಪಿಸಿಕೊಳ್ಳುವುದಕ್ಕೆ ಬೇಕಾಗಿರುವ ಸಾಮಾಜಿಕ-ರಾಜಕೀಯ ರಾಚನಿಕ ಹೊಂದಾಣಿಕೆಯನ್ನು ವೈಚಾರಿಕತೆ ಎಂದು ಕರೆಯೋಣ. ಬುದ್ಧ, ಬಸವ, ಗುರುನಾನಕ್, ಮುಹಮ್ಮದ್, ಕಬೀರ್, ಕನಕದಾಸ, ನಾರಾಯಣ ಗುರು, ಮಾರ್ಕ್ಸ್‌್, ಅಂಬೇಡ್ಕರ್, ಗಾಂಧಿ, ಕುವೆಂಪು ಮೊದಲಾದವರನ್ನು ಚಿಂತಕರು, ವಿಚಾರವಂತರು, ಮಹರ್ಷಿಗಳು ಎಂಬೆಲ್ಲ ಹೆಸರುಗಳಿಂದ ಗುರುತಿಸುತ್ತೇವೆ. ಇಂತಹ ಹೆಸರುಗಳಿಂದ ಗುರುತಿಸುವುದಕ್ಕೆ ಇರುವ ಆಧಾರಗಳೇ ವಿಚಾರ, ವಿವೇಕ ಮತ್ತು ವೈಚಾರಿಕ ವಿನ್ಯಾಸಗಳಾಗಿರುತ್ತವೆ. ಅಂದರೆ ವ್ಯಕ್ತಿ ನೆಲೆಯಿಂದ ಸಾಮುದಾಯಿಕ ನೆಲೆಗಿನ ಪಯಣದಿಂದಲೇ ನಾಗರಿಕ ಸಮೂಹ ಸೃಷ್ಟಿಯಾಗಿದೆ.

ಸಾಮಾಜಿಕ ಮತ್ತು ರಾಜಕೀಯ ಪ್ರಜ್ಞೆಗಳ ನಡುವಣ ಅಂತರಗಳನ್ನು ಇವತ್ತಿಗೂ ನಮ್ಮಿಂದ ಅರಿತುಕೊಳ್ಳಲು ಸಾಧ್ಯವಾಗಿಲ್ಲ. ಯುರೋಪಿನ ಕಲ್ಪನೆಗಳಾದ ಸೊಸೈಟಿ, ಸಿವಿಕ್ ಸೊಸೈಟಿ, ಸಾವರ್ನಿಟಿ ಹಾಗೂ ಡೆಮಾಕ್ರಸಿಯನ್ನು ಕೇವಲ ಮಂತ್ರಗಳನ್ನಾಗಿ ಜಪಿಸುತ್ತಿದ್ದೇವೆ. ಅದೇ ಪ್ರಕಾರ, ರ್‍್ಯಾಷನಾಲಿಟಿ, ಫಿಲಾಸಫಿಕಲ್ ಮುಂತಾದ ಪದಗಳಿಗೆ ಪರ್ಯಾಯವಾಗಿ ವೈಚಾರಿಕ ಹಾಗೂ ತಾತ್ವಿಕ ಎಂಬ ಸಮಾನ ಪದಗಳನ್ನು ಮಾತ್ರ ಬಳಸಲಾಗುತ್ತದೆ. ಆಯಾ ಪದದಲ್ಲಿ ಗ್ರಹೀತವಾಗಿರುವ ವಿಚಾರ, ವಿವೇಕ ಇಲ್ಲವೇ ಅರಿವಿನ ವಿನ್ಯಾಸಗಳನ್ನು ಕೈಬಿಟ್ಟು ಪದಗಳ ಬೆನ್ನುಹತ್ತಿದ್ದೇವೆ. ವಚನಕಾರರು, ಭಕ್ತಿ ಪರಂಪರೆಯವರು, ತತ್ವಪದಕಾರರು ಮತ್ತು ಮಹರ್ಷಿಗಳು ನಡೆ-ನುಡಿಗಳ ಲಯವನ್ನು ಮರುಹೊಂದಿಸುವ ಪ್ರಯತ್ನವನ್ನು ಮಾಡಿದರು. ಇದರ ಮೂಲಕ ಸಾಮುದಾಯಿಕ ಪ್ರಜ್ಞೆ, ವಿವೇಕ, ಎಚ್ಚರ ಹಾಗೂ ತಾತ್ವಿಕ ಪರಂಪರೆಗಳನ್ನು ಕಟ್ಟುವ ದಾರಿಯನ್ನು ತುಳಿದರು.

ಆಧುನಿಕ ಭಾರತ ನಿರ್ಮಾಣದ ಸಂದರ್ಭದಲ್ಲಿ ಗಾಂಧಿ, ಅಂಬೇಡ್ಕರ್ ಹಾಗೂ ಲೋಹಿಯಾ ಭಾರತಕ್ಕೆ ಬೇಕಾದ ವೈಚಾರಿಕ ದಾರಿಗಳನ್ನು ಕಂಡುಕೊಳ್ಳಲು ಯುರೋಪಿನ ಪದಗಳಿಗೆ ಸೀಮಿತವಾಗಿ ಉಳಿಯಲಿಲ್ಲ. ಸಮೂಹಗಳ ಏಳ್ಗೆಯನ್ನು ಬಯಸಿದ ದಾರ್ಶನಿಕರು, ಮಹರ್ಷಿಗಳು ಹಾಗೂ ಪುರಾಣಗಳನ್ನು ಅವರು ಬಳಸಿಕೊಂಡರು.

ಗಾಂಧಿಯವರ ಅಹಿಂಸೆ, ಸತ್ಯ, ರಾಮರಾಜ್ಯದ ಕಲ್ಪನೆಯು ಪುರಾಣದಿಂದಲೂ ಅಂಬೇಡ್ಕರ್ ಅವರ ಸಮಾನತೆ, ಸ್ವಾತಂತ್ರ್ಯ ಹಾಗೂ ಸಹೋದರತ್ವದಂತಹ ಕಲ್ಪನೆಗಳು ಬುದ್ಧನಿಂದಲೂ ಬಂದವು. ಗಾಂಧಿಯವರ ಧಾರ್ಮಿಕ ಕಲ್ಪನೆ ಪ್ರತಿಗಾಮಿಯಾಗದೆ, ಸಾಮರಸ್ಯವನ್ನು ಬೆಳೆಸುವ ಸಾಮಾಜಿಕ ಕ್ರಿಯೆಯಾಗಿತ್ತು. ಸಾಮಾಜಿಕ, ಸಾಂಸ್ಕೃತಿಕ ವೈವಿಧ್ಯವನ್ನು ಒಪ್ಪಿ ಸಹಬಾಳ್ವೆಯನ್ನು ನಡೆಸುವುದಕ್ಕೆ ಬೇಕಾದ ಸಹಜವಾದ ಮಾರ್ಗಗಳನ್ನು ಅಂಬೇಡ್ಕರ್ ಮತ್ತು ಗಾಂಧಿಯವರಲ್ಲಿ ಕಾಣುತ್ತೇವೆ. ಆದಾಗ್ಯೂ ಇವರಿಬ್ಬರ ವೈಚಾರಿಕ ನಿಲುವುಗಳಲ್ಲಿ ಬಹಳಷ್ಟು ತಾತ್ವಿಕ ಭಿನ್ನಾಭಿಪ್ರಾಯಗಳಿದ್ದವು ಎಂಬುದು ಗಮನಾರ್ಹ.

ಹಿಂದುತ್ವ ತಾತ್ವಿಕತೆಯು ತನ್ನ ರಾಜಕಾರಣದ ಭಾಗವಾಗಿ ರಾಷ್ಟ್ರಭಕ್ತಿ, ಧರ್ಮ, ಗೋವಿನ ಬಗೆಗಿನ ನಂಬಿಕೆಗಳು ಇತ್ಯಾದಿ ಸಂಗತಿಗಳನ್ನು ರೂಪಿಸುವಾಗ ಭಾರತದ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ವೈವಿಧ್ಯಗಳನ್ನು ಮರೆಮಾಚುತ್ತದೆ. ಒಂದು ಪಂಗಡದ ನಂಬಿಕೆ ಮತ್ತು ಧೋರಣೆಗಳಿಗೆ ಮಾತ್ರ ಪೂರಕವಾಗಿ ಇವುಗಳನ್ನು ವಿನ್ಯಾಸಗೊಳಿಸಲಾಗಿದೆ. ಈ ಪಂಗಡದವರು ಆಚರಿಸುವ ಅಸ್ಪೃಶ್ಯತೆ, ಧಾರ್ಮಿಕ ಮೂಲಭೂತವಾದ, ಜಾತಿ ತಾರತಮ್ಯ ಯಾವತ್ತಿಗೂ ಅವೈಚಾರಿಕ, ಅವೈಜ್ಞಾನಿಕ, ಅಮಾನವೀಯ ವಿದ್ಯಮಾನಗಳಾಗಿ ಇವರಿಗೆ ಕಾಣಲಿಲ್ಲ. ಬದಲಾಗಿ ಇವುಗಳನ್ನು ವಿರೋಧಿಸುವ ಹಾಗೂ ಸಾಮಾಜಿಕ ಬಾಂಧವ್ಯ ಮತ್ತು ಸೌಹಾರ್ದವನ್ನು ಬಯಸುವವರನ್ನು ಅಂದರೆ ವಾಸ್ತವದಲ್ಲಿ ವೈಚಾರಿಕ, ಪ್ರಗತಿಪರ, ಎಡಪಂಥೀಯ ನಿಲುವುಗಳನ್ನು ಹೊಂದಿದವರನ್ನು ದೇಶ ದ್ರೋಹಿಗಳು, ಸಮಾಜ ವಿರೋಧಿಗಳು ಎಂದಾಗಿ ಬಿಂಬಿಸುವ ಮೂಲಕ ಜನಸಾಮಾನ್ಯರಲ್ಲಿ ಅವರ ಬಗ್ಗೆ ಅಪನಂಬಿಕೆ ಸೃಷ್ಟಿಸಲಾಗುತ್ತಿದೆ.

ಇದೇ ರಾಜಕೀಯ-ಧಾರ್ಮಿಕ ಹುನ್ನಾರಕ್ಕೆ ಕಲಬುರ್ಗಿ ಮತ್ತು ಗೌರಿ ಬಲಿಯಾಗಿದ್ದಾರೆ. ಹೊಸ ಭಾರತದ ನಿರ್ಮಾಣದ ಸನ್ನಿವೇಶದಲ್ಲಿ ಯಾವ ತಾತ್ವಿಕತೆ ಮತ್ತು ವೈಚಾರಿಕತೆಯನ್ನು ಗಾಂಧಿ, ಅಂಬೇಡ್ಕರ್, ನೆಹರೂ ಹಾಗೂ ಲೋಹಿಯಾ ಅವರು ನೆಲೆಗೊಳಿಸಲು ಹಂಬಲಿಸಿದರೋ, ಅವುಗಳನ್ನು ಗಾಳಿಗೆ ತೂರಲಾಗಿದೆ. ಸಹಸ್ರಮಾನಗಳಿಂದ ಗಳಿಸಿಕೊಂಡು ಬಂದಿದ್ದ ಬುದ್ಧನ ಜೀವಕಾರುಣ್ಯ, ಬಸವಣ್ಣನ ಮಾನವ ಪ್ರೀತಿ, ಗಾಂಧಿಯವರ ಅಹಿಂಸೆ ಮತ್ತು ಸತ್ಯದ ಕಲ್ಪನೆ ಹಾಗೂ ಅಂಬೇಡ್ಕರ್ ಅವರ ಸಮಾನತೆ, ಸ್ವಾತಂತ್ರ್ಯ ಮತ್ತು ಸಹೋದರತ್ವದ ಕಲ್ಪನೆಗಳನ್ನು ನಾಶ ಮಾಡುವ ಹುನ್ನಾರಗಳು ನಡೆಯುತ್ತಿವೆ. ಗಾಂಧಿಯವರ ಹತ್ಯೆಯಿಂದ ಶುರುವಾಗಿ ಕಲಬುರ್ಗಿ ಹಾಗೂ ಗೌರಿ ಅವರ ಹತ್ಯೆಯವರೆಗಿನ ಎಲ್ಲವೂ ಈ ಹುನ್ನಾರದ ಭಾಗವಾಗಿಯೇ ನಡೆದಿವೆ.

ನಮ್ಮ ವಿಚಾರ, ಪರಂಪರೆಗಳು ಸಾಮಾಜಿಕ ವಿವೇಕದ ಚೌಕಟ್ಟುಗಳಾಗಿ ನೆಲೆಗೊಂಡರೆ ಮಾತ್ರ ವೈಚಾರಿಕ ಕ್ರಾಂತಿಗಳು ನಡೆಯುತ್ತವೆ. ಇಲ್ಲವಾದರೆ ಹಿಂದುತ್ವ ರಾಜಕಾರಣದ ಹುನ್ನಾರದಿಂದ ಸಮೂಹ ಸಮೂಹಗಳೇ ನಾಶವಾಗುತ್ತವೆ. ಈ ಆಪತ್ತಿನಿಂದ ಪಾರಾಗುವುದು ಹೇಗೆ?

ಸಾಫೊಕ್ಲಿಸ್‌ನ ದೊರೆ ಈಡಿಪಸ್ ನಾಟಕದ ಟೈರೀಸಿಯಸ್ ಪಾತ್ರದ ಮಾತೊಂದು ಈಗ ನೆನಪಾಗುತ್ತಿದೆ. ಅದೇನೆಂದರೆ, ‘ಓ, ಜ್ಞಾನವೆಂಬುದು ಎಷ್ಟು ಭಯಂಕರ, ಅದರಿಂದ ಉಪಯೋಗವಿಲ್ಲದಿದ್ದಾಗ! ಇದನ್ನು ಅರಿತಿದ್ದ ನಾನು ಯಾಕೆ ಮರೆತೆ? ಯಾಕಾದರೂ ಇಲ್ಲಿಗೆ ಬಂದೆ?’ ವಿಚಾರವಂತರು ಹೀಗೆ ಪಶ್ಚಾತಾಪ ಪಡುವ ಬಿಕ್ಕಟ್ಟಿಗೆ ಸಿಲುಕಿದ್ದಾರೆ. ಈ ಬಿಕ್ಕಟ್ಟಿನಿಂದ ಹೊರಬರುವ ದಾರಿಗಾಗಿ ಕಾಯಬೇಕಿಲ್ಲ. ಬದಲಾಗಿ ಅವುಗಳನ್ನು ಪುನಃ ಹುಡುಕಿಕೊಳ್ಳಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT