ಕನಕಗಿರಿ: ಇಲ್ಲಿನ ಐತಿಹಾಸಿಕ ಪ್ರಸಿದ್ಧಿ ಕನಕಾಚಲಪತಿ ದೇವಸ್ಥಾನದ ಮುಂದೆ ಹಾಲುಗಂಬ ಉತ್ಸವ ಗುರುವಾರ ರಾತ್ರಿ ವಿಜೃಂಭಣೆಯಿಂದ ನಡೆಯಿತು. ಈ ಭಾಗದಲ್ಲಿ ವಿಶಿಷ್ಟವಾಗಿ ನಡೆಯುವ ಹಾಲುಗಂಬ ಉತ್ಸವ ನೋಡಲು ಸಾವಿರಾರು ಜನ ದೇವಸ್ಥಾನದ ಆವರಣದಲ್ಲಿ ಸೇರಿದ್ದರು. ಅರ್ಚಕ ಮನೆತನವರು ವಿವಿಧ ಧಾರ್ಮಿಕ ವಿಧಿ ವಿಧಾನ ನಡೆಸಿದರು.
ಕನಕಗಿರಿ ಸೇರಿದಂತೆ ಗುಡದೂರು, ಕರಡಿಗುಡ್ಡ, ಚಿಕ್ಕ ಮಾದಿನಾಳ, ಹಿರೇಮಾದಿನಾಳ, ಬಂಕಾಪುರ, ಕೆ. ಮಲ್ಲಾಪುರ, ಒಳಗೊಂಡಂತೆ ಅನೇಕ ಗ್ರಾಮದ ಗೊಲ್ಲ ಜನಾಂಗದವರಿಂದ ಆಚರಿಸುವ ಈ ಉತ್ಸವ ಬಹು ಜನರ ಮನಸೊರೆಗೊಂಡಿತು.
ಇದಕ್ಕೂ ಪೂರ್ವದಲ್ಲಿ ಗೊಲ್ಲರು ಐದು ದಿನಗಳ ಕಾಲ ತಾವು ಸಂಗ್ರಹಿಸಿಟ್ಟಿದ್ದ ಹಾಲು, ಮೊಸರು, ತುಪ್ಪವನ್ನು ಮಡಿಕೆಯಲ್ಲಿ ತುಂಬಿಕೊಂಡು ಹನುಮಪ್ಪ ದೇವಸ್ಥಾನದಿಂದ ಮೆರವಣಿಗೆ ಮೂಲಕ ಕನಕಾಚಲಪತಿ ದೇವಸ್ಥಾನದವರೆಗೆ ಬಂದರು.
ಬೃಹತ್ ಕಂಬಕ್ಕೆ ಜಿಡ್ಡು ತರುವ ಹಾಗೂ ಹೈನು ಪದಾರ್ಥಗಳನ್ನು ಲೇಪಿಸಿದ್ದು ಕಂಬ ಮೇಲೆ ಕುಳಿತ ವ್ಯಕ್ತಿಯೊಬ್ಬರು ಹಾಲು, ಮೊಸರು ಕಂಬಕ್ಕೆ ಸುರಿದಾಗ ಕಂಬದ ತುದಿ ತಲುಪಿದಾಗ ಗೊಲ್ಲ ಸಮುದಾಯದ ಯುವಕರು ಹರಸಾಹಸ ಮಾಡಿ ಕೊನೆಗೆ ಜಾರಿ ಕೆಳಗೆ ಬೀಳುತ್ತಿರುವುದನ್ನು ಕಂಡು ನೆರೆದ ಜನತೆ ನಗೆಗಡಲಲ್ಲಿ ತೇಲಿದರು. ಹಗ್ಗದ ಸಹಾಯ ಪಡೆದು ಕಂಬ ಏರಿದರು.