ಅಜ್ಜಂಪುರ: ಶಿವನಿ-ದಾಸರಹಟ್ಟಿ ನಡುವಿನ 9.6 ಕಿಮೀ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಜಿ.ಎಚ್.ಶ್ರೀನಿವಾಸ್ ಮಂಗಳವಾರ ಭೂಮಿಪೂಜೆ ನೆರವೇರಿಸಿದರು.
ನಂತರ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ 206 ಕಡೂರು ಮತ್ತು ಎನ್ಎಚ್ –13 ಹೊಳಲ್ಕೆರೆ ಸಂಪರ್ಕಿಸುವ ಶಿವನಿ-ದಾಸರಹಟ್ಟಿ ನಡುವಿನ ರಸ್ತೆ ಅಭಿವೃದ್ಧಿ ಪಡಿಸುವ ಕಾಮಗಾರಿ, ಕಡೂರು-ಚಿತ್ರದುರ್ಗ ನಡುವೆ ಸಂಚರಿಸುವ ವಾಹನಗಳ ಸುಗಮ ಸಂಚಾರಕ್ಕೆ ನೆರವಾಗಲಿದೆ.
ಜತೆಗೆ ಸ್ಥಳೀಯ ಶಿವನಿ, ದಂದೂರು, ತ್ಯಾಗದಕಟ್ಟೆ, ಕಲ್ಲೇನಹಳ್ಳಿ, ಜಿಜೆ ಕಟ್ಟೆ, ಭಕ್ತನಕಟ್ಟೆ, ದಾಸರಹಟ್ಟಿ, ರಂಗಾಪುರ ಗ್ರಾಮಸ್ಥರಿಗೂ ಹೆಚ್ಚಿನ ಅನುಕೂಲವಾಗಲಿದೆ’ ಎಂದು ತಿಳಿಸಿದರು.
ಕಾಮಗಾರಿಗೆ ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ₹7.50 ಕೋಟಿ ಹಾಗೂ ರಸ್ತೆ ನಿರ್ವಹಣೆಗೆ ₹1.5 ಕೋಟಿ ನೀಡಲಾಗಿದೆ. ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಂಡು, ನಿಗದಿತ ವೇಳೆಯೊಳಗೆ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಅವರು ಸೂಚಿಸಿದರು.
ತಾಲ್ಲೂಕು ಪಂಚಾಯಿತಿ ಸದಸ್ಯ ನಂಜುಂಡಪ್ಪ, ಶಿವನಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಾಜಪ್ಪ, ಸದಸ್ಯ ಕರಿಬಸಪ್ಪ, ಕುಮಾರಸ್ವಾಮಿ, ಪಿಡಬ್ಲ್ಯುಡಿ ಎಇ ಶಿವಯೋಗಿ, ಶ್ರೀನಿವಾಸ್ ಇದ್ದರು.